ಕೊರೋನಾ ಸೋಂಕು ದೃಢಪಟ್ಟು ಮನೆಯಲ್ಲಿಯೇ ಆರೈಕೆಯಲ್ಲಿರುವವರು ಯಾವುದೇ ಸೋಂಕು ಲಕ್ಷಣ ಇಲ್ಲದಿದ್ದರೆ ಏಳು ದಿನಗಳ ಬಳಿಕ ಗುಣಮುಖ ಎಂದು ಪರಿಗಣಿಸಬೇಕು. ಮತ್ತೊಮ್ಮೆ ಪರೀಕ್ಷೆಗೊಳಗಾಗುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಬೆಂಗಳೂರು (ಜ.20): ಕೊರೋನಾ ಸೋಂಕು (Coronavirus) ದೃಢಪಟ್ಟು ಮನೆಯಲ್ಲಿಯೇ ಆರೈಕೆಯಲ್ಲಿರುವವರು ಯಾವುದೇ ಸೋಂಕು ಲಕ್ಷಣ ಇಲ್ಲದಿದ್ದರೆ ಏಳು ದಿನಗಳ ಬಳಿಕ ಗುಣಮುಖ ಎಂದು ಪರಿಗಣಿಸಬೇಕು. ಮತ್ತೊಮ್ಮೆ ಪರೀಕ್ಷೆಗೊಳಗಾಗುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ. ರಾಜ್ಯದಲ್ಲಿ ಶೇ.95 ರಷ್ಟುಸೋಂಕಿತರು ಮನೆ ಆರೈಕೆಯಲ್ಲಿದ್ದು ಸೋಂಕಿತರು ಮತ್ತು ಅವರ ಆರೈಕೆಯಲ್ಲಿರುವವರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾರ್ಗಸೂಚಿ ಹೊರಡಿಸಿದೆ.

Add Asianetnews Kannada as a Preferred SourcegooglePreferred

ಸೋಂಕು ಲಕ್ಷಣ ಕಾಣಸಿಕೊಂಡ ಏಳು ದಿನಗಳ ನಂತರ, ಸೋಂಕು ಲಕ್ಷಣ ಇಲ್ಲದವರು ಪರೀಕ್ಷೆಗೊಳಗಾದ ಏಳು ದಿನಗಳ ಬಳಿಕ ಸೋಂಕಿನ ಲಕ್ಷಣಗಳು ಇಲ್ಲದಿದ್ದರೆ, ದೇಹದ ಉಷ್ಣಾಂಶ ಸಾಮಾನ್ಯವಾಗಿದ್ದರೆ, ರಕ್ತದಲ್ಲಿನ ಆಮ್ಲಜನಕ ಮಟ್ಟ ಶೇ.94ರಷ್ಟಿದ್ದರೆ, ಉಸಿರಾಟ ದರ ಪ್ರತಿ ನಿಮಿಷಕ್ಕೆ 24ಕ್ಕಿಂತ ಕಡಿಮೆ ಇದ್ದರೆ ಗುಣಮುಖರು ಎಂದು ಪರಿಗಣಿಸಬೇಕು. ಈ ಸೋಂಕಿತರಿಗೆ ಸಂಬಂಧಪಟ್ಟ ಆರೋಗ್ಯ ಕೇಂದ್ರ ವ್ಯಾಪ್ತಿಯ ವೈದ್ಯರು ಗುಣಮುಖ ಎಂದು ಪ್ರಮಾಣ ಪತ್ರವನ್ನು ನೀಡಬೇಕು ಎಂದು ತಿಳಿಸಲಾಗಿದೆ.

ಸೋಂಕಿತರು ಕಟ್ಟುನಿಟ್ಟಾಗಿ ಮನೆಯ ಕೊಠಡಿಯಲ್ಲಿರಬೇಕು, ಸ್ವಯಂ ಮತ್ತು ಕೊಠಡಿ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಆರೋಗ್ಯ ಇಲಾಖೆಯಿಂದ ಟೆಲಿಮಾನಿಟರಿಂಗ್‌ ತಂಡದಿಂದ ಕರೆಗಳನ್ನು ಕಡ್ಡಾಯವಾಗಿ ಸ್ವೀಕರಿಸಬೇಕು ಸೋಂಕಿನ ಲಕ್ಷಣಗಳು ಗಂಭೀರವಾದರೆ ಶೀಘ್ರ ವೈದ್ಯರನ್ನು ಸಂಪರ್ಕಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

Covid-19 Crisis: ರಾಜ್ಯದಲ್ಲಿ ಕೊರೋನಾ ಮಹಾಸ್ಫೋಟ, 41457 ಕೇಸ್‌

ಕಿಟ್‌ನಲ್ಲಿ ಕಡ್ಡಾಯ ವಸ್ತು: ಮನೆ ಆರೈಕೆಯಲ್ಲಿರುವವರಿಗೆಂದು ಆರೋಗ್ಯ ಇಲಾಖೆಯಿಂದ ಹೋಂ ಐಸೋಲೇಷನ್‌ ಕಿಟ್‌ಗಳನ್ನು ನೀಡಲಾಗುತ್ತದೆ. ಜಿಲ್ಲಾಡಳಿತಗಳು, ಬಿಬಿಎಂಪಿ (BBMP) ತಮ್ಮ ವ್ಯಾಪ್ತಿಯಲ್ಲಿ ಸೋಂಕಿತರಿಗೆ ಕಿಟ್‌ ತಲುಪಿಸಲು ಅಗತ್ಯ ಕ್ರಮವಹಿಸಬೇಕು. ಆರೈಕೆಗೆ ಅಗತ್ಯವಿರುವ ಸಾಮಗ್ರಿಗಳ ಜತೆಗೆ ಕನ್ನಡ ಮತ್ತು ಆಂಗ್ಲ ಭಾಷೆಯ ಸೂಚನಾ ಪತ್ರ ಕಡ್ಡಾಯವಾಗಿರಬೇಕು ಎಂದು ಆದೇಶದಲ್ಲಿ ಆರೋಗ್ಯ ಇಲಾಖೆ ತಿಳಿಸಿದೆ.

ಔಷಧಿಗಳು
ವಿಟಮಿನ್‌ ಸಿ 500 ಎಂಜಿ (ದಿನಕ್ಕೆ ಮೂರು- ಏಳು ದಿನ)
ಜಿಂಕ್‌ 50 ಎಂಜಿ (ದಿನಕ್ಕೆ ಒಂದು ಏಳು ದಿನ)
ಪ್ಯಾರಾಸಿಟಾಮೋಲ್‌ 500 ಎಂಜಿ ಒಂದು ಶೀಟ್‌ (ಲಕ್ಷಣ ಇದ್ದರೆ ಮಾತ್ರ).
ಲೇವೋಸಿಟ್ರಿಜನ್‌ 10 ಎಂಜಿ ಒಂದು ಶೀಟ್‌ (ಲಕ್ಷಣ ಇದ್ದರೆ ಮಾತ್ರ)
ಪೆಂಟೋಪ್ರಾಜೋಲ್‌ 40 ಎಂಜಿ (ಖಾಲಿ ಹೊಟ್ಟೆಯಲ್ಲಿ ದಿನಕ್ಕೆ ಒಂದು)
ಆ್ಯಂಟಿ ಟುಸ್ಸಿವೆ ಕಾಫ್‌ ಸಿರಪ್‌ - ಒಂದು ಬಾಟಲ್‌

ಇತರೆ ಸಾಮಗ್ರಿ
3 ಲೇಯರ್‌ ಮಾಸ್ಕ್‌
ಸ್ಯಾನಿಟೈಜರ್‌ ಬಾಟಲ್‌ (50 ಎಂಎಲ್‌)

ಕೋವಿಡ್‌ ತಪ್ಪು ಮಾಹಿತಿ ನೀಡುವ ವೈದ್ಯರ ಮೇಲೆ ಕ್ರಮ: ಕೋವಿಡ್‌ ಬಗ್ಗೆ ಕೆಲ ವೈದ್ಯರು ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ನೀಡುವ ಮೂಲಕ ಜನರಲ್ಲಿ ಅನಗತ್ಯ ಗೊಂದಲ ಉಂಟು ಮಾಡುವ, ಆಧಾರ ರಹಿತ ಮಾಹಿ ಹಂಚಿಕೊಳ್ಳುತ್ತಿರುವ ವೈದ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ರಾಜ್ಯ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಕೆಲವು ವೈದ್ಯರು ಮಾಧ್ಯಮಗಳಲ್ಲಿಅಪೂರ್ಣ, ಆಧಾರರಹಿತ, ತಪ್ಪು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಜನರಲ್ಲಿ ಗೊಂದಲ ಸೃಷ್ಟಿ ಆಗುವುದು ಮಾತ್ರವಲ್ಲದೇ ಸರ್ಕಾರ ಹೊರಡಿಸುವ ವಿವಿಧ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಪ್ರೇರಣೆ ನೀಡುತ್ತದೆ.

Booster Dose: 3ನೇ ಡೋಸ್‌ ಅಭಿಯಾನ ನಿರೀಕ್ಷೆಯಂತೆ ಸಾಗುತ್ತಿಲ್ಲ: ಸುಧಾಕರ್‌

ವೈದ್ಯರು ಮಾಧ್ಯಮ, ಸಾಮಾಜಿಕ ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವಾಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ, ಮಾರ್ಗಸೂಚಿಗಳನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಗರಿಷ್ಠ ಪ್ರಮಾಣದ ಎಚ್ಚರಿಕೆ ವಹಿಸಬೇಕು. ಅದು ಬಿಟ್ಟು ತಪ್ಪು ಮಾಹಿತಿ, ಅ ವಾಸ್ತವ ದತ್ತಾಂಶವನ್ನು ಮಾಧ್ಯಮಗಳ ಮುಂದೆ ನೀಡಿದರೆ ಅದನ್ನು ಅಪರಾಧ ಎಂದು ಪರಿಗಣಿಸಿ ವಿಪತ್ತು ನಿರ್ವಹಣಾ ಕಾಯ್ದೆ, ಕರ್ನಾಟಕ ಸಾಂಕ್ರಾಮಿಕ ರೋಗ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.