ಕೆಆರ್ಎಸ್ನಲ್ಲಿ ಭಾರಿ ಶಬ್ಧ : ಎದುರಾಗಿದೆ ಆತಂಕ
ಮಂಡ್ಯದ KRS ಡ್ಯಾಂನಲ್ಲಿ ಭಾರೀ ಶಬ್ದವೊಂದು ಕೇಳಿ ಬಂದಿದ್ದು ಇದರಿಂದ ಸ್ಥಳೀಯರಲ್ಲಿ ತೀವ್ರ ಆತಂಕ ಎದುರಾಗಿದೆ. ಈ ಶಬ್ಧ ಹಲವು ದಿನಗಳಿಂದಲೂ ಕೇಳುತ್ತಿದ್ದು ಮತ್ತಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಮಂಡ್ಯ [ಆ.17]: ಶ್ರೀರಂಗಪಟ್ಟಣದ ಕೆಆರ್ಎಸ್ ಅಣೆಕಟ್ಟೆಸುತ್ತಮುತ್ತ ಶುಕ್ರವಾರ ರಾತ್ರಿ ಭಾರಿ ಶಬ್ಧ ಕೇಳಿಬಂದಿದೆ. ಸಕ್ಕರೆ ಜಿಲ್ಲೆಯ ಜೀವನಾಡಿ ಕೆಆರ್ಎಸ್ಗೆ ಇದರಿಂದ ಆತಂಕ ಎದುರಾಗಿದೆ.
ಕಳೆದ ಎರಡು ವರ್ಷಗಳಿಂದ ನಿಗೂಢವಾಗಿ ಕೇಳಿ ಬರುತ್ತಿರುವ ಆ ಶಬ್ಧ ಇದಕ್ಕೆ ಪುಷ್ಟಿನೀಡುತ್ತಿದೆ. ಶುಕ್ರವಾರ ರಾತ್ರಿ ಕೇಳಿದ ಆ ನಿಗೂಢ ಶಬ್ಧಗಳು ರೈತರನ್ನು ಮತ್ತಷ್ಟು ಆತಂಕಕ್ಕೆ ಒಳಗಾಗಿಸಿದೆ.
ಶ್ರೀರಂಗಪಟ್ಟಣ ತಾಲೂಕು ಕೃಷ್ಣರಾಜ ಅಣೆಕಟ್ಟೆಸುತ್ತಮುತ್ತ ಮತ್ತೆ ಸರಣಿ ಶಬ್ದ ಕೇಳಿ ಬಂದಿದೆ. ಸುಮಾರು 5-7 ಸಲ ರಾತ್ರಿ ಸುಮಾರು 7.30ರ ಸಮಯದಲ್ಲಿ ಕೇಳಿ ಬಂದಿದೆ. ಆ ನಿಗೂಢ ಶಬ್ಧಗಳು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಕೆಆರ್ಎಸ್ ಸಂಪೂರ್ಣ ಭರ್ತಿ, ನಾಲೆಗೂ ನೀರು
ನಿಗೂಢ ಶಬ್ಧದ ಮೂಲ ಪತ್ತೆಯಾಗಿಲ್ಲ: ಭೂಸ್ಥರದಲ್ಲಿನ ಬದಲಾವಣೆಯೋ ಅಥವಾ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆ ಸ್ಫೋಟದಿಂದಲೇ ಈ ಶಬ್ದ ಬರುತ್ತಿರುವುದೋ ಎಂಬುದು ಇನ್ನೂ ಪತ್ತೆಯಾಗಿಲ್ಲ. ಕಳೆದ ವರ್ಷವಷ್ಟೇ ಭೂಮಾಪಕ ಕೇಂದ್ರದಲ್ಲಿ ಭೂಮಿ ಅದುರಿದ ಬಗ್ಗೆ ವರದಿ ನೀಡಲಾಗಿತ್ತು. ಆ ಕಂಪನ ಸಮೀಪ ನಡೆಯುತ್ತಿದ್ದ ಗಣಿಗಾರಿಕೆ ಸ್ಫೋಟಕದ್ದು ಎಂದು ಊಹೆ ಮಾಡಲಾಗಿತ್ತು.
ಆದರೆ ಕೆಲವು ಸ್ಥಳೀಯರು ಈ ಶಬ್ಧ ಗುಡುಗು- ಸಿಡಿಲಿನಿಂದ ಬಂದಿದೆ ಎಂದು ಹೇಳುತ್ತಿದ್ದಾರೆ.