ಬೆಲೆ ಕುಸಿತದ ಹಿನ್ನೆಲೆಯಲ್ಲಿ ಬೇಸತ್ತ ಮುಳಬಾಗಿಲು ತಾಲೂಕಿನ ಬಂಗವಾದಿ ಗ್ರಾಮದ ವೆಂಕಟರಾಮಯ್ಯ ತಾವು ಬೆಳೆದ ಪಪ್ಪಾಯಿ ಗಿಡಗಳನ್ನು ಟ್ರ್ಯಾಕ್ಟರ್‌ ಮೂಲಕ ನಾಶಪಡಿಸಿದ್ದಾರೆ.

ಕೋಲಾರ (ಸೆ.12): ಬೆಲೆ ಕುಸಿತದ ಹಿನ್ನೆಲೆಯಲ್ಲಿ ಬೇಸತ್ತ ಮುಳಬಾಗಿಲು ತಾಲೂಕಿನ ಬಂಗವಾದಿ ಗ್ರಾಮದ ವೆಂಕಟರಾಮಯ್ಯ ಎಂಬುವರು ತಾವು ಬೆಳೆದ ಪಪ್ಪಾಯಿ ಗಿಡಗಳನ್ನು ಟ್ರ್ಯಾಕ್ಟರ್‌ ಮೂಲಕ ನಾಶಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಮಾರುಕಟ್ಟೆಯಲ್ಲಿ ಪಪ್ಪಾಯಿಯನ್ನು ಕೇಳುವವರಿಲ್ಲ, ಪಪ್ಪಾಯಿ ಒಂದು ಕೆಜಿಗೆ 3 ರು.ಗಳಿಂದ 5 ರು.ಗಳಿಗೆ ಮಾರಾಟವಾಗುತ್ತಿವೆ. ಇದರಿಂದಾಗಿ ತಾವು ಬೆಳೆದ ಪಪ್ಪಾಯಿ ಬೆಳೆಗೆ ಅಸಲು ಹಣ ಸಹ ಸಿಗದಂತಾಗಿದೆ ಎಂದು ವೆಂಕಟರಾಮಯ್ಯ ಅಸಹಾಯಕತೆ ವ್ಯಕ್ತಪಡಿಸಿದರು.

ಮೋದಿ ಅಧ್ಯಕ್ಷತೆಯಲ್ಲಿ ಸಭೆ; ಹಿಂಗಾರು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಸಂಪುಟ ಅನುಮೋದನೆ!

ಟನ್‌ಗಟ್ಟಲೆ ಕೊಳೆತ ಪಪ್ಪಾಯಿ : ಅವರು ತಮ್ಮ 2 ಎಕರೆ ಜಮೀನಿನಲ್ಲಿ 3 ಲಕ್ಷ ಬಂಡವಾಳ ಹಾಕಿ ಪಪ್ಪಾಯಿ ಬೆಳೆದಿದ್ದರು. ಈಗಿನ ಬೆಲೆಯಲ್ಲಿ ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಿದರೆ ಸಾಗಾಣಿಕೆ ಕೂಲಿಯೂ ಬರುವುದಿಲ್ಲ ಎಂದು ಲೆಕ್ಕಾಚಾರ ಹಾಕಿ ಫಸಲಿನ ಕಟಾವು ಮಾಡದಿರಲು ನಿರ್ಧರಿಸಿದರು. ಇದರಿಂದಾಗಿ ತೋಟದಲ್ಲೇ ಟನ್‌ಗಟ್ಟಲೆ ಪಪ್ಪಾಯಿ ಕೊಳೆಯುತ್ತಿದೆ.

ಇತ್ತೀಚಿನ ದಿನಗಳಲ್ಲಿ ರೈತರು ಬೆಳೆದ ಯಾವ ಬೆಳೆಗೂ ಬೆಲೆ ಇಲ್ಲದಂತಾಗಿದೆ ರೈತರು ನಷ್ಟವನ್ನು ಅನುಭವಿಸುತ್ತಿದ್ದಾರೆ, ಬ್ಯಾಂಕುಗಳಿಂದ ಮತ್ತು ಕೈ ಸಾಲ ಮಾಡಿ ಬೆಳೆ ಬೆಳೆಯುತ್ತೇವೆ. ಆದರೆ ಮಾರುಕಟ್ಟೆಯಲ್ಲಿ ಬೆಳೆಗೆ ಸರಿಯಾದ ಬೆಲೆ ಸಿಗದೆ ಸಾಲವನ್ನೂ ತೀರಿಸಲಾಗದೆ ಪರದಾಡುವಂತಾಗಿದೆ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡರು.

ತಮ್ಮ ತೋಟದಲ್ಲಿ ಬೆಳೆದ ಪಪ್ಪಾಯಿ ಮರಗಳಲ್ಲಿ ತುಂಬಾ ಕಾಯಿ ಬಿಟ್ಟಿತ್ತು. ಆದರೆ ಬೆಲೆ ಇಲ್ಲದ ಕಾರಣ ಟ್ರ್ಯಾಕ್ಟರ್‌ ಮೂಲಕ Êಗಿಡಗಳನ್ನು ಕಟಾವು ಮಾಡುವಾಗ ನಮ್ಮ ಹೊಟ್ಟೆಗೆ ಬೆಂಕಿ ಬಿದ್ದಂತಾಗಿದೆ. ಸರ್ಕಾರ ರೈತರ ಸಂಕಷ್ಟಕ್ಕೆ ನೆರವಾಗಬೇಕು ಎಂದು ಕೋರಿದರು.