ಪರಿಷ್ಕೃತ ಸಂಚಾರಿ ನೀತಿ ರಾಜ್ಯದಲ್ಲಿ ಜಾರಿಯಾಗಿದೆ. ಆದರೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಂಚರಿಸುತ್ತಿದ್ದ ಕಾರಿನ ಚಾಲಕ ನಿಯಮ ಉಲ್ಲಂಘಿಸಿದ್ರೂ ಪೊಲೀಸರು ಕಂಡೂ ಕಾಣದಂತೆ ವರ್ತಿಸಿದ್ದಾರೆ. ಹಾಗೆಯೇ ಯಾವುದೇ ದಂಡವನ್ನೂ ವಿಧಿಸಿಲ್ಲ.

ಉಡುಪಿ(ಸೆ.11): ರಸ್ತೆ ನಿಯಮಗಳನ್ನು ಉಲ್ಲಂಘಿಸಿದರೆ ದುಬಾರಿ ದಂಡ ವಿಧಿಸುವ ಪರಿಷ್ಕೃತ ಸಾರಿಗೆ ನೀತಿ ದೇಶದಾದ್ಯಂತ ಜಾರಿಗೊಂಡಿದೆ. ಪೊಲೀಸರು ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಜನಸಾಮಾನ್ಯರಿಂದ ನಿತ್ಯ ಲಕ್ಷಾಂತರ ರು. ದಂಡ ಸಂಗ್ರಹಿಸುತ್ತಿದ್ದಾರೆ.

Add Asianetnews Kannada as a Preferred SourcegooglePreferred

ಆದರೆ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿದ್ದ ವಾಹನ ಚಾಲಕ ರಸ್ತೆ ನಿಯಮವನ್ನು ಉಲ್ಲಂಘಿಸಿದರೂ ಪೊಲೀಸರು ಕಂಡು ಕಾಣದಂತಿದ್ದರು.

'ಮಗಳು ಸ್ಕೂಟಿ ಓಡಿಸ್ತಾಳೆ ಅಂತ ಬೀಗಬೇಡಿ'..!

ನಳಿನ್‌ ಕುಮಾರ್‌ ಕಟೀಲು ಅವರನ್ನು ಉಡುಪಿಯ ಜೋಡುಕಟ್ಟೆಯಿಂದ ಉಡುಪಿಯ ಶೇಷಶಯನ ಸಭಾಂಗಣದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಈ ಸಂದರ್ಭದಲ್ಲಿ ಅವರಿದ್ದ ವಾಹನದ ಚಾಲಕ ಸೀಟ್‌ ಬೆಲ್ಟ್‌ ಹಾಕಿರಲಿಲ್ಲ. ಮಾತ್ರವಲ್ಲ ಈ ಮೆರವಣಿಗೆಯಲ್ಲಿದ್ದ ಹತ್ತಾರು ಕಾರು ಚಾಲಕರೂ ಸೀಟ್‌ ಬೆಲ್ಟ್‌ ಧರಿಸಿರಲಿಲ್ಲ.

ಇಲ್ರಿ ಬಿಡ್ರಿ ಎಂದ್ರು ಪೊಲೀಸರು:

ಈ ಮೆರವಣಿಗೆಯ ಪ್ರಯುಕ್ತ ಬಂದೋಬಸ್ತಿಗಾಗಿ ಸಾಕಷ್ಟುಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು, ಠಾಣಾಧಿಕಾರಿಗಳೂ ಇದ್ದರು. ಅವರೆಲ್ಲರ ಎದುರಿನಲ್ಲಿಯೇ ಈ ರಸ್ತೆ ನಿಯಮ ಉಲ್ಲಂಘನೆಯಾಯಿತು. ಈ ಬಗ್ಗೆ ಮಾಧ್ಯಮದವರು ಕೇಳಿದಾಗ ಪೊಲೀಸರೊಬ್ಬರು ‘ಏ ಇರ್ಲಿ ಬಿಡ್ರಿ...’ ಎಂದು ಮುಂದಕ್ಕೆ ಹೋದರು.

ದಂಡ ಹೆಚ್ಚಾಯ್ತಾ? ಹಾಗಾದ್ರೆ ಸಂಚಾರ ನಿಯಮ ಪಾಲಿಸಿ: ಗಡ್ಕರಿ

ಈ ನಿಯಮದ ಬಗ್ಗೆ ಮಾಹಿತಿ ಇಲ್ಲದೆ ಉಲ್ಲಂಘಿಸುವ ಸಾಮಾನ್ಯ ವಾಹನ ಸವಾರರು ದಮ್ಮಯ್ಯ ಹಾಕಿದರೂ ಬಿಡದ ಪೊಲೀಸರು ದೊಡ್ಡವರ ವಾಹನ ನಿಯಮ ಉಲ್ಲಂಘಿಸಿದರೂ ಸುಮ್ಮನಿದ್ದ ಬಗ್ಗೆ ಫೋಟೋ ವಿಡಿಯೋಗಳು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿವೆ.