‘ಪುಣೆ, ಮುಂಬೈ ಕರ್ನಾಟಕಕ್ಕೆ ಸೇರಿದ್ದು ಅಂದ್ರೆ ನನ್ನಂತ ಮೂರ್ಖ ಇನ್ನೊಬ್ಬಿಲ್ಲ’
ಭಾಷೆಗಾಗಿ ಆಕ್ರಮಣ, ಹೋರಾಟ ಯಾವತ್ತೂ ನಡೆದಿಲ್ಲ| ಸೊಲ್ಲಾಪುರ, ಜತ್ತ, ಅಕ್ಕಲಕೋಟೆ ಮಹಾರಾಷ್ಟ್ರ ಆಕ್ರಮಿತ ಕರ್ನಾಟಕ ಅಂತಾ ಹೇಳಕ್ಕಾಗುತ್ತಾ?| ಕಾಸರಗೋಡು ಕೇರಳ ಆಕ್ರಮಿತ ಪ್ರದೇಶ ಅಂತಾ ಹೇಳೋಕೆ ಬರುತ್ತಾ?| ಯಾರಿಗೆ ಇತಿಹಾಸ ಪ್ರಜ್ಞೆ ಇರಲ್ಲ ಅವರು ಮಾತ್ರ ಹೀಗೆ ಬೆಂಕಿ ಹಚ್ಚೋ ಕೆಲಸ ಮಾಡ್ತಾರೆ ಎಂದ ಸಿ.ಟಿ.ರವಿ|
ಬೆಳಗಾವಿ[ಡಿ.20]: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇತಿಹಾಸ ಪ್ರಜ್ಞೆ ಇಲ್ಲದವರು ಅಧಿಕಾರ ಆಸೆಗಾಗಿ ಎನ್ಸಿಪಿ, ಕಾಂಗ್ರೆಸ್ ಮೂಲಕ ಸಿಎಂ ಆಗಿದ್ದಾರೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ರಾಜ್ಯದ ನಿಪ್ಪಾಣಿ, ಬೆಳಗಾವಿ, ಕಾರವಾರವನ್ನು ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ(ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ಎಂಬ ಉದ್ಧವ್ ಠಾಕ್ರೆ ಹೇಳಿಕೆಗೆ ಶುಕ್ರವಾರ ಮಾಧ್ಯಮದವರ ಜತೆ ಮಾತನಾಡಿದ ಸಚಿವ ಸಿ.ಟಿ.ರವಿ, ರಾಜ್ಯಗಳು ನಿರ್ಮಾಣವಾದಾಗ ಅಧಿಕಾರದಲ್ಲಿದ್ದಿದ್ದು ಕೇವಲ ಕಾಂಗ್ರೆಸ್ ಪಕ್ಷ ಮಾತ್ರ. ಈ ಗಡಿ ನಿರ್ಮಾಣ ಆಗಿದ್ದು ನಿನ್ನೆ ಮೊನ್ನೆಯದಲ್ಲ, ಮಹಾರಾಷ್ಟ್ರ ಪ್ರದೇಶ ಆಕ್ರಮಣವಾಗಿದೆ ಅಂದ್ರೆ ಅಕ್ರಮಣಕ್ಕೆ ಬಿಟ್ಟುಕೊಟ್ಟಿದ್ದು ಕಾಂಗ್ರೆಸ್ ಅಲ್ವೇ? ಅವರ ಜೊತೆಗೆ ಏಕಿದ್ದೀರಿ? ಎಂದು ಉದ್ಧವ್ ಠಾಕ್ರೆಗೆ ತಿರುಗೇಟು ನೀಡಿದ್ದಾರೆ.
ಮತ್ತೆ ಗಡಿ ವಿವಾದ : ಬೆಳಗಾವಿಯನ್ನ POKಗೆ ಹೋಲಿಸಿದ ಉದ್ಧವ್ ಠಾಕ್ರೆ!
ಭಾಷೆಗಾಗಿ ಆಕ್ರಮಣ, ಹೋರಾಟ ಯಾವತ್ತೂ ನಡೆದಿಲ್ಲ. ಸೊಲ್ಲಾಪುರ, ಜತ್ತ, ಅಕ್ಕಲಕೋಟೆ ಮಹಾರಾಷ್ಟ್ರ ಆಕ್ರಮಿತ ಕರ್ನಾಟಕ ಅಂತಾ ಹೇಳಕ್ಕಾಗುತ್ತಾ? ಕಾಸರಗೋಡು ಕೇರಳ ಆಕ್ರಮಿತ ಪ್ರದೇಶ ಅಂತಾ ಹೇಳೋಕೆ ಬರುತ್ತಾ? ಯಾರಿಗೆ ಇತಿಹಾಸ ಪ್ರಜ್ಞೆ ಇರಲ್ಲ ಅವರು ಮಾತ್ರ ಹೀಗೆ ಬೆಂಕಿ ಹಚ್ಚೋ ಕೆಲಸ ಮಾಡ್ತಾರೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಮರಾಠಿಗರು ಸೇರಿದಂತೆ ಎಲ್ಲರೂ ಸೌಹಾರ್ದಿತವಾಗಿಯೇ ಇದ್ದಾರೆ. ಈ ಸೌಹಾರ್ದತೆಯನ್ನು ಕೆಡಿಸಲಿಕ್ಕೆ ರಾಜಕೀಯ ಲಾಭ ಪಡೆಯಲು ಆಗಾಗ ಪ್ರಯತ್ನ ಮಾಡಿದರೂ ಯಾವ ಸಮುದಾಯವರೂ ಅವರ ಪರ ನಿಂತಿಲ್ಲ. ಮಹಾರಾಷ್ಟ್ರದ ಪುಣೆ, ಮುಂಬೈನಲ್ಲಿ ಕನ್ನಡಿಗರು ಇದ್ದಾರೆ ಅದು ಕರ್ನಾಟಕಕ್ಕೆ ಸೇರಿದ್ದು ಅಂದ್ರೆ ನನ್ನಂತ ಮೂರ್ಖ ಇನ್ನೊಬ್ಬಿಲ್ಲ ಎಂದು ಹೇಳಿದ್ದಾರೆ.
ಉದ್ಧವ್ ಠಾಕ್ರೆ ದಾರಿ ತಪ್ಪಿದ್ದಾರೆ. ಸರಿದಾರಿಗೆ ಬರಬಹುದು. ಬಿಜೆಪಿ ಜೊತೆ ಸೇರಿದ್ರೆ ರಾಷ್ಟ್ರೀಯ ಹಿತಾಸಕ್ತಿ ಹೇಳಿ ಕೊಡುತ್ತೆ, ಕಾಂಗ್ರೆಸ್ ಜೊತೆ ಸೇರಿದಾಗ ಒಡೆದು ಆಳುವ, ದ್ವೇಷ ಹಚ್ಚುವ ಕೆಲಸ ಬಂದು ಬಿಡುತ್ತದೆ. ಕಾಂಗ್ರೆಸ್, ಎನ್ಸಿಪಿ ಜೊತೆ ಸೇರಿ ಸಹವಾಸ ದೋಷಕ್ಕೆ ಸನ್ಯಾಸಿ ಕೆಟ್ಟ ಅನ್ನೋ ರೀತಿ ಅವರ ಪರಿಸ್ಥಿತಿ ಇದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.