ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದಾದ ಲಾಕೀಡ್‌ ಮಾರ್ಟಿನ್‌ ಕಂಪನಿ| ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದ ಏರೋಸ್ಪೇಸ್‌ ಕಂಪನಿಯ ಉಪಾಧ್ಯಕ್ಷ

ಬೆಂಗಳೂರು(ಜ.29): ಏರೋಸ್ಪೇಸ್‌ ವಲಯದ ಮುಂಚೂಣಿಯ ಕಂಪನಿ ಲಾಕೀಡ್‌ ಮಾರ್ಟಿನ್‌ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದಾಗಿದ್ದು, ಕಂಪನಿಯ ಉಪಾಧ್ಯಕ್ಷ ರಿಚರ್ಡ್‌ ಎಫ್‌.ಎಂಬ್ರೋಸ್‌ ಅವರು ಮುಖ್ಯಮಂತ್ರಿಗಳ ಭೇಟಿಯ ಮರುದಿನವೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಈ ಕುರಿತು ಪತ್ರ ಬರೆದು, ತಮ್ಮ ಕಂಪನಿಯ ಭಾರತದ ಮುಖ್ಯಸ್ಥರು ಸಂಪರ್ಕಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿಗಳು, ಲಾಕೀಡ್‌ ಮಾರ್ಟಿನ್‌ ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷ ರಿಚರ್ಡ್‌ ಎಂಬ್ರೋಸ್‌ ಬರೆದ ಪತ್ರ ಇಂದು ತಲುಪಿದೆ. ಮೇಲ್ನೊಟಕ್ಕೆ ಇದೊಂದು ಸಾಮಾನ್ಯ ಪತ್ರವೆನಿಸಿದರೂ ಅದರ ಗಹನತೆಯನ್ನು ನಿಮ್ಮ ಗಮನಕ್ಕೆ ತರಬಯಸುತ್ತೇನೆ. ಲಾಕೀಡ್‌ ಮಾರ್ಟಿನ್‌ ಅಮೆರಿಕದ ಏರೋಸ್ಪೇಸ್‌ ವಲಯದ ಬೃಹತ್‌ ಕಂಪನಿಯಾಗಿದ್ದು, ಅದು ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಲು ಉತ್ಸುಕವಾಗಿದೆ ಎಂಬುದನ್ನು ತೋರಿಸುತ್ತದೆ. ನಮ್ಮ ದಾವೋಸ್‌ ಭೇಟಿ ಫಲಪ್ರದವಾಗಿದೆ ಎಂದು ಹೇಳಲು ಇದು ಒಂದು ಉದಾಹರಣೆ ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಪತ್ರ ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಿಸುವ ಬಗ್ಗೆ ನಮ್ಮ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಇದಲ್ಲದೆ ನಮ್ಮ ದಾವೋಸ್‌ ಭೇಟಿ ಬಗ್ಗೆ ಅನುಮಾನ ವ್ಯಕ್ತಪಡಿಸುವವರಿಗೆ ಇದು ಉತ್ತರವಾಗಿದೆ. ದಾವೋಸ್‌ ಭೇಟಿ ನಮ್ಮ ರಾಜ್ಯಕ್ಕೆ ಬಂಡವಾಳ ಹರಿದು ಬರುವಲ್ಲಿ ಮತ್ತು ನವೆಂಬರ್‌ನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ (ಜಿ.ಐ.ಎಂ) ಯಶಸ್ವಿ ಕಾಣುತ್ತೇವೆ ಎಂಬ ನಮ್ಮ ನಂಬಿಕೆ ಗಟ್ಟಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.