* ಚುನಾವಣೆ ನೇತೃತ್ವ ಚರ್ಚೆಗಿದು ಕಾಲವಲ್ಲ* ಫೇಸ್‌ಬುಕ್‌ ಪೋಸ್ಟಿಗೆ ಬೆಲೆಯಿಲ್ಲ* ಯಡಿಯೂರಪ್ಪ  ಮುಂದಿನ ಎರಡು ವರ್ಷ ಸಿಎಂ ಆಗಿ ಮುಂದುವರಿಯಲಿದ್ದಾರೆ 

ಹುಬ್ಬಳ್ಳಿ(ಜೂ.14): ನಾಯಕತ್ವ ಬದಲಾವಣೆ ವಿಚಾರ ಹೈಕಮಾಂಡ್‌, ರಾಜ್ಯ ಮಟ್ಟದಲ್ಲಿ ಸೇರಿ ಎಲ್ಲಿಯೂ ಚರ್ಚೆ ಆಗಿಲ್ಲ ಎಂದು ಪುನರುಚ್ಚರಿಸಿರುವ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌, ಈ ವಿಚಾರ ಎಲ್ಲಿಂದ ಬಂದಿದೆ ಎಂಬುದೂ ಗೊತ್ತಿಲ್ಲ. ಪದೇ ಪದೇ ಈ ವಿಚಾರ ಚರ್ಚೆ ಆಗುವುದರಿಂದ ನಮ್ಮ ಆಡಳಿತಕ್ಕೆ ತೊಂದರೆ ಆಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಆಗಿಲ್ಲ. ಬಿ.ಎಸ್‌.ಯಡಿಯೂರಪ್ಪ ಅವರು ಮುಂದಿನ ಎರಡು ವರ್ಷ ಮುಖ್ಯಮಂತ್ರಿ ಆಗಿ ಮುಂದುವರಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸಿಎಂ ಯೋಗಿ ಆದಿತ್ಯನಾಥ್ ಬದಲಾವಣೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ

ಮುಂದಿನ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯಲಿದೆ ಎಂಬುದು ಆ ಪರಿಸ್ಥಿತಿಯಲ್ಲಿ ಮಾತ್ರ ಗೊತ್ತಾಗುವಂತಹ ವಿಚಾರ. ಈಗಲೆ ಯಾರ ನೇತೃತ್ವ ಎಂದು ಹೇಗೆ ಹೇಳಲು ಸಾಧ್ಯ? ಆ ಸಂದರ್ಭ ಬಂದಾಗ ನೋಡೋಣ ಎಂದರು.
ಇನ್ನು ವಿಜಯೇಂದ್ರ ಅವರು ಸ್ವಾಮೀಜಿಗಳನ್ನು ಭೇಟಿ ಆಗುವುದು ಸಾಮಾನ್ಯ ವಿಚಾರ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ತಿಳಿಸಿದರು.

ಫೇಸ್‌ಬುಕ್‌ ಪೋಸ್ಟಿಗೆ ಬೆಲೆಯಿಲ್ಲ:

ಶಾಸಕ ಅರವಿಂದ ಬೆಲ್ಲದ ಮುಂದಿನ ಮುಖ್ಯಮಂತ್ರಿ ಎಂಬ ಅವರ ಬೆಂಬಲಿಗರ ಫೇಸ್‌ಬುಕ್‌ ಪೋಸ್ಟ್‌ಗೆ ಬೆಲೆಯಿಲ್ಲದ್ದು ಎಂದಜು ಜಗದೀಶ್‌ ಶೆಟ್ಟರ್‌ ಅಭಿಪ್ರಾಯಪಟ್ಟರು. ಫೇಸ್‌ಬುಕ್‌ಗೆ ಫೇಸ್‌ ವಾಲ್ಯೂ ಇಲ್ಲದಂತಾಗಿದೆ. ಫೇಸ್‌ಬುಕ್‌ನಲ್ಲಿ ಯಾರು ಏನೂ ಬೇಕಾದರೂ ಬರೆದುಕೊಳ್ಳಬಹುದು. ನಾನೇ ಪಿಎಂ ಅಂತಲೂ ನಾಳೆ ಯಾರೋ ಪೋಸ್ವ್‌ ಹಾಕಿಕೊಳ್ಳಬಹುದು. ಅದಕ್ಕೆಲ್ಲಾ ಉತ್ತರಿಸಲು ಆಗುವುದಿಲ್ಲ ಎಂದರು.