ಕೊರೋನಾ ಭಯದಲ್ಲೂ ಜಾತ್ರೆ : ಬೆಳ್ಳಿ ಪಲ್ಲಕ್ಕಿಯಲ್ಲಿ ಭವಿಷ್ಯ ನುಡಿಯುವ ಕೋಡಿ ಶ್ರೀ ಗಳ ಉತ್ಸವ
ಭವಿಷ್ಯ ನುಡಿಯುವ ಕೋಡಿ ಮಠದ ಶ್ರೀಗಳ ಉತ್ಸವ ನಡೆದಿದ್ದು, ಬೆಳ್ಳಿ ಪಲ್ಲಕ್ಕಿಯಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಗಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ನಡೆದಿದೆ.
ಹಾರನಹಳ್ಳಿ [ಮಾ.13]: ಕೋಡಿಮಠ ಶ್ರೀ ಮಹದೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಕೋಡಿಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಗುರುವಾರ ಹಾರನಹಳ್ಳಿಯಲ್ಲಿ ವಿಜೃಂಭಣೆಯಿಂದ ಉತ್ಸವ ಮಾಡಲಾಯಿತು.
ಶ್ರೀ ಮಠದ ಅಲಂಕೃತವಾದ ಬೆಳ್ಳಿ ಪಲ್ಲಕ್ಕಿಗೆ ವಿವಿಧ ಬಗ್ಗೆಯ ಬಣ್ಣ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಉತ್ಸವದಲ್ಲಿ ಜಾನಪದ ಕಲಾ ಪ್ರಕಾರಗಳಾದ ವೀರಗಾಸೆ, ಭಜನೆ, ಕರಡೆ ಮಜಲು, ನಂದಿಧ್ವಜ,ಕಹಳೆ ನಾದಸ್ವರ ವಾದ್ಯಗಳು ಈ ಉತ್ಸವಕ್ಕೆ ಮೆರಗು ನೀಡಿತು.
ಕೊರೋನಾ ಭಯದ ನಡುವೆಯೂ ಜಾತ್ರಾ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ
ಭವಿಷ್ಯ ನುಡಿಯುವ ಕೋಡಿ ಮಠದ ಶ್ರೀಗಳಿಂದ ಜೋಳಿಗೆ ಹಿಡಿದು ಭಿಕ್ಷಾಟನೆ...
ಗ್ರಾಮದಲ್ಲಿ ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದು, ಮನೆ ಮುಂಭಾಗದಲ್ಲಿ ರಂಗೋಲಿ ಚಿತ್ರಗಳು ಆಕರ್ಷಕವಾಗಿತ್ತು. ಹಾಗೆಯೇ ಸ್ವಾಮೀಜಿಯವರಿಗೆ ಗ್ರಾಮದ ಎಲ್ಲಾ ಸಮುದಾಯದ ಬಾಂಧವರು ಗ್ರಾಮ ಪಂಚಾಯತಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಪದಾಧಿಕಾರಿಗಳು ಮತ್ತು ಮನೆ ಮನೆ ಮುಂದೆ ಹಾರ ಫಲ ಸಮರ್ಪಿಸಿ ಆಶೀರ್ವಾದ ಪಡೆದರು.
ನಂತರ ಮಹದೇಶ್ವರ ಬೆಟ್ಟದಲ್ಲಿ ಗುಗ್ಗುಳ ಸೇವೆ, ಹೆಜ್ಜೆ ನಮಸ್ಕಾರ ಮುತ್ತೈದೆ ಸೇವೆ ನಡೆದ ನಂತರ ಮಹಾದಾಸೋಹ ಏರ್ಪಡಿಸಲಾಗಿತ್ತು. ಬೇರೆ ಬೇರೆ ಊರುಗಳಿಂದ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.