ನಕಲಿ ಜಾತಿ ಪ್ರಮಾಣ ಪತ್ರ: ಬೆಂಗಳೂರು ವಿವಿ ಕುಲಪತಿ ನೇಮಕಾತಿ ರದ್ದುಪಡಿಸಿದ ಕೋರ್ಟ್
ಬೆಂಗಳೂರು ವಿವಿ ಕುಲಪತಿ ನೇಮಕಾತಿ ರದ್ದು| ಕೆ.ಆರ್.ವೇಣುಗೋಪಾಲ್ ನೇಮಕ ರದ್ದುಪಡಿಸಿ ಹೈಕೋರ್ಟ್ ಆದೇಶ| ಡಾ.ಸಂಗಮೇಶ್ ಪಾಟೀಲ್ ರಿಟ್ ಅರ್ಜಿ ಸಲ್ಲಿಸಿದ್ದರು|
ಬೆಂಗಳೂರು, [ಸೆ.24]: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ವೇಣುಗೋಪಾಲ್ ನೇಮಕಾತಿ ರದ್ದುಪಡಿಸಿ ಇಂದು [ಮಂಗಳವಾರ] ಹೈಕೋರ್ಟ್ ಆದೇಶ ಹೊರಡಿಸಿದೆ.
ಕೆ.ಆರ್.ವೇಣುಗೋಪಾಲ್ ವಿರುದ್ಧ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಆರೋಪ ಇತ್ತು. ಆದರೂ ಕುಲಪತಿ ಹುದ್ದೆಗೆ ನೇಮಕಾತಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಡಾ. ಸಂಗಮೇಶ ಪಾಟೀಲ್ ಈ ಕುರಿತಾಗಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಡಾ. ಸಂಗಮೇಶ ಪಾಟೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕುಲಪತಿ ನೇಮಕ ರದ್ದುಪಡಿಸಿದ ಆದೇಶ ಹೊರಡಿಸಿದೆ. ಪರ ಅರ್ಜಿದಾರರ ಪರ ವಕೀಲ ಡಿ.ಆರ್. ರವಿಶಂಕರ್ ವಾದ ಮಂಡಿಸಿದರು.
ಕುಲಪತಿ ಕೆ.ಆರ್. ವೇಣುಗೋಪಾಲ್ ವಿರುದ್ಧ ಹಲವು ಅಕ್ರಮಗಳ ಆರೋಪ ಮಾಡಲಾಗಿತ್ತು. ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಕೆ ಆರೋಪ ಕೂಡ ಮಾಡಲಾಗಿತ್ತು. ಅರ್ಹತೆ ಇಲ್ಲದಿದ್ದರೂ ಪ್ರೊಫೆಸರ್ ಹುದ್ದೆಗೆ ಪದೋನ್ನತಿ ನೀಡಲಾಗಿದೆ.
ಯುವಿಸಿಇ ಪ್ರಿನ್ಸಿಪಾಲ್ ಆಗಿದ್ದಾಗಲೂ ಅಕ್ರಮ ಎಸಗಿದ ಆರೋಪ ಮಾಡಲಾಗಿದೆ. ರೀಡರ್ ಹುದ್ದೆಗೆ ಇವರ ನೇಮಕವನ್ನು ರದ್ದು ಪಡಿಸಲಾಗಿತ್ತು. ಅಷ್ಟೇ ಅಲ್ಲದೇ ಉಪ ಲೋಕಾಯುಕ್ತರು ಕೂಡ ಇವರ ವಿರುದ್ಧ ವರದಿ ನೀಡಿದ್ದರು.
ಆದರೂ ಕುಲಪತಿ ಹುದ್ದೆಗೆ ನೇಮಕಾತಿ ಮಾಡಲಾಗಿತ್ತು. ರಾಜ್ಯ ಸರ್ಕಾರದ ಒಪ್ಪಿಗೆ ಇಲ್ಲದೆ ನೇಮಕವಾಗಿತ್ತು. ಕುಲಾಧಿಪತಿಗಳ ಈ ಕ್ರಮ ಪ್ರಶ್ನಿಸಿ ಡಾ.ಸಂಗಮೇಶ್ವರ ಅರ್ಜಿ ಸಲ್ಲಿಸಿದ್ದರು.