ಕಲಾಸಿಪಾಳ್ಯದಲ್ಲಿ ಜನ ದಟ್ಟಣೆ ತಡೆಗೆ ಮಾರುಕಟ್ಟೆ ಸ್ಥಳಾಂತರ
ಕಲಾಸಿಪಾಳ್ಯದಲ್ಲಿ ಜನ ದಟ್ಟಣೆ ತಡೆಗೆ ಮಾರುಕಟ್ಟೆ ಸ್ಥಳಾಂತರ ಮಾಡಲು ಸಂಪುಟ ನಿರ್ಧಾರ ಮಾಡಿದೆ. ಸಿಂಗೇನ ಅಗ್ರಹಾರದಲ್ಲಿ ಮಾರುಕಟ್ಟೆ ಸ್ಥಾಪನೆಗೆ ಮುಂದಾಗಿದ್ದು, 42 ಎಕರೆಯಲ್ಲಿ 52 ಕೋಟಿ ವೆಚ್ಚದಲ್ಲಿ ತರಕಾರಿ ಮಾರುಕಟ್ಟೆ ಮಾಡಲಾಗುತ್ತದೆ.
ಬೆಂಗಳೂರು (ಆ.26): ನಗರದ ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆಜನಸಂದಣಿ ನಿಯಂತ್ರಿಸುವ ಸಂಬಂಧ ನಗರದ ಹೊರವಲಯದಲ್ಲಿನ ಸಿಂಗೇನ ಅಗ್ರಹಾರದಲ್ಲಿ ಅತ್ಯಾಧುನಿಕ ತರಕಾರಿ ಮಾರುಕಟ್ಟೆಸ್ಥಾಪಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಕಲಾಪಿಪಾಳ್ಯ ಮಾರುಕಟ್ಟೆಯಲ್ಲಿ ಜನಸಂದಣಿ ಕಡಿಮೆ ಮಾಡುವ ಸಂಬಂಧ ನಗರದ ಹೊರವಲಯಕ್ಕೆ ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿದೆ. ಗುಳಿಮಂಗಲ ಸಮೀಪದ ಸಿಂಗೇನ ಅಗ್ರಹಾರದಲ್ಲಿ ಹಣ್ಣಿನ ಮಾರುಕಟ್ಟೆಇದೆ. ಅದರ ಬಳಿಯೇ 42 ಎಕರೆ ಪ್ರದೇಶದಲ್ಲಿ 52 ಕೊಟಿ ರು. ವೆಚ್ಚದಲ್ಲಿ ಅತ್ಯಾಧುನಿಕ ತರಕಾರಿ ಮಾರುಕಟ್ಟೆಯನ್ನು ಸ್ಥಾಪಿಸಲು ಒಪ್ಪಿಗೆ ನೀಡಲಾಗಿದೆ ಎಂದರು. ಬೆಂಗಳೂರಿನ ನಾಲ್ಕು ಕಡೆ ಅತ್ಯಾಧುನಿಕ ಮಾರುಕಟ್ಟೆಸ್ಥಾಪಿಸುವ ಉದ್ದೇಶವನ್ನು ಹೊಂದಲಾಗಿದೆ. ಇದರಿಂದ ರೈತರಿಗೆ ಮಾರುಕಟ್ಟೆಗೆ ಬಂದು ಮಾರಾಟ ಮಾಡಲು ಅನುಕೂಲವಾಗಲಿದೆ. ಮಾಗಡಿ ಮತ್ತು ಕೋಲಾರ ಭಾಗದಲ್ಲಿಯೂ ಹಣ್ಣು ಮತ್ತು ತರಕಾರಿ ಮಾರುಕಟ್ಟೆಸ್ಥಾಪಿಸಲು ಉದ್ದೇಶ ಇದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಔಪಚಾರಿಕವಾಗಿ ಚರ್ಚೆ ನಡೆಸಿದ್ದೇವೆ. ಮುಂದಿನ ದಿನದಲ್ಲಿ ಈ ಬಗ್ಗೆ ಸೂಕ್ತ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ವೈಟ್ಪೀಲ್ಡ್ನಲ್ಲಿ ಮೇಲ್ಸೇತುವೆ: ವೈಟ್ಫೀಲ್ಡ್ನಲ್ಲಿ ರೈಲ್ವೆ ಕ್ರಾಸಿಂಗ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ .24.27 ಕೋಟಿ ಮಂಜೂರು ಮಾಡಲಾಗಿದೆ. ಯಶವಂತಪುರದ ಚಿಕ್ಕಬಾಣಾವಾರದ ಬಳಿ ಮೂರು ಎಕರೆ ಜಮೀನನ್ನು ಶ್ರೀನಿವಾಸ ಎಜುಕೇಷನಲ್ ಟ್ರಸ್ಟ್ ಶೈಕ್ಷಣಿಕ ಉದ್ದೇಶಕ್ಕಾಗಿ ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ. ಇಂಡಿಯನ್ ಜಿಮ್ಕಾನ ಸಂಸ್ಥೆಯು ಕಾಕ್ಸ್ಟೌನ್ನಲ್ಲಿದ್ದು, 4 ಎಕರೆ ಜಾಗವನ್ನು ಗುತ್ತಿಗೆ ನಿಡಲಾಗಿತ್ತು. ಈಗ 1.8 ಪ್ರದೇಶದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ಹೀಗಾಗಿ ಇನ್ನುಳಿದ ಜಾಗವನ್ನು ವಶಕ್ಕೆ ಪಡೆದು ಮೈದಾನ ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ. ಇನ್ನು, ಪಂತರಪಾಳ್ಯದಲ್ಲಿನ ಬಿಬಿಎಂಪಿ ಆಸ್ಪತ್ರೆಗೆ ಅಗತ್ಯ ಸೌಕರ್ಯ ಒದಗಿಸಿ 150 ಹಾಸಿಗೆ ಮಾಡಲು .32 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ವಿವರಿಸಿದರು.