Asianet Suvarna News Asianet Suvarna News

ಚಿತ್ರ​ಮಂದಿ​ರಗಳು ಶಾಶ್ವತ ಬಂದ್‌: ಕಾರಣ..?

ಪರ್ಯಾಯ ಉದ್ಯಮ ಕಂಡು​ಕೊ​ಳ್ಳಲು ಚಿತ್ರ​ಮಂದಿರ ಮಾಲೀ​ಕರ ಚಿಂತ​ನೆ| ಮಾರ್ಚ್‌ನಿಂದ ಸಿನಿಮಾ ಮನೋರಂಜನೆಗೆ ಬ್ರೇಕ್‌ ನೀಡಿದ್ದ ಮಹಾಮಾರಿ ಕೊರೋನಾ| ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿ ಮುಚ್ಚುವ ಹಂತದಲ್ಲಿರುವ ಬಸವರಾಜ ಹಾಗೂ ಕುಸುಮಾ ಎಂಬ ಎರಡು ಚಿತ್ರ​ಮಂದಿ​ರ​ಗ​ಳು| 
 

Movie Theatres Permnent Shut Down in Harapanahalli in Ballari District grg
Author
Bengaluru, First Published Oct 17, 2020, 3:23 PM IST

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ(ಅ.17): ವಿಜ್ಞಾನ, ತಂತ್ರಜ್ಞಾನ ಮುಂದುವರಿದಂತೆ ಸಾಮಾಜಿಕ ಜಾಲತಾಣಗಳ ಚಟುವಟಿಕೆ ಚುರುಕುಗೊಂಡ ಹಿನ್ನೆಲೆಯಲ್ಲಿ ಚಿತ್ರ​ಮಂದಿ​ರಗಳಿಗೆ ಬಂದು ಸಿನಿಮಾ ನೋಡುವವರ ಸಂಖ್ಯೆ ಕಡಿಮೆಯಾಗುತ್ತ ಸಾಗಿತ್ತು. ಇಂತಹ ಪರಿಸ್ಥಿತಿ ಇರುವಾಗ, ಕಳೆದ ಮಾರ್ಚ್‌ನಿಂದ ಕೋವಿಡ್‌-19 ಆವರಿಸಿ ಸಿನಿಮಾ ಮನೋರಂಜನೆಗೆ ಬ್ರೇಕ್‌ ಬಿದ್ದಿತ್ತು.  ಪ್ರೇಕ್ಷಕರ ಕೊರತೆಯಿಂದ ಮೊದಲೇ ನಷ್ಟದಲ್ಲಿದ್ದ ಇಲ್ಲಿಯ ಚಿತ್ರ​ಮಂದಿ​ರ​ಗ​ಳ ಮಾಲೀಕರು ಇದೀಗ ಸರ್ಕಾರ ಅನುಮತಿ ನೀಡಿದರೂ ​ಚಿ​ತ್ರ​ಮಂದಿ​ರ​ಗ​ಳ​ನ್ನು ಆರಂಭ ಮಾಡದೆ ಶಾಶ್ವತವಾಗಿ ಬಂದ್‌ ಮಾಡಿ ಪರ್ಯಾಯ ಉದ್ಯಮ ಕಂಡುಕೊಳ್ಳಲು ಯೋಜನೆ ರೂಪಿಸಿದ್ದಾರೆ.

ಹರಪನಹಳ್ಳಿ ಪಟ್ಟಣದಲ್ಲಿ ಬಸವರಾಜ ಹಾಗೂ ಕುಸುಮಾ ಎಂಬ ಎರಡು ಚಿತ್ರ​ಮಂದಿ​ರ​ಗ​ಳು ಇದ್ದರೆ, ಕೆಲವು ವರ್ಷಗಳ ಹಿಂದೆ ತಾಲೂಕಿನ ಅರಸಿಕೇರಿ, ಉಚ್ಚಂಗಿದುರ್ಗ, ಹಲುವಾಗಲುಗಳಲ್ಲಿ ತಲಾ ಒಂದೊಂದು ಸಿನಿಮಾ ​ಮಂದಿ​ರ​ಗ​ಳು ಇದ್ದವು.

ದಿನಕಳೆದಂತೆ ಗ್ರಾಮೀಣ ಭಾಗದಲ್ಲಿದ್ದ ಮೂರು ಚಿತ್ರ​ಮಂದಿ​ರ​ಗ​ಳು ಬಂದ್‌ ಆದವು. ಹರಪನಹಳ್ಳಿ ಪಟ್ಟಣದಲ್ಲಿ ಮಾತ್ರ ಎರಡು ​ಚಿ​ತ್ರ​ಮಂದಿ​ರಗಳು ಉಳಿದುಕೊಂಡಿದ್ದವು. ಆದರೆ ಪ್ರೇಕ್ಷಕರ ಕೊರತೆ ಈ ಎರಡೂ ಚಿತ್ರ​ಮಂದಿ​ರಗಳನ್ನೂ ಕಾಡುತ್ತಿತ್ತು. ಸಾಕಷ್ಟು ಬಾರಿ ನಷ್ಟ ಆದ ಹಿನ್ನೆಲೆಯಲ್ಲಿ ಬಸವರಾಜ ಎಂಬ ಹೆಸರಿನ ಚಿತ್ರ​ಮಂದಿ​ರವನ್ನು ಕೋವಿಡ್‌ ಬರುವುದಕ್ಕಿಂತ ಪೂರ್ವದಲ್ಲಿಯೇ ಬಂದ್‌ ಮಾಡಲಾಗಿತ್ತು. ಕುಸುಮಾ ಎಂಬ ಒಂದೇ ಚಿತ್ರ​ಮಂದಿ​ರ ಹಾಗೂ ಹೀಗೂ ಸಾಗುತ್ತಿತ್ತು. ಆದರೆ ಕೋವಿಡ್‌ ಎಂಬ ಮಾರಿ ಆವರಿಸಿ ಈ ಚಿತ್ರ​ಮಂದಿ​ರ ಬಂದ್‌ ಮಾಡಿಸಿತ್ತು. ಇದೀಗ ಸರ್ಕಾರ ಚಿತ್ರ​ಮಂದಿ​ರಗಳನ್ನು ಕೋವಿಡ್‌ ನಿಯಮಗಳ ಪಾಲನೆ ಮೂಲಕ ಆರಂಭಿಸಲು ಅನುಮತಿ ನೀಡಿದ್ದರೂ ಇಲ್ಲಿಯ ಕುಸುಮಾ ಚಿತ್ರ​ಮಂದಿ​ರ ಶಾಶ್ವತ ಬಂದ್‌ ಮಾಡಲು ತೀರ್ಮಾನಿಸಿದ್ದಾರೆ.

6 ತಿಂಗಳು 2400 ಕೋಟಿ ಲಾಸು,ಥೇಟರುಗಳ ಕಾಳಜಿ ಸರ್ಕಾರಕ್ಕಿಲ್ಲ: ಕೆ ವಿ ಚಂದ್ರಶೇಖರ್‌

ವಿದ್ಯುತ್‌ ಬಿಲ್‌ ಹಾಗೂ ಪರವಾನಗಿ ಶುಲ್ಕದಲ್ಲಿ ರಿಯಾಯಿತಿ ಕೊಡಿ ಎಂದು ಸರ್ಕಾರಕ್ಕೆ ಕೇಳಿದ್ದೇವೆ ಎಂದು ಮಾಲೀಕರು ಹೇಳುತ್ತಾರೆ. ಇನ್ನು ಮುಂದೆ ಆಕಸ್ಮಾತ್‌ ಇಲ್ಲಿಯ ಯಾರಾದರೂ ಸಿನಿಮಾ ನೋಡಬೇಕೆಂದರೆ ಹತ್ತಿರದ ದಾವಣಗೆರೆ ಅಥವಾ ಬೇರೆ ನಗರಗಳಿಗೆ ಹೋಗಬೇಕಾಗುವುದು. ಕಳೆದ 70 ವರ್ಷಗಳಿಂದ ತಾಲೂಕಿನ ಜನತೆಗೆ ಮನೋರಂಜನೆ ನೀಡಿದ ಚಿತ್ರ​ಮಂದಿ​ರಗಳು ಇನ್ನು ಮುಂದೆ ನೆನಪು ಮಾತ್ರ.

ಇಂಟರ್‌ನೆಟ್‌ನಲ್ಲಿಯೇ ಎಲ್ಲವೂ ಸಿಗುವುದರಿಂದ ಪ್ರೇಕ್ಷಕರು ಚಿತ್ರ​ಮಂದಿ​ರ​ಕ್ಕೆ ಬರುವುದಿಲ್ಲ. ಆದ್ದರಿಂದ ಪ್ರತಿದಿನ ನಮಗೆ ಶೇ.75ರಷ್ಟುನಷ್ಟವಾಗುತ್ತಿತ್ತು. ಈಚೆಗೆ ಕೊರೋನಾ ಬಂದು ಇನ್ನಷ್ಟು ಹದಗೆಡಿಸಿತು. ಆದ್ದರಿಂದ ಈಗ ಮುಚ್ಚಿರುವ ಟಾಕೀಸುಗಳನ್ನು ಆರಂಭ ಮಾಡದೆ ಶಾಶ್ವತ ಬಂದ್‌ ಮಾಡಲು ತೀರ್ಮಾನಿಸಿದ್ದೇವೆ ಎಂದು ಹರಪನಹಳ್ಳಿಯ ಟಾಕೀಸು ಮಾಲೀಕ ಮುರ್ಕಲ್‌ ಚಂದ್ರಶೇಖರ ಅವರು ತಿಳಿಸಿದ್ದಾರೆ.  
 

Follow Us:
Download App:
  • android
  • ios