Asianet Suvarna News Asianet Suvarna News

Chikkamagaluru: ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಶಾಸಕ ಸಿಟಿ ರವಿ ಕುಣಿತ

ಕಾಫಿನಾಡಿನ 6 ಸ್ಥಳಗಳಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮನಡೆದರೆ, ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣಕ್ಕೆ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಇಂದು ಚಾಲನೆ ನೀಡಿದರು.

MLA CT Ravi dance in Koti Kanta Gayana at  Chikkamagaluru gow
Author
First Published Oct 28, 2022, 5:39 PM IST

ಚಿಕ್ಕಮಗಳೂರು (ಅ.28): ಕಾಫಿನಾಡಿನ 6 ಸ್ಥಳಗಳಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮನಡೆದರೆ, ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣಕ್ಕೆ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಇಂದು ಚಾಲನೆ ನೀಡಿದರು. ಕೋಟಿಕಂಠ ಗಾಯನದಲ್ಲಿ  ಐದು ಹಾಡುಗಳನ್ನು ಹಾಡಲಾಯಿತು. ಜಿಲ್ಲಾ ಕೇಂದ್ರವಾದ ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನ, ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನ, ಶೃಂಗೇರಿಯ ವಿದ್ಯಾಶಂಕರ ದೇವಾಲಯ ಆವರಣ, ಕಡೂರು ತಾಲೂಕು ಹಿರೇನಲ್ಲೂರಿನ ಹೇಮಗಿರಿಬೆಟ್ಟ, ತರೀಕೆರೆ ತಾಲೂಕಿನ ಅಮೃತಾಪುರದ ಅಮೃತೇಶ್ವರ ದೇವಾಲಯ ಆವರಣದಲ್ಲಿ ಹಾಡಲಾಯಿತು. ನಾಡಗೀತೆಯಾದ ಜಯಭಾರತ ಜನನಿಯ ತನುಜಾತೆ, ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು, ಬಾರಿಸುಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವವಿನೂತನ ವಿದ್ಯಾಚೇತನ, ವರನಟ ಡಾ.ರಾಜ್‌ಕುಮಾರ್ ಹಾಡಿರುವ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಈ ಐದು ಗೀತೆಗಳನ್ನು ಗಾಯಕರು ಮತ್ತು ವಿದ್ಯಾರ್ಥಿಗಳು ಹಾಡಿದರು. ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕ ಸಿ.ಟಿ.ರವಿ, ಸಫಾಯಿ ಕರ್ಮಚಾರಿ ನಿಗಮ ಅಧ್ಯಕ್ಷ ಕೆ.ಪಿ.ವೆಂಕಟೇಶ್, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಸಿಡಿಎ ಅಧ್ಯಕ್ಷ ಆನಂದ್, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾಪೊಲೀಸ್ ಮುಖ್ಯಾಧಿಕಾರಿ ಉಮಾಪ್ರಶಾಂತ್, ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಅಪರ ಜಿಲ್ಲಾಧಿಕಾರಿ ರೂಪ, ಉಪವಿಭಾಗಾಧಿಕಾರಿ ರಾಜೇಶ್, ತಹಸೀಲ್ದಾರ್ ವಿನಾಯಕ ಸಾಗರ್ ಸಮ್ಮುಖದಲ್ಲಿ ಗಾಯಕರುಗಳು ಕೋಟಿಕಂಠ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಸಂಕಲ್ಪ ವಿಧಿಬೋಧನೆ: ಕನ್ನಡ ನಾಡಿನ ಪ್ರಜೆಯಾಗಿ ನಾನು ನಾಡುನುಡಿಯನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ, ಕನ್ನಡದಲ್ಲೇ ಮಾತನಾಡುತ್ತೇನೆ, ಕನ್ನಡ ಬರೆಯುತ್ತೇನೆ, ಕನ್ನಡವನ್ನೆ ಬಳಸುತ್ತೇನೆ, ಕನ್ನಡ ನಾಡು, ನುಡಿ, ಸಂಸ್ಕೃತಿ ಪರಂಪರೆಯನ್ನು ಉಳಿಸಲು ಕಟಿಬದ್ಧನಾಗಿರುತ್ತೇನೆ. ಕನ್ನಡೇತರರಿಗೂ ಕನ್ನಡ ಕಲಿಸುತ್ತೇನೆಂದು ಸಂಕಲ್ಪ ತೊಡಲಾಯಿತು.

ಸುವರ್ಣ ಸೌಧದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಶಿಕಲಾ ಜೊಲ್ಲೆ

ಸ್ಟೆಪ್ಪು ಹಾಕಿದ  ಶಾಸಕ ರವಿ: ನಾದಬ್ರಹ್ಮ ಹಂಸಲೇಖಾ ರಚಿಸಿರುವ ವರನಟ ಡಾ.ರಾಜಕುಮಾರ್ ಹಾಡಿರುವ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿಗೆ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ.ರವಿ ಕುಣಿದರು. ಅಪ್ಪು ಅಭಿಮಾನಿ ಕಾಫಿನಾಡಿನ ಚಂದ್ರು ಹಾಡಿನ ನಟಿಸುವ ಮೂಲಕ ಶಾಸಕರ ಕುಣಿತಕ್ಕೆ ಸಾಥ್ ನೀಡಿದರು. ಈಹಾಡಿಗೆ ಹಾಕಿದ ಸ್ಟೆಪ್ ಸಾರ್ವಜನಿಕರ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಕಾಫಿನಾಡು ಚಂದುವನ್ನ ಅಭಿಮಾನದಿಂದ ವಿದ್ಯಾರ್ಥಿಗಳು ಮುತ್ತಿಕೊಂಡ್ರು. ವಿದ್ಯಾರ್ಥಿಗಳ ಅಭಿಮಾನಕ್ಕೆ ಚಂದು ಕಣ್ಣೀರಿಟ್ಟರು.ವಿದ್ಯಾರ್ಥಿಗಳನ್ನು ಸಂಭಾಳಿಸಲು ಶಿಕ್ಷಕರು ಹೈರಾಣು ಆದ್ರು.

ವಿಧಾನಸೌಧ ಮುಂಭಾಗ ವಿಶೇಷವಾದ ಕೋಟಿ ಕಂಠ ಗೀತ ಗಾಯನ

ಅಭಿಯಾನಕ್ಕೆ ಚಾಲನೆ: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಹಾಗೂ ಥೀಮ್ಪಾರ್ಕ್ ನಿರ್ಮಾಣಕ್ಕೆ ಮಣ್ಣು ಸಂಗ್ರಹಿಸುತ್ತಿರುವ ಅಭಿಯಾನದ ರಥಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಪುಷ್ಪಾರ್ಚನೆ ನೇರವೇರಿಸುವ ಮೂಲಕ ಹಸಿರು ಬಾವುಟ ತೋರುವ ಮೂಲಕ ಚಾಲನೆ ನೀಡಿದರು.ವಿವಿಧ ಪಂಚಾಯಿತಿಗಳಿಗೆ ಸಂಗ್ರಹಿಸಿದ್ದ ಮೃತ್ತಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಅವರು ಶಾಸಕ ಸಿ.ಟಿ. ರವಿ ಮತ್ತು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಹಸ್ತಾಂತರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಭೈರತಿಬಸವರಾಜ್ ಮಾತನಾಡಿ, ಕೆಂಪೇಗೌಡ ಪ್ರತಿಮೆಯನ್ನು ಪ್ರಧಾನಿ ನರೇಂದ್ರಮೋದಿಯವರು ಅನಾವರಣಗೊಳಿಸಲಿದ್ದಾರೆಂದು ಹೇಳಿದರು. ಶಾಸಕ ಸಿ.ಟಿ.ರವಿ ಮಾತನಾಡಿ ಕೋಟಿ ಕಂಠಗಾಯನ ಕನ್ನಡನಾಡಿನ ಜನರೊಂದಿಗೆ ಜೋಡಿಸಲಿದೆ. ಭಾಷೆಯ ಮೂಲಕ ದೇಶಕಟ್ಟುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಪ್ರತಿಮೆ ಭಾವನೆಯೊಂದಿಗೆ ಭಾಷೆಯನ್ನು ಬೆಸೆಯುತ್ತದೆ ಎಂದು ಶಾಸಕರು ಹೇಳಿದರು.

Follow Us:
Download App:
  • android
  • ios