Asianet Suvarna News Asianet Suvarna News

ನಾಯಿಗೆ ಪೆಟ್ಟು: ಆಕ್ಷೇಪಿಸಿದವನ ಕೈ ಕಟ್‌..!

ನಾಯಿಗೆ ಹೊಡೀಬೇಡ ಎಂದಿದ್ದಕ್ಕೇ ಯುವಕನ ಕೈ ಕಟ್‌ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ನಾಯಿ ನಾರಾಯಣಸ್ವಾಮಿ ಇದ್ದ ಹಾಗೇ. ಹಾಗೆ ಹೊಡೆಯಬಾರದು ಎಂದಿದ್ದಕ್ಕೇ ಯುವಕನ ಕೈ ಕಟ್ ಆಗಿದೆ.

man attacked for stopping woman from beating dog in Tumakuru
Author
Bangalore, First Published Jan 10, 2020, 8:43 AM IST

ತುಮಕೂರು(ಜ.10): ತನ್ನನ್ನು ನೋಡಿ ನಾಯಿ ಬೊಗಳಿತೆಂದು ಸಿಟ್ಟುಗೊಂಡ ಮಹಿಳೆಯೊಬ್ಬರು ಕೋಲಿನಿಂದ ಹೊಡೆಯುತ್ತಿದ್ದರು. ಇದನ್ನು ಗಮನಿಸಿದ ಯುವಕ ಆಕ್ಷೇಪಿಸಿದ ತಪ್ಪಿಗೆ ಆಕೆಯ ಮಗ ಆಕ್ಷೇಪಿಸಿದವನ ಹಸ್ತವನ್ನೇ ಕಟ್‌ ಮಾಡಿದ ಘಟನೆ ತುರುವೇಕೆರೆ ಸಮೀಪದ ಮುಗಳೂರಿನಲ್ಲಿ ನಡೆದಿದೆ.

ಮುಗಳೂರಿನಲ್ಲಿ ಇಂದು ಬೆಳಗ್ಗೆ 10 ಗಂಟೆಯ ವೇಳೆಗೆ ನಾಯಿಯೊಂದು ಗ್ರಾಮದ ಪುಟ್ಟಮ್ಮ ಎಂಬುವವರನ್ನು ನೋಡಿ ಬೊಗಳಿದೆ. ಸಿಟ್ಟಿಗೆದ್ದ ಮಹಿಳೆ ನಾಯಿಗೆ ಕೋಲಿನಿಂದ ಹೊಡೆದಿದ್ದಾರೆ. ಇದನ್ನು ಗಮನಿಸಿದ ಅದೇ ಗ್ರಾಮದ ಸಚಿನ್‌ (23) ಎಂಬವವನು ನಾಯಿ ನಾರಾಯಣಸ್ವಾಮಿ ಇದ್ದ ಹಾಗೇ. ಹಾಗೆ ಹೊಡೆಯಬಾರದು. ನಿನಗೇ ಹಾಗೆ ಯಾರಾದರೂ ಹೊಡೆದರೆ ಏನು ಮಾಡ್ತೀಯಾ ಎಂದು ಪ್ರಶ್ನಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪುಟ್ಟಮ್ಮ ಸಚಿನ್‌ ನೊಂದಿಗೆ ಜಗಳಕ್ಕೆ ಇಳಿದಿದ್ದಾರೆ.

ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಆಟೋ: ಮೂವರು ಸ್ಥಳದಲ್ಲೇ ಸಾವು

ಇದನ್ನು ಗಮನಿಸಿದ ಪುಟ್ಟಮ್ಮಳ ಮಗ ಲೇಪಾಕ್ಷಿ ತನ್ನ ತಾಯಿಯೊಂದಿಗೆ ಜಗಳ ಮಾಡಿದ ಸಚಿನ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಇಬ್ಬರೂ ಕೈ ಕೈ ಮಿಲಾಯಿಸಿದ್ದಾರೆ. ಗ್ರಾಮಸ್ಥರು ಇಬ್ಬರನ್ನೂ ಸಮಾಧಾನಪಡಿಸಿ ಮನೆಗೆ ಕಳಿಸಿದ್ದಾರೆ. ಆದರೂ ಸಮಾಧಾನಗೊಳ್ಳದ ಲೇಪಾಕ್ಷಿ ಅರ್ಧಗಂಟೆಯ ನಂತರ ತನ್ನ ಸ್ನೇಹಿತ ಚೇತನ್‌ ನೊಂದಿಗೆ ಮಚ್ಚಿನ ಸಹಿತ ಬಂದವನೇ ಮನೆಯ ಮುಂದೆ ನಿಂತಿದ್ದ ಸಚಿನ್‌ನ ತಲೆಗೆ ಹೊಡೆಯಲು ಮುಂದಾಗಿದ್ದಾನೆ. ರಕ್ಷಣೆ ಮಾಡಲು ಸಚಿನ್‌ ಎಡಗೈ ಮುಂದೆ ಮಾಡಿದ್ದಾನೆ. ಆ ವೇಳೆ ಹರಿತವಾದ ಮಚ್ಚು ಸಚಿನ್‌ ಎಡಗೈನ ಹಸ್ತವನ್ನು ತುಂಡರಿಸಿದೆ.

ಕೂಡಲೇ ಅಲ್ಲಿಂದ ಲೇಪಾಕ್ಷಿ ಹಾಗೂ ಚೇತನ್‌ ಪರಾರಿಯಾಗಿದ್ದಾರೆ. ಗ್ರಾಮಸ್ಥರು ತುಂಡಾದ ಎಡ ಹಸ್ತದೊಂದಿಗೆ ಕೂಡಲೇ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಬೆಂಗಳೂರಿನ ಸ್ಪರ್ಶ ಹಾಸ್ಪಿಟಲ್‌ಗೆ ಸಚಿನ್‌ನನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ತಾಯಿ ಕಣ್ಣೆದುರೇ ಮಗನನ್ನು ಕೊಂದು ಹಾಕಿದ ಚಿರತೆ..!

ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಲೋಕೇಶ್‌ ಮತ್ತು ಎಸ್‌ಐ ಗಂಗಾಧರ್‌ ಮಹಜರು ಕಾರ್ಯ ನಡೆಸಿದ್ದಾರೆ. ನಾಪತ್ತೆಯಾಗಿರುವ ಲೇಪಾಕ್ಷಿ ಮತ್ತು ಸಚಿನ್‌ಗಾಗಿ ಬಲೆ ಬೀಸಿದ್ದಾರೆ. ಲೇಪಾಕ್ಷಿಯ ಪೊಷಕರೂ ಸಹ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದಾರೆ ಎಂದು ಪೋಲಿಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಲೋಕೇಶ್‌ ತಿಳಿಸಿದ್ದಾರೆ.

Follow Us:
Download App:
  • android
  • ios