'ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ - ಡಿಕೆಶಿ ಕಾದಾಟ'
ಅಧಿಕಾರ ಇಲ್ಲದಿದ್ದರೂ ಮುಖ್ಯಮಂತ್ರಿ ಗಾದಿಗಾಗಿ ಈ ಇಬ್ಬರು ನಾಯಕರ ನಡುವೆ ಕಾದಾಟ ನಡೆಯುತ್ತಿದೆ ಎಂದು ಮುಖಂಡರೋರ್ವರು ಹೇಳಿದ್ದಾರೆ. ಅಧಿಕಾರಕ್ಕಾಗಿ ಬಡಿದಾಡಿಕೊಳ್ಳುತ್ತಿದ್ದಾರೆ ಎಂದರು.
ಹುಬ್ಬಳ್ಳಿ (ಮಾ.08) : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜೋಡೆತ್ತು ಎಂದು ಕರೆಯಲಾಗುತ್ತಿದೆ. ಆದರೆ, ಅವರು ಜೋಡೆತ್ತುಗಳಲ್ಲ. ಕಾದಾಟ ನಡೆಸುವ ಹೋರಿಗಳು ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಬ್ಬರು ಅಧಿಕಾರ ಇಲ್ಲದಿದ್ದರೂ ಮುಖ್ಯಮಂತ್ರಿ ಕುರ್ಚಿಗೆ ಜಿದ್ದಿಗೆ ಬಿದ್ದು ಕಾದಾಟ ನಡೆಸಿದ್ದಾರೆ. ಅಧಿಕಾರಕ್ಕಾಗಿ ಬಡಿದಾಡುತ್ತಿರುವ ಹೋರಿಗಳು ಎಂದು ಕಿಚಾಯಿಸಿದರು.
ಹಲವರ ಕೈವಾಡ ಇದೆ: ಸೀಡಿ ಪ್ರಕರಣದಲ್ಲಿ ಹಲವರ ಕೈವಾಡ ಇದೆ. ಕಾಂಗ್ರೆಸ್ ನಾಯಕರು ಹಾಗೂ ಕೆಲವು ಸಂಘ ಸಂಸ್ಥೆಗಳ ಹೆಸರು ಕೇಳಿ ಬರುತ್ತಿವೆ. ಈ ಪಿತೂರಿಯಲ್ಲಿ ಯಾರೆಲ್ಲ ಇದ್ದಾರೆ ಎಂದು ತನಿಖೆಯಿಂದ ಹೊರಬರಬೇಕಾಗಿದೆ. ಬಿಜೆಪಿ ನಾಯಕರ ಹಾಗೂ ಮಂತ್ರಿಗಳ ತೇಜೋವಧೆ ಕೆಲಸ ಮಾಡುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ, ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ ಎಂದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಮೇಲೆ ರಾಮುಲು ಕಣ್ಣು..? ...
ಶ್ರೀರಾಮುಲು ಸೈಲೆಂಟ್ ಆಗಿದ್ದಾರಲ್ಲ ಎಂಬ ಪ್ರಶ್ನೆಗೆ, ಶ್ರೀರಾಮುಲು ಶಕ್ತಿ ಕುಂದಿಲ್ಲ. ಕುಂದುವುದೂ ಇಲ್ಲ. ನಾನು ಸೈಲೆಂಟ್ ಆಗಿಲ್ಲ. ನಾನು ರಾಜ್ಯ ಪ್ರವಾಸ ಮಾಡುತ್ತ ಅಭಿವೃದ್ಧಿ ಕೆಲಸ ಮಾಡುತ್ತಿದ್ದೇನೆ. ಸ್ಥಾನಮಾನ ನೀಡುವ ಬಗ್ಗೆ ನಾನು ಏನೂ ಕೇಳಲ್ಲ. ಬೇಸರವೂ ಇಲ್ಲ ಎಂದರು.