ಟಿಕೆಟ್‌ ನಿರಾಕರಣೆ ಬೆನ್ನಲ್ಲೇ ವರಿಷ್ಠರ ವಿರುದ್ಧ ಸಿಡಿದೆದ್ದು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಮಾಜಿ ಸಚಿವ ಸೊಗಡು ಶಿವಣ್ಣ ಶನಿವಾರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.

ತುಮಕೂರು: ಟಿಕೆಟ್‌ ನಿರಾಕರಣೆ ಬೆನ್ನಲ್ಲೇ ವರಿಷ್ಠರ ವಿರುದ್ಧ ಸಿಡಿದೆದ್ದು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ಮಾಜಿ ಸಚಿವ ಸೊಗಡು ಶಿವಣ್ಣ ಶನಿವಾರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.

Add Asianetnews Kannada as a Preferred SourcegooglePreferred

ಚರ್ಚೆಯ ವಿಷಯವನ್ನು ಬಹಿರಂಗಗೊಳಿಸದ ಸೊಗಡು ಶಿವಣ್ಣ, ಜೆಡಿಎಸ್‌ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹಬ್ಬಿದೆ. ಅಲ್ಲದೇ ಮೊನ್ನೆ ನಡೆದ ಸುದ್ದಿಗೋಷ್ಠಿಯಲ್ಲೂ ಕೂಡ ತಾವು ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬ ಕುರಿತು ತಿಳಿಸುವುದಾಗಿ ಹೇಳಿದ್ದರು. ತಾವು ಸ್ಪರ್ಧಿಸುವುದು ನೂರಕ್ಕೆ ನೂರು ಸತ್ಯ ಎಂದು ಸ್ಪಷ್ಟಪಡಿಸಿರುವ ಶಿವಣ್ಣ ಅವರು ಜೋಳಿಗೆ ಹಾಕಿಕೊಂಡು ಮತಭಿಕ್ಷೆ ಮಾಡುವ ಮೂಲಕ ಗಮನಸೆಳೆದಿದ್ದರು.

JDS ಸೇರಿದ ಹಲವು ಮುಖಂಡರು

ಶಿರಾ :  ಶಿರಾ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾದ ಆರ್‌.ಉಗ್ರೇಶ್‌ರನ್ನು ಗೆಲ್ಲಿಸಲು ಜೆಡಿಎಸ್‌ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಕಾರ್ಯಪ್ರವೃತ್ತರಾಗಿದ್ದಾರೆ. ತಾಲೂಕಿನಲ್ಲಿ ಜೆಡಿಎಸ್‌ ಅಲೆ ಎದ್ದಿದೆ. ಆರ್‌.ಉಗ್ರೇಶ್‌ ಗೆಲುವು ಶತಸಿದ್ಧ ಎಂದು ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್‌.ಆರ್‌.ಗೌಡ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಜೆಡಿಎಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಲವು ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು. ಕಳೆದ ಒಂದು ವಾರದಿಂದ ಜಿಲ್ಲಾ ಪಂಚಾಯಿತಿವಾರು ಜೆಡಿಎಸ್‌ ಕಾರ್ಯಕರ್ತರ ಬೃಹತ್‌ ಸಭೆಗಳನ್ನು ಪ್ರಾರಂಭ ಮಾಡಿದ್ದೆವು. ಎಲ್ಲಾ ಸಭೆಗಳೂ ಅಭೂತಪೂರ್ವವಾಗಿ, ಯಶಸ್ವಿಯಾಗಿವೆ. ಗ್ರಾಮೀಣ ಮಟ್ಟದ ನಮ್ಮ ಎಲ್ಲಾ ಕಾರ್ಯಕತರು, ರೈತರ ಸಂಘಟನೆಯೊಂದಿಗೆ ಯಶಸ್ವಿಯಾಗಿ ಪೂರೈಸಿದ್ದೇವೆ. ಅನ್ಯ ಪಕ್ಷಗಳಿಂದ ಅನೇಕ ನಾಯಕರುಗಳು ಜೆಡಿಎಸ್‌ ಪಕ್ಷ ಸೆರ್ಪಡೆಯಾಗುತ್ತಿದ್ದಾರೆ. ತಾಲೂಕಿನಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮರಳಿ ಪಕ್ಷಕ್ಕೆ ಬರುತ್ತಿದ್ದಾರೆ. ಜೆಡಿಎಸ್‌ ಪಕ್ಷಕ್ಕೆ ನಾವು ಎಲ್ಲರಿಗೂ ಮುಕ್ತ ಆಹ್ವಾನ ನೀಡಿದ್ದೇವೆ ಎಂದರು.

ಜೆಡಿಎಸ್‌ ಅಭ್ಯರ್ಥಿ ಆರ್‌.ಉಗ್ರೇಶ್‌ ಮಾತನಾಡಿ, ಶಿರಾ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತರ ಉದ್ದೇಶ ಒಂದೆ ಈ ರಾಜ್ಯದಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು. ಶಿರಾ ಕ್ಷೇತ್ರದಲ್ಲಿ ಉಗ್ರೇಶಣ್ಣ ಶಾಸಕರಾಗಬೇಕು. ಶಿರಾದಲ್ಲಿ ಉಗ್ರೇಶಣ್ಣ ಗೆದ್ದರೆ ರಾಜ್ಯದಲ್ಲಿ ಕುಮಾರಣ್ಣ ಮುಖ್ಯಮಂತ್ರಿಯಾಗುತ್ತಾರೆ ಎಂಬುದು ಪ್ರತೀತಿ ಇದೆ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಜೆಡಿಎಸ್‌ ಅಲೆ ಎದ್ದಿದೆ. ಎಲ್ಲರೂ ಸೇರಿ ಪಕ್ಷವನ್ನು ಸಂಘಟಿಸಿ ನನ್ನನ್ನು ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ ಎಂದರು.

ಮುಖಂಡ ಕಲ್ಕೆರೆ ರವಿಕುಮಾರ್‌ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ನರಸಿಂಹೇಗೌಡ, ಹೆಂಜಾರಪ್ಪ, ಬೆಟ್ಟಪ್ಪನಹಳ್ಳಿ ಕರಿಯಪ್ಪ, ದ್ವಾರನಕುಂಟೆ ಗ್ರಾ.ಪಂ. ಉಪಾಧ್ಯಕ್ಷ ಚೌಡಪ್ಪ, ದ್ವಾರಕೀಶ್‌ ಜೆಡಿಎಸ್‌ ಪಕ್ಷ ಸೇರ್ಪಡೆಯಾದರು. ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ನಗರಸಭೆ ಅಧ್ಯಕ್ಷ ಬಿ.ಅಂಜಿನಪ್ಪ, ಅಲ್ಪಸಂಖ್ಯಾತರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರೆಹಮತ್‌, ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಟಿ.ಡಿ.ಮಲ್ಲೇಶ್‌, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಮ್ಮ, ಮಾಜಿ ನಗರಸಭಾ ಸದಸ್ಯ ಆರ್‌.ರಾಘವೇಂದ್ರ, ಮಾಜಿ ಸೂಡ ಅಧ್ಯಕ್ಷ ಈರಣ್ಣ, ಪರಮೇಶ್‌ ಗೌಡ, ಹೊನ್ನೇನಹಳ್ಳಿ ನಾಗರಾಜು, ಎಸ್‌ಟಿ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ, ಸೋಮಶೇಖರ್‌, ಕೋಟೆ ಮಹದೇವ್‌, ಮಾನಂಗಿ ರಾಮು ಸೇರಿದಂತೆ ಹಲವರು ಹಾಜರಿದ್ದರು.