ತಬ್ಬಿಕೊಂಡವನ ಹಿಡಿದ ಜನರು| ಎಳೆದಾಟದಿಂದ ಮಹಿಳೆ ಕೈಗೆ ಗಾಯ| ಹಲಸೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ

ಬೆಂಗಳೂರು[ಜ.16]: ಮನೆ ಮುಂದೆ ಸ್ವಚ್ಛತಾ ಕಾರ‍್ಯ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಹಿಂಬದಿಯಿಂದ ಬಲವಂತವಾಗಿ ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿದ ಘಟನೆ ಹಲಸೂರು ವ್ಯಾಪ್ತಿಯ ಜೋಗುಪಾಳ್ಯದಲ್ಲಿ ನಡೆದಿದೆ. ಈ ವೇಳೆ ಮಹಿಳೆ ಜೋರಾಗಿ ಕಿರುಚಿದ್ದರಿಂದ ಸಾರ್ವಜನಿಕರು ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ. ಅಲ್ಲದೆ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಪಿಯನ್ನು ರಾಕೇಶ್‌ ಎಂದು ಗುರುತಿಸಲಾಗಿದೆ. ಮಹಿಳೆ ತನ್ನ ಮನೆಯ ಮುಂದೆ ಸೋಮವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಸ್ವಚ್ಛತೆಯಲ್ಲಿ ತೊಡಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಆರೋಪಿ ಆಕೆಯನ್ನು ಹಿಂದಿನಿಂದ ತಬ್ಬಿಕೊಂಡಿದ್ದಾನೆ. ಅಲ್ಲದೆ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಘಟನೆಯಿಂದ ತೀವ್ರ ಅಘಾತಕ್ಕೆ ಒಳಗಾದ ಮಹಿಳೆ ತಕ್ಷಣ ಚೀರಿಕೊಂಡಿದ್ದಾರೆ. ಅಲ್ಲದೆ ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ರಾಕೇಶ್‌ ಆಕೆಯನ್ನು ಎಳೆದಾಡಿದ್ದರಿಂದ ಮಹಿಳೆಯ ಕೈಗೆ ಗಾಯವಾಗಿದೆ. ಈ ವೇಳೆ ಮಹಿಳೆಯ ಕಿರುಚಾಟ ಕೇಳಿದ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದಾರೆ.

ಈ ವೇಳೆ ರಾಕೇಶ್‌ ಸ್ಥಳದಿಂದ ಓಡಿ ಹೋಗಲು ಯತ್ನಿಸಿದ್ದಾನೆ. ಆತನನ್ನು ತಕ್ಷಣ ಬೆನ್ನತ್ತಿದ ಮಹಿಳೆ ಮತ್ತು ಸಾರ್ವಜನಿಕರು ಆತನನ್ನು ಹಿಡಿದಿದ್ದಾರೆ. ಹಲಸೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.