ಕರ್ನಾಟಕದ ಕೂಗಿಗೆ ಕೇಂದ್ರದ ಸ್ಪಂದನೆ; ನೆರೆ ಹಾವಳಿಗೆ 395.5 ಕೋಟಿ ರೂ. ಮುಂಗಡ
ಗೌರಿ ಗಣೇಶ ಹಬ್ಬಕ್ಕೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್/ ರಾಜ್ಯದ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ/ ಅತಿವೃಷ್ಟಿ ಹಾಣಿ ಮುಂಗಡ ಪರಿಹಾರ ಹಣ ಬಿಡುಗಡೆ/ಎಸ್ಡಿಆರ್ಎಫ್ ನಿಧಿಯಿಂದ 395.5 ಕೋಟಿ ರೂಪಾಯಿ
ಬೆಂಗಳೂರು(ಆ. 21) ರಾಜ್ಯ ಸರ್ಕಾರದ ಕೂಗಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಅತಿವೃಷ್ಟಿಯಿಂದ ಕರ್ನಾಟಕದಲ್ಲಿ ಉಂಟಾದ ಹಾನಿಗೆ ಕೇಂದ್ರ ಸರ್ಕಾರ, ರಾಜ್ಯದ ವಿಪತ್ತು ಪ್ರತಿಕ್ರಿಯೆ ನಿಧಿ(ಎಸ್ಡಿಆರ್ಎಫ್) ನಿಧಿಯಿಂದ 395.5 ಕೋಟಿ ರೂಪಾಯಿಯನ್ನು ಮುಂಗಡವಾಗಿ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ಹಣ ಬಿಡುಗಡೆ ಮಾಡಿರುವ ಮಾಹಿತಿಯನ್ನು ಕಂದಾಯ ಸಚಿವ ಆರ್ . ಅಶೋಕ ತಿಳಿಸಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದೆವು. ಇದೀಗ ರಾಜ್ಯದ ಮನವಿಗೆ ಕೂಡಲೇ ಸ್ಪಂದಿಸಿದ ಕೇಂದ್ರ ಸರ್ಕಾರ, SDRF ಫಂಡ್ 395.5 ಕೋಟಿ ರೂ. ಹಣವನ್ನು ಈಗ ಮುಂಗಡವಾಗಿ ಬಿಡುಗಡೆ ಮಾಡಿರುವುದು ಸಂತಸ ತಂದಿದೆ ಎಂದು ಅಶೋಕ ತಿಳಿಸಿದ್ದಾರೆ.
ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹದಿಂದ ಹಾನಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಸರ್ಕಾರ ಮನವಿ ಮಾಡಿತ್ತು.ವಿಡಿಯೋ ಕಾನ್ಫರೆನ್ ಮೂಲಕ ರಾಜ್ಯದಲ್ಲಿ ಮಳೆ ಹಾನಿ ಬಗ್ಗೆ ತುರ್ತಾಗಿ 4000 ಕೋಟಿ ರೂ. ಪರಿಹಾರಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು. ಕಳೆದ ವರ್ಷದ ನೆರೆ ಹಾವಳಿಗೂ ರಾಜ್ಯ ಸರ್ಕಾರ ಪರಿಹಾರ ಕೇಳಿದ್ದರೆ ಎರಡು ಕಂತುಗಳಲ್ಲಿ ಕೇಂದ್ರ ಸರ್ಕಾರ ಸ್ವಲ್ಪ ಹಣ ಬಿಡುಗಡೆ ಮಾಡಿತ್ತು.