ಗೋವಿನ ಬಗ್ಗೆ ಮಾತಾಡಿದ್ದಕ್ಕೆ ಸರ್ಕಾರ ನೆಲಕಚ್ಚಿತ್ತು| ಸಿದ್ದರಾಮಯ್ಯ ರಾಮನ ಬಗ್ಗೆ ಮಾತಾಡಿದರೆ ನೆಲದ ಒಳಗೇ ಹೋಗುತ್ತಾರೆ| ಈಗಲಾದರೂ ರಾಮನ ಬಗ್ಗೆ ಹಗುರವಾಗಿ ಮಾತನಾಡುವ ಪ್ರವೃತ್ತಿ ಬಿಡಬೇಕು: ಈಶ್ವರಪ್ಪ| 

ರಾಯಚೂರು(ಫೆ.20): ರಾಮಮಂದಿರ ನಿರ್ಮಾಣದ ಲೆಕ್ಕ ಕೇಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವೋನು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಸಚಿವ ಕೆ.ಎಸ್‌.ಈಶ್ವರಪ್ಪ ಅವರು ಸಿದ್ದರಾಮಯ್ಯ ವಿರುದ್ಧ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. 

Add Asianetnews Kannada as a Preferred SourcegooglePreferred

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಮಮಂದಿರ ನಿರ್ಮಾಣದ ಜಾಗ ವಿವಾದಿತ ಸ್ಥಳ. ಅಲ್ಲಿ ಮಂದಿರ ನಿರ್ಮಾಣಕ್ಕೆ ತಾವು ಹಣ ನೀಡುವುದಿಲ್ಲ ಎಂದಿರುವ ಸಿದ್ದರಾಮಯ್ಯ ಸುಪ್ರೀಂಕೋರ್ಟ್‌ ತೀರ್ಪಿನ ಬಗ್ಗೆ ಗೌರವವಿಲ್ಲದೆ ವಿವಾದಿತ ಸ್ಥಳ ಎಂದಿದ್ದಾರೆ. ಮಂದಿರ ನಿರ್ಮಾಣದ ಲೆಕ್ಕ ಕೇಳಲು ಸಿದ್ದರಾಮಯ್ಯ ಯಾವೋನು. ಅವನು ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡಬಹುದೇ ಎಂದು ಪ್ರಶ್ನಿಸಿದರು?. ಮಂದಿರ ಕಟ್ಟಲು ಕೂಲಿ ಮಾಡುವ ಒಬ್ಬ ವ್ಯಕ್ತಿ 10 ರು. ನೀಡಿದ್ದಾರೆ ಅವರು ಲೆಕ್ಕ ಕೇಳಲಿ. ಆದರೆ, ಇವನ್ಯಾರು ಲೆಕ್ಕ ಕೇಳಲು ಎಂದು ಕಿಡಿಕಾರಿದರು.

'ಏಪ್ರಿಲ್‌ ಅಥವಾ ಮೇನಲ್ಲಿ ರಾಜ್ಯದಲ್ಲಿ ಚುನಾವಣೆ'

ಗೋಮಾತೆ ಶಾಪದಿಂದ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು ಹೋದರು. ಅವರ ಸರ್ಕಾರವನ್ನು ಕಳೆದುಕೊಂಡರು. ಆದರೂ ಸಹ ಸಿದ್ದರಾಮಯ್ಯಗೆ ಬುದ್ಧಿ ಬಂದಿಲ್ಲ. ಗೋರಕ್ಷಕರನ್ನು ಕೊಲೆ ಮಾಡಿದವರ ರಕ್ಷಣೆಯನ್ನು ಮಾಡಿದ್ದಾರೆ. ಇದೀಗ ಶ್ರೀರಾಮನ ಕುರಿತು ಮಾತಾಡ್ತಿದ್ದಾರೆ. ಆಗ ಗೋವಿನ ಬಗ್ಗೆ ಮಾತಾಡಿದ್ದಕ್ಕೆ ಸರ್ಕಾರ ನೆಲಕಚ್ಚಿತ್ತು. ಈಗ ರಾಮನ ಬಗ್ಗೆ ಮಾತಾಡಿದರೆ ನೆಲದ ಒಳಗೇ ಹೋಗುತ್ತಾರೆ. ಈಗಲಾದರೂ ರಾಮನ ಬಗ್ಗೆ ಹಗುರವಾಗಿ ಮಾತನಾಡುವ ಪ್ರವೃತ್ತಿ ಬಿಡಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಣ ನೀಡದವರ ಮನೆ ಮನೆಗೆ ಮಾರ್ಕ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ರಾಯಚೂರಿನಲ್ಲೇ ಯಾರ ಮನೆಗೆ ಮಾರ್ಕ್ ಮಾಡಲಾಗಿದೆ ತೋರಿಸಲಿ ಎಂದು ಸವಾಲು ಹಾಕಿದರು.