ಅತ್ತ ಶಾಲೆಯೂ ಇಲ್ಲದೇ ಇನ್ನೊಂದೆಡೆ ಹೊರಗೂ ಸುತ್ತಾಡಲಾಗದೇ ಮನೆಯಲ್ಲೇ ಬಾಕಿಯಾದ ಮಕ್ಕಳಿಗೆ ಲಾಕ್‌ಡೌನ್‌ ಅವಧಿಯುದ್ದಕ್ಕೂ ಮೊಬೈಲ್‌ನಲ್ಲೇ ಸಂಸ್ಕೃತಿ, ಸಂಸ್ಕಾರಕ್ಕೆ ಸಂಬಂಧಿಸಿದಂತೆ ಮೊಬೈಲ್‌ ಕ್ವಿಜ್‌ ಸಂಘಟಿಸುವ ಮೂಲಕ ಪುರೋಹಿತರೊರ್ವರು ಗಮನ ಸೆಳೆದಿದ್ದಾರೆ.

ಮೂಡುಬಿದಿರೆ(ಮೇ 22): ಅತ್ತ ಶಾಲೆಯೂ ಇಲ್ಲದೇ ಇನ್ನೊಂದೆಡೆ ಹೊರಗೂ ಸುತ್ತಾಡಲಾಗದೇ ಮನೆಯಲ್ಲೇ ಬಾಕಿಯಾದ ಮಕ್ಕಳಿಗೆ ಲಾಕ್‌ಡೌನ್‌ ಅವಧಿಯುದ್ದಕ್ಕೂ ಮೊಬೈಲ್‌ನಲ್ಲೇ ಸಂಸ್ಕೃತಿ, ಸಂಸ್ಕಾರಕ್ಕೆ ಸಂಬಂಧಿಸಿದಂತೆ ಮೊಬೈಲ್‌ ಕ್ವಿಜ್‌ ಸಂಘಟಿಸುವ ಮೂಲಕ ಪುರೋಹಿತರೊರ್ವರು ಗಮನ ಸೆಳೆದಿದ್ದಾರೆ.

Add Asianetnews Kannada as a Preferred SourcegooglePreferred

ಮೂಡುಬಿದಿರೆಯ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಅರ್ಚಕ ಪರಿವಾರದವರಾದ ಕೆ.ಪದ್ಮನಾಭ ಭಟ್‌ ಅವರ ಪುತ್ರ ಕೆ.ಸುಧೇಶ್‌ ಭಟ್‌, ಹತ್ತನೇ ತರಗತಿವರೆಗಿನ ಮಕ್ಕಳಿಗಾಗಿ ‘ವಿದ್ಯಾಕಲ್ಪತರು’ ಕ್ವಿಜ್‌ ನಡೆಸಿ ಮಕ್ಕಳ ಜತೆಗೆ ಮನೆಮಂದಿಯನ್ನೂ ಜ್ಞಾನಯಜ್ಞದಲ್ಲಿ ತೊಡಗಿಸಿಕೊಳ್ಳುವಲ್ಲಿ ಯಶ ಕಂಡಿದ್ದಾರೆ.

ಕ್ವಿಜ್‌ ನಡೆಸುವ ವಿಧಾನ

ಪ್ರತಿ ದಿನ ಸಂಜೆ 4.30ಕ್ಕೆ ವಿದ್ಯಾಕಲ್ಪತರು ವಾಟ್ಸಾಪ್‌ ಬಳಗದಲ್ಲಿ ಸುಧೇಶ್‌ ಭಟ್‌ ಕಳಿಸುವ ಪ್ರಶ್ನೆಗಳಿಗೆ ವಾಯ್‌್ಸ ಮೆಸೇಜ್‌ ಮೂಲಕ ಮಕ್ಕಳು ಉತ್ತರಿಸಬೇಕು. ಮೊದಲ ಸರಿ ಉತ್ತರಕ್ಕೆ ಅಂಕವಿದೆ. ಬರೋಬ್ಬರಿ ಒಂದೂವರೆ ಗಂಟೆ ನಡೆಯುವ ಪ್ರಶ್ನೋತ್ತರದಲ್ಲಿ ಉತ್ತರದ ಹುಡುಕಾಟದಲ್ಲಿ ಮಕ್ಕಳ ಸಿದ್ಧತೆ, ಬದ್ಧತೆ ಮತ್ತು ಉತ್ಸಾಹ ಎದ್ದುಕಾಣುತ್ತದೆ.

ಸಂಜೆ ವೇಳೆಗೆ ಮತ್ತೆ ದೇವರ ಸ್ತೋತ್ರ, ವಿಷಯವಾರು ಕಿರು ಭಾಷಣದ ಟಾಸ್ಕ್‌ಗಳು, ಕೊರೋನಾ ಸಹಿತ ಸಾಮಾಜಿಕ ಜಾಗೃತಿ ಮೂಡಿಸುವ ವಿಷಯಗಳ ಬಗ್ಗೆ ಒಂದೆರಡು ನಿಮಿಷಗಳಲ್ಲಿ ಮಕ್ಕಳು ತಮ್ಮ ಅನಿಸಿಕೆಯನ್ನು ಚಿತ್ರೀಕರಿಸಿ ಮೊಬೈಲ್‌ನಲ್ಲೇ ರವಾನಿಸಬೇಕು. ಸುಮಾರು 85 ಕುಟುಂಬಗಳ ಪುಟಾಣಿಗಳು ಸಂತೋಷದಿಂದ ಈ ಕ್ವಿಜ್‌ನಲ್ಲಿ ತೊಡಗಿಕೊಂಡಿದ್ದಾರೆ. ಪುಟಾಣಿಗಳ ಮನೆ ಮಂದಿಯೂ ಸಕ್ರಿಯರಾಗಿದ್ದಾರೆ.

1300ಕ್ಕೂ ಅಧಿಕ ಪ್ರಶ್ನೆ

ಲಾಕ್‌ಡೌನ್‌ ಆರಂಭವಾದಂದಿನಿಂದ ರಸಪ್ರಶ್ನೆ ಮೂಲಕ 1300ಕ್ಕೂ ಅಧಿಕ ಪ್ರಶ್ನೆಗಳಿಗೆ ಮಕ್ಕಳು ಈಗಾಗಲೇ ಉತ್ತರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಈಗ ಬೇಡಿಕೆ ಹೆಚ್ಚಿದ್ದು, ಗುಜರಾತ್‌, ಆಂಧ್ರ, ಮಹಾರಾಷ್ಟ್ರದ ಜತೆಗೆ ಕರ್ನಾಟಕದ ಮೂಲೆ ಮೂಲೆಯ ಉತ್ಸಾಹಿಗಳು ವಾಟ್ಸಾಪ್‌ ಗ್ರೂಪ್‌ ಮಾಡಿಕೊಂಡು ಪ್ರತಿ ದಿನ ಕ್ವಿಜ್‌ ನಡೆಸುತ್ತಾರೆ.