ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಬ್ಬಂದಿ ಕಣ್ತಪ್ಪಿನಿಂದ ಪ್ರಸಾದದ ಜೊತೆಗೆ ಭಕ್ತನ ಪಾಲಾದ 2 ಲಕ್ಷ ರೂಪಾಯಿ ಪ್ರಕರಣ ಅಂತ್ಯಕಂಡಿದೆ. ಕಣ್ತಪ್ಪಿನಿಂದ ಪ್ರಸಾದದ ಜೊತೆ ಕೊಟ್ಟಿದ್ದ ಹಣವನ್ನು ಭಕ್ತ  ಹಿಂದಿರುಗಿಸಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.

ಚಾಮರಾಜನಗರ (ಜು.31): ಗಡಿ ಜಿಲ್ಲೆ ಚಾಮರಾಜನಗರದ ಶ್ರೀಮಂತ ದೇವರು ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಬ್ಬಂದಿ ಕಣ್ತಪ್ಪಿನಿಂದ ಪ್ರಸಾದದ ಜೊತೆಗೆ ಭಕ್ತನ ಪಾಲಾದ 2 ಲಕ್ಷ ರೂಪಾಯಿ ಪ್ರಕರಣ ಅಂತ್ಯಕಂಡಿದೆ. ಕಣ್ತಪ್ಪಿನಿಂದ ಪ್ರಸಾದದ ಜೊತೆ ಕೊಟ್ಟಿದ್ದ ಹಣವನ್ನು ಭಕ್ತ ಹಿಂದಿರುಗಿಸಿದ್ದು, ಪ್ರಕರಣ ಸುಖಾಂತ್ಯ ಕಂಡಿದ್ದು. ಹಣದ ಚೀಲ ಕೊಟ್ಟಿದ್ದ ನೌಕರನಿಗೂ ನೆಮ್ಮದಿ ಸಿಕ್ಕಿದಂತಾಗಿದೆ. ಬೆಂಗಳೂರು ಜಿಲ್ಲೆ ಯಶವಂತಪುರ ತಾಲೂಕು ಮೇದರಹಳ್ಳಿಯ ನರಸಿಂಹಮೂರ್ತಿ ಎಂಬ ತನಗೆ ಪ್ರಸಾದದ ಚೀಲದಲ್ಲಿ ಸಿಕ್ಕಿದ್ದ ಹಣವನ್ನು ಪೊಲೀಸರ ಸಮ್ಮುಖದಲ್ಲಿ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜುಗೆ ಹಿಂದಿರುಗಿಸಿದ್ದಾನೆ. ಅಭಿಷೇಕ ಪ್ರಸಾದದ ಟಿಕೆಟ್ ಪಡೆದಿದ್ದ ಭಕ್ತ ನರಸಿಂಹ ಮೂರ್ತಿಗೆ ಪ್ರಸಾದದ ಚೀಲಗಳನ್ನು ನೀಡುವಾಗ ಹಣವಿದ್ದ ಚೀಲವೊಂದನ್ನು ಆಕಸ್ಮಿಕವಾಗಿ ಎತ್ತಿಕೊಟ್ಟಿದ್ದ ನೌಕರ ನಾಗಭೂಷಣ. ಸಿಬ್ಬಂದಿ ಕೆಲಸದ ಒತ್ತಡದಿಂದ ಲಾಡು ಪ್ರಸಾದದ ಜೊತೆಗೆ 2.93 ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್ ಅನ್ನು ಕಣ್ತಪ್ಪಿನಿಂದ ಭಕ್ತನಿಗೆ ಕೊಟ್ಟಿದ್ದ. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಮಲೆಮಹದೇಶ್ವರಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. 

Add Asianetnews Kannada as a Preferred SourcegooglePreferred

ಭಕ್ತ ನರಸಿಂಹಮೂರ್ತಿ ಹಣವನ್ನು ಒಪ್ಪಿಸಿದ ಬಳಿಕ, ಮನೆಯಲ್ಲಿ ಪ್ರಸಾದದ ಜೊತೆ ಹಣವಿರುವುದನ್ನು ನೋಡಿ ಗಾಬರಿಗೊಂಡಿದ್ದೆ. ತಕ್ಷಣ ದೇವಸ್ಥಾನದ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಮಲೆಮಹದೇಶ್ವರ ಬೆಟ್ಟಕ್ಕೆ ದಿನಾಲೂ ಸಾವಿರಾರು ಭಕ್ತರು ಬರುತ್ತಾರೆ. ಅದರಲ್ಲೂ ಅಮಾವಾಸ್ಯೆ ದಿನದಂದ ಲಕ್ಷಾಂತರ ಭಕ್ತರು ಮಾದಪ್ಪನ ಸನ್ನಿಧಾನಕ್ಕೆ ಹರಿದು ಬರುತ್ತಾರೆ‌. ಗುರುವಾರ ಭೀಮನ ಅಮಾವಾಸ್ಯೆ ಆಗಿದ್ದರಿಂದ ಲಕ್ಷಾಂತರ ಭಕ್ತರು ಮಾದಪ್ಪನ ದರ್ಶನಕ್ಕೆ ಬಂದಿದ್ದರು. ಈ ವೇಳೆ ವಿಶೇಷ ದರ್ಶನ ಮುಗಿಸಿ ಸೇವಾ ಕೌಂಟರ್‌ಗೆ ಬಂದ ಭಕ್ತ ನರಸಿಂಹಮೂರ್ತಿಗೆ ಇಲ್ಲಿನ ಸಿಬ್ಬಂದಿ ಆಚಾತುರ್ಯವಾಗಿ ಲಾಡು ಪ್ರಸಾದದ ಜೊತೆ 2.93 ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್ ಕೊಡಲಾಗಿತ್ತು.

ಇನ್ನು ಪ್ರಾಧಿಕಾರದ ಬೊಕ್ಕಸಕ್ಕೆ ನಷ್ಟವಾದ ಹಣವನ್ನು ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯಿಂದಲೇ ಜಮಾ ಮಾಡಿಸಲು ತಾಕೀತು ಮಾಡಲಾಗಿತ್ತು. ಪ್ರಸಾದದ ಜೊತೆ ಹಣವನ್ನೂ ಭಕ್ತನಿಗೆ ಕೊಟ್ಟು ಎಡವಟ್ಟು ಮಾಡಿದ್ದ ಸಹೋದ್ಯೋಗಿಗೆ ಪ್ರಾಧಿಕಾರದ ನೌಕರರು ನೆರವು ನೀಡಿದ್ದರು. ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ನೌಕರರ ಸಂಘದ ಅಧ್ಯಕ್ಷ ಬಿ ಮಹದೇವಪ್ರಸಾದ್‌, ಗೌರವ ಅಧ್ಯಕ್ಷ ಕೆ.ಮಹದೇವಸ್ವಾಮಿ ಹಾಗೂ ಕೆ.ಪಿ ಮಹದೇವಸ್ವಾಮಿ, ಪೌರಕಾರ್ಮಿಕ ಸಂಘದ ಅಧ್ಯಕ್ಷ ಗೋಪಾಲ್‌ ನೇತೃತ್ವದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿದೇವಿ ಅವರ ಮೂಲಕ ಒಂದು ಲಕ್ಷ ರು. ಚೆಕ್‌ ಕೊಡುವ ಮೂಲಕ ಹೊರಗುತ್ತಿಗೆ ನೌಕರನಿಗೆ ನೆರವಾಗಿದ್ದಾರೆ. ಪ್ರಸಿದ್ಧ ತೀರ್ಥಕ್ಷೇತ್ರ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರದಂದು ಲಾಡು ಪ್ರಸಾದದ ಜೊತೆ 2.91 ಲಕ್ಷ ಹಣದ ಬ್ಯಾಗ್‌ ನ್ನು ಕೊಟ್ಟಿದ್ದರು. ಬೊಕ್ಕಸಕ್ಕೆ ನಷ್ಟವಾದ ಹಣವನ್ನು ನೌಕರನೇ ಕಟ್ಟುವಂತೆ ಅಧಿಕಾರಿಗಳು ತಾಕೀತು ಮಾಡಿದ್ದರು.