ಕನಿಷ್ಠ ಕಬ್ಬಿಗೆ . 500 ಹೆಚ್ಚಳಕ್ಕೆ ಆಗ್ರಹಿಸಿ ರೈತರು ಕಳೆದ ಆರು ತಿಂಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ಸ್ಪಂದಿಸದ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಡಿ.19ಕ್ಕೆ ಮಂಡ್ಯ ಬಂದ್‌ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

 ಮೈಸೂರು (ಡಿ.16): ಕನಿಷ್ಠ ಕಬ್ಬಿಗೆ . 500 ಹೆಚ್ಚಳಕ್ಕೆ ಆಗ್ರಹಿಸಿ ರೈತರು ಕಳೆದ ಆರು ತಿಂಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ಸ್ಪಂದಿಸದ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಡಿ.19ಕ್ಕೆ ಮಂಡ್ಯ ಬಂದ್‌ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ಕಬ್ಬು ಬೆಲೆ (Sugar Cane Price) ನಿಗದಿ ಮಾಡದ ಸರ್ಕಾರದದ (Govt) ನೀತಿಯನ್ನು ಖಂಡಿಸಿ ಡಿ.19 ರಂದು ಮಂಡ್ಯ ಬಂದ್‌ಗೆ ಅನೇಕ ಸಂಘಟನೆಗಳು ಬೆಂಬಲ ಕೊಟ್ಟಿವೆ. ಸರ್ಕಾರ ಟನ್‌ ಒಂದಕ್ಕೆ ಕೇವಲ . 50 ಹೆಚ್ಚಿಸಿ ಕೈ ತೊಳೆದುಕೊಂಡಿದೆ. ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್‌ಅರ್‌ಪಿ ಬೆಲೆ ಖರ್ಚನ್ನು ವಾಪಸ್‌ ಭರಿಸುತ್ತಿಲ್ಲ. ರಾಜ್ಯ ಸರ್ಕಾರ ಕನಿಷ್ಠ . 500 ಟನ್‌ ಒಂದಕ್ಕೆ ಹೆಚ್ಚುವರಿಯಾಗಿ ಎಸ್‌ಎಪಿ ಘೋಷಣೆ ಮಾಡಬೇಕು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಜಿಲ್ಲಾದ್ಯಂತ ಎಲ್ಲಾ ಗ್ರಾಮಗಳಿಂದ ಮಹಿಳೆಯರೂ ಸೇರಿ 15 ಸಾವಿರಕ್ಕೂ ಹೆಚ್ಚು ಜನ ಸೇರಿ ಬೃಹತ್‌ ಮೆರವಣಿಗೆ ನಡೆಯಲಿದೆ. ಮೈಸೂರು, ಚಾಮರಾಜನಗರ, ಕೊಡಗು ಮತ್ತು ರಾಮನಗರ ಜಿಲ್ಲೆ ರೈತರೂ ಕೂಡ ಈ ಬಂದ್‌ನಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಟನ್‌ ಕಬ್ಬಿಗೆ . 4500 ಬೆಲೆ ನಿಗದಿ ಮಾಡುವಂತೆ, ಲೀಟರ್‌ ಹಾಲಿಗೆ . 40 ನಿಗದಿಗೆ, ಭತ್ತ ಬೆಳೆಗಾರರಿಗೆ ಪ್ರೋತ್ಸಾಹಧನ ಭರಿಸುವಂತೆ ಆಗ್ರಹಿಸಿ ಡಿ.20ಕ್ಕೆ ಸುರ್ವಣಸೌಧ ಮುತ್ತಿಗೆ ಹಾಕಲು ರೈತ ಸಂಘಟನೆಗಳು ನಿರ್ಧರಿಸಿವೆ. ರೈತ ವಿರೋಧಿ ನಿಲುವನ್ನು ಖಂಡಿಸಿ ಜನಸಂಕಲ್ಪ ಯಾತ್ರೆ ವಿರುದ್ಧ ಪ್ರತಿಭಟನೆ ನಡೆಸಲು ರೈತ ಸಂಘ ಕರೆ ನೀಡಿದೆ. ಕಬ್ಬು ಬಲೆ ನಿಗದಿಗೆ ಆಗ್ರಹಿಸಿ, ವಿರೋಧ ಪಕ್ಷಗಳು ಸದನದಲ್ಲಿ ಧನಿ ಎತ್ತಬೇಕು. ವಿರೋಧ ಪಕ್ಷಗಳು ಧನಿ ಎತ್ತಬೇಕೆಂದು ಒತ್ತಾಯಿಸಿ, ಸಂಘವು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಪತ್ರ ಬರೆದು ಒತ್ತಾಯಿಸಿದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌, ಮುಖಂಡರಾದ ಪ್ರಸನ್ನ ಎನ್‌. ಗೌಡ, ನೇತ್ರಾವತಿ, ಹೊಸಕೋಟೆ ಬಸವರಾಜು, ಪಿ. ಮರಂಕಯ್ಯ ಇದ್ದರು.

ರೈತರಿಗೆ ಮೋಸ

ಶಿವಮೊಗ್ಗ : ರೈತರು ಕೊಳ್ಳುವ ಬಿತ್ತನೆಬೀಜ, ಗೊಬ್ಬರ, ಕೂಲಿ ಹಾಗೂ ಸಾಗಾಣಿಕೆ ವೆಚ್ಚ 3 ಪಟ್ಟು ಹೆಚ್ಚಾಗಿದೆ. ಆದರೂ ಕೇಂದ್ರ ಸರ್ಕಾರ ಕಬ್ಬಿಗೆ ಎಫ್‌ಆರ್‌ಪಿ ಮೋಸದ ಬೆಲೆ ನಿಗದಿ ಮಾಡಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್‌.ಆರ್‌.ಬಸವರಾಜಪ್ಪ ಆರೋಪಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸರ್ಕಾರ ಕಬ್ಬಿಗೆ ಈಗಲೂ 5 ವರ್ಷದ ಹಿಂದಿನ ಬೆಲೆಯನ್ನೇ ನಿಗದಿ ಮಾಡಿದೆ. ಪ್ರಮುಖವಾಗಿ ಉತ್ತರ ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ಇನ್ನೂ ಉಳಿದಿದೆ. ರೈತರು ಚಳುವಳಿ ಮಾಡಿದರೂ ಸರ್ಕಾರ ಗಮನಹರಿಸುತ್ತಿಲ್ಲ ಎಂದು ದೂರಿದರು.

ಟನ್‌ಗೆ 50 ಹೆಚ್ಚಳ ಆದೇಶ ಸುಟ್ಟು ಕಬ್ಬು ರೈತರ ಭಾರೀ ಪ್ರತಿಭಟನೆ

ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು. ಬ್ಯಾಂಕ್‌ಗಳು ರೈತ ಆಸ್ತಿ ಜಪ್ತಿ, ಹರಾಜು, ಆನ್‌ಲೈನ್‌ ಹರಾಜು ಮಾಡುತ್ತಿರುವುದರ ವಿರುದ್ಧ ಸಿಎಂ ಕಾನೂನು ಮಾಡುತ್ತೇವೆ ಎಂದು ಹೇಳಿದ್ದರೂ, ಈ ಕಾನೂನು ಕೂಡಲೇ ಜಾರಿಗೆ ತರಬೇಕು. ಸರ್ಕಾರ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕ್ವಿಂಟಲ್‌ ಭತ್ತಕ್ಕೆ .500 ಪ್ರೋತ್ಸಾಹಧನ ನೀಡುತ್ತಿರುವಂತೆ ಎಲ್ಲ ಜಿಲ್ಲೆಯ ರೈತರಿಗೂ ಕೊಡಬೇಕು. ಕೇಂದ್ರ ಸರ್ಕಾರ ವಿದ್ಯುತ್‌ ಖಾಸಗೀಕರಣ ಮಸೂದೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಇದರ ಜೊತೆಗೆ ಭತ್ತ, ರಾಗಿ, ಮೆಕ್ಕೆಜೋಳ,ತೊಗರಿ, ಕಡಲೆ, ಉದ್ದು, ಹೆಸರು, ಹತ್ತಿ, ಸೂರ್ಯಕಾಂತಿ, ಶೇಂಗಾ ಮುಂತಾದ ಬೆಳೆಗಳ ಬೆಲೆಯೂ ಕುಸಿದಿದೆ. ಸರ್ಕಾರ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆಯಬೇಕು ಮತ್ತು ಭತ್ತಕ್ಕೆ ಕೆಲವು ಜಿಲ್ಲೆಗಳಲ್ಲಿ ಮಾತ್ರ 500 ರು., ಪೋ›ತ್ಸಾಹ ಧನವಿದೆ. ಇದನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಬೇಕು. ಮತ್ತು ಹಾಲಿನ ಖರೀದಿ ದರವನ್ನು ಹೆಚ್ಚಿಸಬೇಕು. ಎಸ್‌ಸಿ, ಎಸ್‌ಟಿಗೆ ಮಾತ್ರವಲ್ಲದೆ ಎಲ್ಲಾ ಬಿಪಿಎಲ್‌ ಕಾರ್ಡುದಾರರಿಗೂ ಉಚಿತ ವಿದ್ಯುತ್‌ ನೀಡಬೇಕು ಎಂದು ಆಗ್ರಹಿಸಿದರು.

ಅಡಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಭೂತಾನ್‌ನಿಂದ ಅಡಕೆ ಆಮದನ್ನು ನಿಲ್ಲಿಸಬೇಕು. ಕಳ್ಳ ಸಾಗಾಣಿಕೆ ತಡೆಗಟ್ಟಬೇಕು. ಎಲೆ ಚುಕ್ಕಿ, ಹಳದಿ ಎಲೆ, ಮುಂತಾದ ರೋಗಗಳಿಂದ ಅಡಿಕೆ ಬೆಳೆಗಾರರಿಗೆ ಸಂಕಷ್ಟವಗಿದ್ದು, ಕೂಡಲೆ ಪರಿಹಾರ ನೀಡಬೇಕು. ರಾಜ್ಯ ಸರ್ಕಾರ ರೈತವಿರೋಧಿ ಮೂರು ಕೃಷಿ ಕಾಯಿದೆಗಳನ್ನು ವಾಪಾಸು ಪಡೆಯಬೇಕು ಎಂದು ಒತ್ತಾಯಿಸಿದರು.