ಕುಮಟಾದ ಸಿಹಿ ಈರುಳ್ಳಿಗೆ ಜಿಯೋಗ್ರಫಿಕಲ್‌ ಇಂಡಿಕೇಶನ್‌ (ಜಿಐ) ಟ್ಯಾಗ್‌ ಮಾನ್ಯತೆಗೆ ಪ್ರಯತ್ನಿಸಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು. ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ದಿಶಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರವಾರ (ಜ.7) : ಕುಮಟಾದ ಸಿಹಿ ಈರುಳ್ಳಿಗೆ ಜಿಯೋಗ್ರಫಿಕಲ್‌ ಇಂಡಿಕೇಶನ್‌ (ಜಿಐ) ಟ್ಯಾಗ್‌ ಮಾನ್ಯತೆಗೆ ಪ್ರಯತ್ನಿಸಬೇಕು ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು. ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ದಿಶಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಈರುಳ್ಳಿ ಕೇವಲ ಕುಮಟಾದ ಕೆಲವು ಪ್ರದೇಶದಲ್ಲಿ ಮಾತ್ರ ಬೆಳೆಯುತ್ತಾರೆ. ಬೇರೆಲ್ಲೂ ಬೆಳೆಯುವುದಿಲ್ಲ. ತನ್ನದೇ ಆದ ವಿಶಿಷ್ಟತೆ ಹೊಂದಿದೆ. ಹೀಗಾಗಿ ಜಿಐ ಟ್ಯಾಗ್‌ ಮಾಡಬಹುದಾಗಿದ್ದು, ಎಷ್ಟುಪ್ರದೇಶದಲ್ಲಿ ಬೆಳೆಯುತ್ತಾರೆ? ವಿಸ್ತರಣೆ ಮಾಡಲು ಸಾಧ್ಯವೇ ಎಂದು ಪರಿಶೀಲಿಸಬೇಕು. ಮುಂದಿನ ಸಭೆಯಲ್ಲಿ ಈ ಬಗ್ಗೆ ಸಮಗ್ರ ಮಾಹಿತಿ ನೀಡಿ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಅಡಕೆ ಬೆಳೆಯ ಬಗ್ಗೆ ವೈಜ್ಞಾನಿಕ ಅಧ್ಯಯನ ಆಗಬೇಕು. ಆಗೊಮ್ಮೆ ಈಗೊಮ್ಮೆ ಅಡಕೆ ಬಗ್ಗೆ ವಿವಾದಾತ್ಮಕ ಹೇಳಿಕೆಗಳು ಬರುತ್ತಿವೆ. ಜತೆಗೆ ಅಡಕೆ ಬೆಳೆ ಪ್ರದೇಶ ಹೆಚ್ಚಾಗುತ್ತಿದೆ. ಹೀಗಾಗಿ ವಿಸ್ತರಣೆ ಹಿಡಿತದಲ್ಲಿ ಇಡಲು ಏನು ಮಾಡಬೇಕು. ಪ್ರದೇಶ ವಿಸ್ತರಣೆಗೆ ಬೆಂಬಲಿಸಬೇಕೇ ಬೇಡವೇ ಎನ್ನುವ ಬಗ್ಗೆ ಅಧ್ಯಯನ ಕೂಡ ಆಗಬೇಕು. ಇದರಿಂದ ಸರ್ಕಾರದ ಧೋರಣೆ ವೈಜ್ಞಾನಿಕವಾಗಿ ಏನು ಇರಬೇಕು ಎನ್ನುವುದು ತಿಳಿಯುತ್ತದೆ ಎಂದು ಅಭಿಪ್ರಾಯಿಸಿದರು.

PMGSY: ಹಣ ಪೋಲಾಗುವುದನ್ನು ತಪ್ಪಿಸಿದ ಪ್ರಧಾನಿ ಮೋದಿ: ಅನಂತಕುಮಾರ ಹೆಗಡೆ

ಕಾರ್ಮಿಕರಿಂದ ಡಿಜಿಟಲ್‌ ಸಹಿ ಮಾಡಿಸಿ:

ನರೇಗಾ ಯೋಜನೆಯಲ್ಲಿ ಗೊಂದಲ ಉಂಟಾಗುತ್ತಿದ್ದು, ಕೆಲಸ ಮಾಡದೇ ಇರುವವರಿಗೂ ವೇತನ ಹೋಗುತ್ತಿದೆ ಎನ್ನುವ ಆರೋಪವಿದೆ. ಹೀಗಾಗಿ ಕೂಲಿ ಕಾರ್ಮಿಕರಿಂದ ಡಿಜಿಟಲ್‌ ಸಹಿ ಮಾಡಿಸಲು ಯೋಜನೆ ರೂಪಿಸಿಕೊಳ್ಳಿ. ಇದರಿಂದ ಸ್ಪಷ್ಟವಾದ ಅಂಕಿ-ಅಂಶ ಸಿಗಲಿದೆ. ಪೇಪರ್‌ನಲ್ಲಿ ಒಂದು ಲೆಕ್ಕ, ಕೆಲಸದ ಸ್ಥಳದಲ್ಲಿ ಒಂದು ಲೆಕ್ಕ ಆಗುವುದು ತಪ್ಪುತ್ತದೆ ಎಂದರು. ಆಯುಷ್ಮಾನ್‌ ಭಾರತ ಮತ್ತು ಅಬಾ ಕಾರ್ಡ್‌ ವಿತರಣೆ ವಿಳಂಬ ಆಗುತ್ತಿರುವ ಬಗ್ಗೆ ಶಾಸಕಿ ರೂಪಾಲಿ ನಾಯ್ಕ, ದಿನಕರ ಶೆಟ್ಟಿಅಸಮಾಧಾನ ಹೊರಹಾಕಿದರು.

ದಿನಕರ ಶೆಟ್ಟಿಮಾತನಾಡಿ, ಕಾರ್ಡ್‌ ನೀಡಿದರೂ ಪ್ರಯೋಜನ ಇಲ್ಲ. ಅನಾರೋಗ್ಯ ಪೀಡಿತರು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಪತ್ರ ಪಡೆಯಬೇಕು. ಅಲ್ಲಿಂದ ಪತ್ರ ತೆಗೆದುಕೊಂಡು ಬೇರೆಡೆ ಹೋಗಬೇಕು. ಇದು ಎಲ್ಲ ಸಂದರ್ಭದಲ್ಲೂ ಸಾಧ್ಯವಾಗುವುದಿಲ್ಲ ಎಂದರು.

ಈ ವೇಳೆ ಪ್ರತಿಕ್ರಿಯಿಸಿದ ಸಂಸದ ಅನಂತಕುಮಾರ, ಯಾರಿಗೆ ಕಾರ್ಡ್‌ ಮಾಡಿಕೊಡಲು ಅವಕಾಶ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿಯನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಡಿಎಚ್‌ಒ ಡಾ. ಶರದ್‌ ನಾಯಕ, ಗ್ರಾಮ ಒನ್‌ ಸೆಂಟರ್‌ನಲ್ಲೂ ಕಾರ್ಡ್‌ ಮಾಡಲಾಗುತ್ತದೆ ಎಂದರು.

ವಿರೋಧ ಪಕ್ಷಗಳ ನಡೆ ದೇಶಕ್ಕೆ ಮಾರಕ: ಅನಂತಕುಮಾರ ಹೆಗಡೆ

ಎಂಪಿ ಅನಂತಕುಮಾರ, ಬಾಪೂಜಿ ಕೇಂದ್ರದಲ್ಲಿ ಕೊಡಬಹುದೇ? ಸಿಬ್ಬಂದಿ ಇದ್ದಾರೆಯೇ? ಇಂಟರ್‌ನೆಟ್‌ ಹಾಗೂ ಇತರೆ ಸೌಲಭ್ಯ ಇದೆಯೇ ಎಂದು ಪರಿಶೀಲಿಸಿ. 230 ಗ್ರಾಮ ಒನ್‌, 229 ಬಾಪೂಜಿ ಸೇವಾ ಕೇಂದ್ರದಲ್ಲಿ ಅವಕಾಶ ನೀಡುವುದರಿಂದ ಕಾರ್ಡ್‌ ವಿತರಣೆಗೆ ವೇಗ ಸಿಗಲಿದೆ. ಆದಷ್ಟುಶೀಘ್ರದಲ್ಲಿ ಪರಿಶೀಲಿಸಿ ವರದಿಯನ್ನು ನೀಡಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಟ್ಟಿ, ಜಿಪಂ ಸಿಇಒ ಈಶ್ವರ ಕುಮಾರ ಕಂಡೋ, ಶಾಸಕ ಸುನೀಲ ನಾಯ್ಕ, ವಿಪ ಸದಸ್ಯ ಶಾಂತಾರಾಮ ಸಿದ್ದಿ, ಪ್ರಮೋದ ಹೆಗಡೆ ಇದ್ದರು.