ಚಳಿಗಾಲದ ಅಧಿವೇಶನದ ವೇಳೆ ಮಹಾಮೇಳಾವ್‌ ಸಂಘಟಿಸಲು ತೀರ್ಮಾನಿಸಿದ ಎಂಇಎಸ್‌

ಬೆಳಗಾವಿ(ಅ.26): ಕರ್ನಾಟಕ ಸರ್ಕಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಸಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಕ್ಯಾತೆ ತೆಗೆದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ, ಈ ಬಾರಿ ಮತ್ತೆ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳಾವ್‌ ಸಂಘಟಿಸಲು ತೀರ್ಮಾನಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಂಇಎಸ್‌ ಕಾರ್ಯಾಧ್ಯಕ್ಷ ಮನೋಹರ ಕಿಣೇಕರ ನೇತೃತ್ವದಲ್ಲಿ ನಡೆದ ಎಂಇಎಸ್‌ ಮುಖಂಡರು ಸೋಮವಾರ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಸಂಬಂಧ ತೀರ್ಮಾನಿಸಿದ್ದರೂ ಇನ್ನೂ ದಿನಾಂಕ ಘೋಷಣೆ ಮಾಡಿಲ್ಲ. ಅಧಿವೇಶನದ ಮೊದಲ ದಿನವೇ ಮಹಾಮೇಳಾವ್‌ ಸಂಘಟಿಸುವ ಮೂಲಕ ಮರಾಠಿ ಭಾಷಿಕರ ಶಕ್ತಿ ಪ್ರದರ್ಶನ ತೋರಿಸುವಂತೆ ಎಂಇಎಸ್‌ ಕಾರ್ಯಾಧ್ಯಕ್ಷ ಮನೋಹರ ಕಿಣೇಕರ ಕರೆ ನೀಡಿದ್ದಾರೆ.

Belagavi: ರಾಜ್ಯ ಸರ್ಕಾರವನ್ನು ಟೀಕಿಸಿ ಎಂಇಎಸ್‌ ಉದ್ಧಟತನ

ಕರ್ನಾಟಕ ಸರ್ಕಾರ ಚಳಿಗಾಲದ ಅಧಿವೇಶನ ನಡೆಸುವ ಸಂಬಂಧ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಡಿಸೆಂಬರ್‌ ತಿಂಗಳಲ್ಲಿ ಅಧಿವೇಶನ ನಡೆಯುವ ಸಾಧ್ಯತೆಯಿದೆ. ಆದರೆ, ಈವರೆಗೂ ದಿನಾಂಕ ನಿಗದಿಯಾಗಿಲ್ಲ. ಅಧಿವೇಶನಕ್ಕೆ ಪರ್ಯಾಯವಾಗಿ ಮಹಾಮೇಳಾವ್‌ ಸಂಘಟಿಸುವ ಮೂಲಕ ಮರಾಠಿ ಭಾಷಿಕರು ಉತ್ತರ ನೀಡಬೇಕಿದೆ. ಬೆಳಗಾವಿಯಲ್ಲಿ ಈವರೆಗೆ ನಡೆದಿರುವ ಎಲ್ಲ ವಿಧಾನಮಂಡಲ ಅಧಿವೇಶನಕ್ಕೆ ಪರ್ಯಾಯವಾಗಿ ಮೊದಲ ದಿನವೇ ಎಂಇಎಸ್‌ ಮಹಾಮೇಳಾವ್‌ ಸಂಘಟಿಸುತ್ತ ಬಂದಿದೆ. ಈ ಮೂಲಕ ಮರಾಠಿ ಭಾಷಿಕರು ಹಕ್ಕೊತ್ತಾಯ ಮಾಡುತ್ತ ಬಂದಿದ್ದೇವೆ ಎಂದರು.

Ban on MES: 'ಎಂಇಎಸ್‌ ನಿಷೇಧ ಕಾಯ್ದೆ ಮಂಡಿಸುವವರಿಗೆ 1 ಕೋಟಿ ಬಹುಮಾನ'

ಇತ್ತೀಚೆಗೆ ಗಡಿಭಾಗವಾದ ಬೆಳಗಾವಿಯಲ್ಲಿ ಕನ್ನಡೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕನ್ನಡೀಕರಣ ಮಾಡಲಾಗುತ್ತಿದೆ. ಮರಾಠಿ ಭಾಷಿಕರಿಗೆ ಅಗತ್ಯ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡಲಾಗುತ್ತಿಲ್ಲ. ಮೂಲಭೂತ ಸೌಲಭ್ಯಗಳನ್ನು ನೀಡದೇ ಮರಾಠಿ ಭಾಷಿಕರಿಗೆ ತೊಂದರೆ ನೀಡಲಾಗುತ್ತಿದೆ. ಮರಾಠಿ ಭಾಷಿಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಈ ಕುರಿತು ಮರಾಠಿ ಭಾಷಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ನವೆಂಬರ್‌ 1 ರಂದು ಹಮ್ಮಿಕೊಳ್ಳಲಾಗುವ ಕರಾಳ ದಿನಾಚರಣೆ ರಾರ‍ಯಲಿಯಲ್ಲಿಯೂ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಮಹಾಮೇಳಾವ್‌, ಇತರೆ ಹೋರಾಟ ಹಾಗೂ ಕರಾಳ ದಿನಾಚರಣೆ ಯಶಸ್ವಿಗೆ ಮರಾಠಿ ಭಾಷಿಕರು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಕಿರಣೇಕರ ಕರೆ ನೀಡಿದರು.