'ಪಿಂಚಣಿ ಪಡೆಯುವವರಿಗೆ ಇನ್ಮುಂದೆ ಇಲ್ಲ ಯಾವುದೇ ಸಮಸ್ಯೆ'
ಪಿಂಚಣಿ ಪಡೆಯುವ ಹಿರಿಯರು ಹಾಗೂ ಇತರರಿಗೆ ಇನ್ಮುಂದೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಸೂಕ್ತವಾದ ವ್ಯವಸ್ಥೆ ರೂಪಿಸಬೇಕು ಎಂದು ಸೂಚನೆ ನೀಡಲಾಗಿದೆ.
ಮಂಗಳೂರು (ಜ.21): ತಾಲೂಕಿನ ಬಹುತೇಕ ಮಂದಿಗೆ ಪಿಂಚಣಿ ಸರಿಯಾಗಿ ಬರುತ್ತಿಲ್ಲ. ಶವಸಂಸ್ಕಾರಕ್ಕೆ ಸರ್ಕಾರದಿಂದ ದೊರಕುವ ಹಣ ಕೂಡ ಸಿಗುತ್ತಿಲ್ಲ. ಪಿಂಚಣಿದಾರರು ಹಣ ಬಾರದ ಕಾರಣ ಈಗಲೂ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.
ಪಿಂಚಣಿಯ ಹಣವನ್ನೇ ಅವಲಂಬಿಸಿ ಜೀವನ ನಡೆಸುವ ಹಲವು ಕುಟುಂಬಗಳಿವೆ. ಹೀಗಾಗಿ ಪಿಂಚಣಿ ವ್ಯವಸ್ಥೆ ಸರಿಯಾಗಿ ಅನುಷ್ಠಾನಕ್ಕೆ ಅಧಿಕಾರಿಗಳು ವಿಶೇಷ ಆದ್ಯತೆ ನೀಡಬೇಕು ಎಂದು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು ಸೂಚಿಸಿದ್ದಾರೆ.
ಮೃತರ ಹೆಸರಲ್ಲಿ ಕೋಟಿ ಕೋಟಿ ಪಿಂಚಣಿ ಸಂದಾಯ ...
ಮಂಗಳವಾರ ನಡೆದ ಮಂಗಳೂರು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿಕ್ರಿಯಿಸಿದ ಇತರ ಸದಸ್ಯರು, ಪಿಂಚಣಿಗಾಗಿ ಬಡವರು, ವಯಸ್ಸಾದವರು ಅಲೆದಾಡುವ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ಆಗ್ರಹಿಸಿದರು.
ಗಂಜಿಮಠ ಗ್ರಾ.ಪಂ. ರಸ್ತೆಯ ಸುಗಮ ಸಂಚಾರ ವ್ಯವಸ್ಥೆಗೆ ಸಂಬಂಧಿಸಿ ಯಾವುದೇ ಕ್ರಮವಾಗಿಲ್ಲ. ಕಳೆದ ಹಲವು ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರೂ ಆಗಿಲ್ಲ ಎಂಬ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ತಾ.ಪಂ. ಅಧ್ಯಕ್ಷರು ಒಂದು ತಿಂಗಳೊಳಗೆ ವ್ಯವಸ್ಥೆ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.