ಹಾಲಿನ ದರ 30 ರು.ಗೆ ಏರಿಸಿ : ಉತ್ಪಾದಕರಿಂದ ಎಚ್ಚರಿಕೆ
ಹಾಲಿನ ದರವನ್ನು 30 ರು.ಗಳಿಗೆ ಏರಿಕೆ ಮಾಡಬೇಕು ಎಂದು ಮಂಡ್ಯ ಹಾಲು ಉತ್ಪಾದಕರ ಸಮಿತಿ ಆಗ್ರಹಿಸಿದ್ದು ಹೆಚ್ಚಳ ಮಾಡದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.
ಮಂಡ್ಯ (ಮಾ.08): ಜಿಲ್ಲಾ ಹಾಲು ಒಕ್ಕೂಟ ರೈತರಿಂದ ಖರೀದಿ ಮಾಡುತ್ತಿರುವ ಪ್ರತಿ ಲೀಟರ್ ಹಾಲಿಗೆ 30 ನೀಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ಅಧ್ಯಕ್ಷ ಎಸ್.ಸಿ.ಮಧುಚಂದನ್ ಎಚ್ಚರಿಕೆ ನೀಡಿದರು.
ಮನ್ಮುಲ್ ಹೊರತುಪಡಿಸಿ ರಾಜ್ಯದ ಎಲ್ಲಾ ಹಾಲು ಒಕ್ಕೂಟಗಳು ಪ್ರತಿ ಲೀಟರ್ಗೆ 26 ನಿಂದ 30 ರು. ನೀಡುತ್ತಿವೆ. ನೆರೆ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟಗಳು 29.20 ರು. ನೀಡುತ್ತಿವೆ. ಮೈಸೂರು, ತುಮಕೂರು, ಬೆಂಗಳೂರು, ಹಾಸನ, ಚಾಮರಾಜನಗರ ಒಕ್ಕೂಟಗಳೂ ಸಹ ರೈತರಿಗೆ ಉತ್ತಮ ಖರೀದಿ ದರ ನೀಡಿ ಆಸರೆಯಾಗಿವೆ. ಆದರೆ, ಮನ್ಮುಲ್ ಮಾತ್ರ ಅತ್ಯಂತ ಕಡಿಮೆ ದರ 22.50 ರು. ನೀಡಿ ಹಾಲು ಉತ್ಪಾದಕರಿಗೆ ಮೋಸ ಎಸಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಪ್ರಸ್ತುತ ಮನ್ಮುಲ್ ಆಡಳಿತ ಮಂಡಳಿ ಹಾಲು ಉತ್ಪಾದಕರ ಕಷ್ಟಗಳನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕೈ ಕಟ್ಟಿಕುಳಿತು ಹೈನುಗಾರಿಕೆಯನ್ನೇ ಜೀವನಾಧಾರವಾಗಿಸಿಕೊಂಡು ಅದರಿಂದ ಬರುವ ಹಣದಿಂದಲೇ ಕುಟುಂಬ ನಿರ್ವಹಿಸುತ್ತಿರುವ ಸಾವಿರಾರು ರೈತ ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಲಿನ ದರ 40 ರು.ಗೆ ಏರಿಸಿ : ರೈತರಿಂದ ಪ್ರತಿಭಟನೆ .
ಒಕ್ಕೂಟದ ನುರಿತ ಅಧಿಕಾರಿ ವರ್ಗವನ್ನು ಆಡಳಿತ ಮಂಡಳಿ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದೆ. ಒಕ್ಕೂಟದ ಹಣ ದೋಚಲು ಸಹಾಯ ಮಾಡುವಂತಹ ಪಟ್ಟಭದ್ರರು ಹಾಗೂ ಅನುಭವ ಇಲ್ಲದವರನ್ನು ಆಯಕಟ್ಟಿನ ಜಾಗಗಳಿಗೆ ನಿಯೋಜನೆ ಮಾಡಿ ಒಕ್ಕೂಟವನ್ನು ನಷ್ಟದ ಕೂಪಕ್ಕೆ ನೂಕುತ್ತಿದ್ದಾರೆ ಎಂದು ದೂರಿದರು.
ಡಾ. ಅಕಾಲಪ್ಪರೆಡ್ಡಿ ಅವರು ಪಶುವೈದ್ಯರಾಗಿದ್ದು, ಅವರನ್ನು ಅವರ ಕಾರ್ಯಕ್ಕೆ ನೇಮಿಸದೆ ಆಡಳಿತ ವಿಭಾಗದ ಮುಖ್ಯಸ್ಥರಾಗಿ ನೇಮಿಸಿರುವುದು ಆಡಳಿತ ಮಂಡಳಿಯ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಮೆಗಾಡೈರಿ ಹೆಸರಿನಲ್ಲಿ 30 ಟನ್ ಸಾಮರ್ಥ್ಯವುಳ್ಳ ಪೌಡರ್ ಪ್ಲಾಂಟನ್ನು ಉತ್ಪಾದಕರ ಹಾಲಿನ ಹಣದಲ್ಲಿ ಮಾಡಲು ಹೊರಟಿರುವುದು ಹೊಳೆಯಲ್ಲಿ ಹುಣಸೇಹಣ್ಣು ತೇಯ್ದಂತಾಗಿದೆ. ಕಳೆದ ಸಾಲಿನ ಆಡಳಿತ ಮಂಡಳಿ ಅಕ್ರಮ ಎಸಗಿ 72 ಕೋಟಿ ರು. ದುರುಪಯೋಗ ಎಸಗಿರುವುದು ಸಾಬೀತಾಗಿದೆ. ಈ ಹಣ ವಸೂಲಿ ಮಾಡಿ ಎಂದು ಸರ್ಕಾರದ ಸೂಚನೆ ಇದ್ದರೂ ಇನ್ನೂ ಸಹ ತನಿಖೆ ಮಾಡಲು ಮುಂದಾಗದೆ. ಈ ಅಕ್ರಮವನ್ನು ಮುಚ್ಚಿಹಾಕುವ ಹುನ್ನಾರ ನಡೆಸಲಾಗುತ್ತಿದೆ ಎಂದು ದೂರಿದರು.