*  ಉಚಿತ ಶವಸಂಸ್ಕಾರ ರಾಜ್ಯ ಸರ್ಕಾರದ ಹಳೆಯ ಯೋಜನೆ*  ಬಿಜೆಪಿ ಸರ್ಕಾರವೂ ಯುಪಿಎ ಯೋಜನೆಳನ್ನೇ ಮುಂದುವರಿಸಿಕೊಂಡು ಬರುತ್ತಿದೆ *  ಬೇರೆಯವರ ಯೋಜನೆಗಳ ಹೆಸರು ಬದಲಾಯಿಸುವುದೇ ಬಿಜೆಪಿಯವರ ಹವ್ಯಾಸ 

ಬೆಳಗಾವಿ(ಆ.30): ಬಾಂಡ್‌ ಮೇಲೆ ಖರೀದಿ ಮಾಡಿ ನಿರ್ಮಿಸಿದ ಮನೆಗಳನ್ನು ಸಕ್ರಮಗೊಳಿಸುವುದು 20 ವರ್ಷಗಳ ಹಳೆಯ ಸಮಸ್ಯೆಯಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ಅದನ್ನು ಈಗ ಮತ್ತೆ ಪ್ರಸ್ತಾಪಿಸುತ್ತಿದ್ದಾರೆ. ಇಷ್ಟು ದಿನ ಅವರು ಏನು ಮಾಡುತ್ತಿದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರಶ್ನಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 200 ಮೌಲ್ಯದ ಬಾಂಡ್‌ಗಳ ಮೇಲೆ ನಿರ್ಮಿಸಿದ ಮನೆಗಳನ್ನು ಸಕ್ರಮಗೊಳಿಸವುದು ಹೇಳಿದಷ್ಟು ಸುಲಭವಲ್ಲ. ಮನೆಗಳ ಸಕ್ರಮವನ್ನು ಸರ್ಕಾರ ಅಧಿಕೃತವಾಗಿ ಘೋಷಿಸಬೇಕು. ಇದಕ್ಕೆ ವಿವಿಧ ಇಲಾಖೆಗಳ ಸಹಮತವೂ ಬೇಕು. ಚುನಾವಣೆ ಮುಗಿದ ಮೇಲೆ ಜನರು ಈ ಬಗ್ಗೆ ಯಾರನ್ನು ಕೇಳುವುದು? ಮುಖ್ಯಮಂತ್ರಿಗಳ ಮಟ್ಟದಲ್ಲಿ ಇದು ಚರ್ಚೆಯಾಗಬೇಕು. ಚುನಾವಣೆಗೂ ಮೊದಲೇ ರಾಜ್ಯ ಸರ್ಕಾರವೇ ಮನೆಗಳನ್ನು ಸಕ್ರಮಗೊಳಿಸುವ ಕುರಿತು ಅಧಿಕೃತವಾಗಿ ಘೋಷಿಸಲಿ ಎಂದು ಸತೀಶ ಸವಾಲು ಹಾಕಿದರು.

'ಸುರೇಶ್ ಅಂಗಡಿ ಮೃತದೇಹ ತಂದು ಕೊಡಲು ಆಗಲಿಲ್ಲ ಇವರ ಕೈಯಲ್ಲಿ'

ಬೇರೆಯವರ ಯೋಜನೆಗಳ ಹೆಸರು ಬದಲಾಯಿಸುವುದೇ ಬಿಜೆಪಿಯವರ ಹವ್ಯಾಸ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೂ ಯುಪಿಎ ಯೋಜನೆಗಳ ಹೆಸರನ್ನೇ ಬದಲಾಯಿಸಿ, ಅವುಗಳನ್ನೇ ಮುಂದುವರಿಸಿಕೊಂಡು ಬರುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. 

ಪಾಲಿಕೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ 24/7 ಕುಡಿಯುವ ನೀರಿನ ಯೋಜನೆ, ಕಸ ಸಂಗ್ರಹಣೆ ಸೇರಿ ಬಹುತೇಕ ಎಲ್ಲ ಹಳೆಯ ಯೋಜನೆಗಳೇ ಇವೆ. ಇವರು ಹೊಸದು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಉಚಿತ ಶವಸಂಸ್ಕಾರ ರಾಜ್ಯ ಸರ್ಕಾರದ ಹಳೆಯ ಯೋಜನೆಯಾಗಿದೆ. ಕೋವಿಡ್‌ನಿಂದ ಮೃತರಾದವರಿಗೆ ಉಚಿತ ಶವಸಂಸ್ಕಾರ ಮಾಡುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರವೇ ಕಲ್ಪಿಸಿದೆ. ಇದರಲ್ಲಿ ಹೊಸದೇನು ಇಲ್ಲ ಎಂದರು.