Mysuru : ಕಬ್ಬಿನ ದರ: ಸಿಎಂ ಜೊತೆ ಚರ್ಚಿಸಿ ತೀರ್ಮಾನ
ಕೆಲ ಸಕ್ಕರೆ ಕಾರ್ಖಾನೆ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿರುವುದರಿಂದ ಕಬ್ಬು ದರ ನಿಗದಿ ಮಾಡಲು ತಡವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ಮಂಡ್ಯ (ಡಿ.04): ಕೆಲ ಸಕ್ಕರೆ ಕಾರ್ಖಾನೆ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿರುವುದರಿಂದ ಕಬ್ಬು ದರ ನಿಗದಿ ಮಾಡಲು ತಡವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಳೆದ 27 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರ (Farmers) ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಕಬ್ಬು ಬೆಳೆಗಾರರ ಸಮಸ್ಯೆ ಮಂಡ್ಯ ಮಾತ್ರವಲ್ಲ, ಇಡೀ ರಾಜ್ಯದ ಸಮಸ್ಯೆಯಾಗಿದೆ. ಆದರೆ, ಕೆಲ ಸಕ್ಕರೆ ಕಂಪನಿ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಡಿ.6ರಂದು ನ್ಯಾಯಾಲಯದಲ್ಲಿ ವಿಚಾರಣೆ ಇರುವ ಕಾರಣ ಅಂದು ಈ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಅನುಸರಿಸಲಾಗುವುದು ಎಂದು ಹೇಳಿದರು.
ಕಬ್ಬು ದರ ನಿಗದಿ ಬಗ್ಗೆ ನಾನು, ಸಕ್ಕರೆ ಸಚಿವರು, ನಾರಾಯಣಗೌಡರು (Minister Narayana Gowda ) ಸೇರಿ ಮುಖ್ಯಮಂತ್ರಿಗಳೊಟ್ಟಿಗೆ ಚರ್ಚೆ ನಡೆಸಿದ್ದೇವೆ. 6 ಮಂದಿಯ ಸಮಿತಿ ರಚಿಸಿ ವರದಿ ನೀಡುವಂತೆ ಸೂಚನೆ ನೀಡಲಾಗಿತ್ತು. ನ್ಯಾಯಾಲಯದ ವಿಚಾರಣೆ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಕ್ಕರೆ ಮಾಲೀಕರ ಸಭೆ ಕರೆದು ಚರ್ಚಿಸಿ ಲಾಭಾಂಶದ ಆಧಾರದ ಮೇಲೆ ರೈತರಿಗೆ ದರ ನೀಡುವಂತೆ ಸೂಚಿಸಲಾಗುವುದು ಎಂದು ಹೇಳಿದರು.
ಕೇಂದ್ರದಲ್ಲಿ ಪ್ರಧಾನಮಂತ್ರಿ ಅಧ್ಯಕ್ಷತೆ ಸಮಿತಿ ಎಫ್ಆರ್ಪಿ ನಿಗದಿ ಮಾಡುತ್ತದೆ. ಆ ದರವನ್ನು ನೀಡಲಾಗುತ್ತಿದೆ. ರಾಜ್ಯದಲ್ಲೂ ಸಹ ಸಕ್ಕರೆ ಕಾರ್ಖಾನೆ ಮಾಲೀಕರು ಲಾಭಾಂಶದ ಮೇಲೆ ದರ ನಿಗದಿ ಮಾಡುವಂತೆ ಒತ್ತಡಗಳು ಹೆಚ್ಚುತ್ತಿದೆ. ಈ ಬಗ್ಗೆ Óಕ್ಕರೆ ಸಚಿವರು, ಮುಖ್ಯಮಂತ್ರಿಗಳೊಟ್ಟಿಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಮಂಡ್ಯ ಸೇರಿದಂತೆ ರಾಜ್ಯದ ಕೆಲ ಜಿಲ್ಲಾ ಕೇಂದ್ರಗಳಲ್ಲೂ ರೈತರು ಪ್ರತಿಭಟನೆ ನಡೆಸುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ನಾನೂ ಸಹ ರೈತನ ಮಗನಾಗಿರುವುದರಿಂದ ನನಗೂ ರೈತರ ಸಮಸ್ಯೆ ಬಗ್ಗೆ ಅರಿವಿದೆ ಎಂದರು.
ಹಿಂದಿನ ಪದ್ಧತಿ ಮುಂದುವರಿಸಲು ಕ್ರಮ
ಭತ್ತ ಖರೀದಿಯನ್ನು ಈ ಹಿಂದೆ ರೈಸ್ಮಿಲ್ ಮಾಲೀಕರಿಗೆ ನೀಡಲಾಗಿತ್ತು. ಈಗ ಎಪಿಎಂಸಿಗೆ ನೀಡಲಾಗಿದೆ ಎಂಬ ವಿಚಾರ ತಿಳಿಯಿತು. ನಾನು ಆಹಾರ ಖಾತೆ ಸಚಿವನಾಗಿದ್ದ ವೇಳೆ ಬಹಳಷ್ಟುಸಮಸ್ಯೆಗಳನ್ನು ಬಗೆಹರಿಸಿದ್ದೆ. ಈಗಲೂ ಸಹ ಮುಖ್ಯಮಂತ್ರಿಗಳು, ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಹಿಂದೆ ಇದ್ದ ಪದ್ದತಿಯನ್ನೇ ಮುಂದುವರಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಭತ್ತ ಖರೀದಿ ಪ್ರಕ್ರಿಯೆ ತಡ ಮಾಡಿದರೆ ದಲ್ಲಾಳಿಗಳು ರೈತರಿಂದ ಕಡಿಮೆ ದರದಲ್ಲಿ ಭತ್ತ ಖರೀದಿ ಮಾಡಿಕೊಂಡು ಹೋಗುತ್ತಾರೆ. ಮಂಡ್ಯ, ಮೈಸೂರು, ಶಿವಮೊಗ್ಗದಲ್ಲಿ ಮಾತ್ರ ಹೆಚ್ಚಿನ ಭತ್ತ ಖರೀದಿ ಮಾಡಬಹುದು. ಉಳಿದ ಕಡೆಗಳಲ್ಲಿ ಹೆಚ್ಚಾಗಿಲ್ಲ. ಇದರಿಂದಾಗಿ ಹಿಂದಿನ ಪದ್ಧತಿಯನ್ನೇ ಮುಂದುವರಿಸಿದಲ್ಲಿ ಶೀಘ್ರ ಭತ್ತ ಖರೀದಿ ಕೇಂದ್ರಗಳನ್ನು ಸ್ಥಾಪಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಸ್ಥಳದಲ್ಲೇ ಸಮಸ್ಯೆ ಪರಿಹಾರ : ಉಸ್ತುವಾರಿ ಸಚಿವರ ಕಚೇರಿ ಇಲ್ಲದಿದ್ದರೂ ಜಿಲ್ಲೆಗೆ ಭೇಟಿ ನೀಡಿದಾಗೆಲ್ಲಾ ಸಾರ್ವಜನಿಕರಿಂದ ಬಂದ ಅರ್ಜಿಗಳು, ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಇದಕ್ಕೆ ಕಚೇರಿ ಬೇಕೆಂದೇನೂ ಇಲ್ಲ. ನಾನು ಮಂಡ್ಯಕ್ಕೆ ಬಂದಾಗಲೆಲ್ಲಾ ಪ್ರವಾಸಿ ಮಂದಿರ ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲೇ ಇರುತ್ತೇನೆ. ಸಾರ್ವಜನಿಕರು ಬಂದು ನನ್ನನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಟಿಕೆಟ್ ನೀಡಲ್ಲ ಘೋಷಣೆ ಮಾಡಲಿ: ಈ ಹಿಂದೆ ಯಾರಾರಯರು ಕಾಂಗ್ರೆಸ್ ಪಕ್ಷದಲ್ಲಿ ಇದ್ದರು ಎಂಬುದನ್ನು ನಾಯಕರು ಒಮ್ಮೆ ಹಿಂತಿರುಗಿ ನೋಡಿಕೊಳ್ಳಲಿ. ಯಾವುದೋ ವಿಚಾರದಲ್ಲಿ ಬಂದಿರಬಹುದು. ಅರ್ಜಿ ಹಾಕಿರುವವರ ಮೇಲೆ ಕ್ರಿಮಿನಲ್ ಕೇಸ್ ಇಲ್ಲವೇ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು. ನಮ್ಮಲ್ಲಿ ಕ್ರಿಮಿನಲ್ ಕೇಸ್ ಇಲ್ಲದವರಿಗೆ ಟಿಕೆಟ್ ಕೊಡುತ್ತೇವೆ. ಈಗಾಗಲೇ ಮುಖ್ಮಮಂತ್ರಿಗಳು ಹಾಗೂ ರಾಜ್ಯಾಧ್ಯಕ್ಷರು ಘೋಷಣೆ ಮಾಡಿದ್ದಾರೆ. ಅವರು ಕೂಡ ಟಿಕೆಟ್ ನೀಡಲ್ಲ ಎಂದು ಘೋಷಣೆ ಮಾಡಲಿ ಎಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಡಾ. ಎಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಎಸ್ಪಿ ಎನ್.ಯತೀಶ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಮುಖಂಡರಾದ ಎಸ್.ಸಿ. ಮಧುಚಂದನ್, ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ರಮೇಶ್, ಕಾರ್ಯದರ್ಶಿ ಮಹೇಶ್ಕುಮಾರ್, ಉದಯಕುಮಾರ್, ವೇಣುಗೋಪಾಲ್ , ದೀಪಕ್ , ಅರುಣ್ , ಆತ್ಮಾನಂದ , ರಾಮಕೃಷ್ಣೇಗೌಡ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.