ರಾಜಕೀಯ ಕಾರಣಕ್ಕೆ ಸಿದ್ದು ಆರೋಪ: ಸಚಿವ ಬಿ.ಸಿ. ಪಾಟೀಲ್| ಎಂಟಿಬಿ ನಾಗರಾಜಗೆ ಅನ್ಯಾಯ ಆಗಿದ್ದು ನಿಜ| ಬಚ್ಚೆಗೌಡರು ಪಕ್ಷದ ಆದೇಶವನ್ನ ಉಲ್ಲಂಘಿಸಿದ್ದಾರೆ| ಸಿದ್ದರಾಮಯ್ಯ ಸರಿಯಾಗಿ ನಿರ್ವಹಣೆ ಮಾಡದಿದ್ದರಿಂದಲೇ ಕಾಂಗ್ರೆಸ್‌ ಪಕ್ಷ ಬಿಡುವಂತ ಸನ್ನಿವೇಶ ಸೃಷ್ಟಿ|

ಕೊಪ್ಪಳ(ಜೂ.05): ರಾಜ್ಯದಲ್ಲಿ ಸಿದ್ದರಾಮಯ್ಯ ಸಿಎಂ ಇರುವಾಗಲೂ ರಾಕೇಶ್ ಸೂಪರ್ ಸಿಎಂ ಆಗಿದ್ದರು. ಕೆಂಪಯ್ಯ ಗೃಹ ಸಚಿವ ಎಂಬ ಮಾತುಗಳಿದ್ದವು. ಈಗಲೂ ಸಹ ಅದೇ ರೀತಿಯಾಗಿ ಸಿಎಂ ಬಿಎಸ್ವೈ ಬಗ್ಗೆ ಆರೋಪಿಸಲಾಗುತ್ತಿದೆ. ಆಪಾದನೆಯಲ್ಲಿ ಯಾವುದೇ ಹುರುಳಿಲ್ಲ. ಇದೊಂದು ನಿರಾಧಾರ ಆರೋಪ. ರಾಜಕೀಯ ಕಾರಣಕ್ಕಾಗಿ ಸಿದ್ದರಾಮಯ್ಯ ಆರೋಪಿಸುತ್ತಿದ್ದಾರೆಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

Add Asianetnews Kannada as a Preferred SourcegooglePreferred

ಇಂದು(ನಗರದಲ್ಲಿ) ಶುಕ್ರವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಸಮಯದಲ್ಲಿ ನಮ್ಮ ಗೆಲುವಿಗಾಗಿ ಕುಟುಂಬ ಸದಸ್ಯರೆಲ್ಲರೂ ದುಡಿದಿರುತ್ತಾರೆ. ಹೀಗಾಗಿ ಕೆಲವೊಂದು ಸಲಹೆ, ಸೂಚನೆ ಕೊಡುತ್ತಾರೆ. ಹಾಗೆಂದ ಮಾತ್ರಕ್ಕೆ ಅವರೇ ನಮ್ಮ ಪರವಾಗಿ ಆಡಳಿತ ನಡೆಸುತ್ತಿದ್ದಾರೆಂದು ಹೇಳುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಬೇಕಾದರೂ ಸಲಹೆ ನೀಡಬಹುದು. ಅದನ್ನು ಸ್ವೀಕಾರ ಮಾಡಬಹುದು ಅಥವಾ ಬಿಡಬಹುದು ಎಂದರು.
ಸಿದ್ದರಾಮಯ್ಯನವರ ಸ್ವಾರ್ಥ ರಾಜಕಾರಣದಿಂದ ಮತ್ತು ಕಾಂಗ್ರೆಸ್ ಮೋಸ ಮಾಡಿದ್ದರಿಂದಲೇ ನಾವು ಪಕ್ಷ ಬಿಟ್ಟಿದ್ದು. ಸಿದ್ದರಾಮಯ್ಯ ಸರಿಯಾಗಿ ನಿರ್ವಹಣೆ ಮಾಡದಿದ್ದರಿಂದಲೇ ಅಂತಹ ಸನ್ನಿವೇಶ ಸೃಷ್ಟಿಯಾಯಿತು ಎಂದು ಆರೋಪಿಸಿದರು.

ಒಬ್ಬ ಸೋಂಕಿತನಿಂದ ಮೂರು ಜಿಲ್ಲೆಗಳಿಗೆ ಢವಢವ; ಬೆಚ್ಚಿ ಬೀಳಿಸಿದೆ ಟ್ರಾವೆಲ್ ಹಿಸ್ಟರಿ

ಆರ್.ಶಂಕರ್, ಎಂಟಿಬಿ ನಾಗರಾಜ, ವಿಶ್ವನಾಥ ತ್ಯಾಗ ಮಾಡಿದ್ದರಿಂದಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರಿಗೆ ಸಿಎಂ ಬಿಎಸ್ವೈ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಎಂಟಿಬಿಯವರಿಗೆ ಬಚ್ಚೆಗೌಡ ಕುಟುಂಬದಿಂದ ಅನ್ಯಾಯ ಆಗಿರುವುದು ನಿಜ. ಚುನಾವಣೆಯಲ್ಲಿ ಶರತ್ ಬಚ್ಚೆಗೌಡ ಸ್ಪರ್ಧೆ ಮಾಡದಂತೆ ಪಕ್ಷ ಸೂಚಿಸಿದರೂ ಸ್ಪರ್ಧೆ ಮಾಡಿದ್ದರಿಂದ ನಾಗರಾಜ ಸೋಲಬೇಕಾಯಿತು. ಯಡಿಯೂರಪ್ಪ ಅದನ್ನು ಸರಿಪಡಿಸುವರೆಂದು ವಿಶ್ವಾಸ ವ್ಯಕ್ತಪಡಿಸಿದರು. ಮೆಕ್ಕೆಜೋಳ ಬೆಳೆಗಾರರ ಖಾತೆಗೆ ಆನ್‌ಲೈನ್ ಮೂಲಕ ಪರಿಹಾರ ಹಾಕುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಕೆಲ ರೈತರು ತಮ್ಮ ಚಾಲ್ತಿ ಖಾತೆಗೆ ಇನ್ನೂ ಆಧಾರ್ ಲಿಂಕ್ ಮಾಡಿಸಿಲ್ಲ. ಹಾಗಾಗಿ ಕೆಲವು ಕಡೆ ತೊಂದರೆ ಆಗಿರಬಹುದು. ಎಲ್ಲ ರೈತರು ತಮ್ಮ ಚಾಲ್ತಿ ಖಾತೆಗೆ ಆಧಾರ್ ಲಿಂಕ್ ಮಾಡಿಸಬೇಕೆಂದು‌ ಮನವಿ ಮಾಡಿದರು.