ಬಳ್ಳಾರಿಯ ನೂತನ ಬಿಜೆಪಿ ಸಂಸದ ಕಾರಿನಿಂದ ಇಳಿದು ರೈತರ ಜತೆಗೂಡಿ ಬಿತ್ತನೆ ಮಾಡಿದರೆ, ಮತ್ತೊಂದೆಡೆ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದವರಿಗೆ ಕಲಬುರಗಿಯ ಸಂಸದ  ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಯಾದಗಿರಿ, [ಜೂನ್.07]: ರಸ್ತೆ ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದವರಿಗೆ ಕಲಬುರಗಿ ನೂತನ ಸಂಸದ ಡಾ.ಉಮೇಶ್ ಜಾಧವ್ ಅವರು ಚಿಕಿತ್ಸೆ ನೀಡಿ ಡಾಕ್ಟರ್ ಕರ್ತವ್ಯ ನಿಭಾಯಿಸಿದ್ದಾರೆ.

Add Asianetnews Kannada as a Preferred SourcegooglePreferred

ಅಪಘಾತಕ್ಕೀಡಾಗಿದ್ದ ಗಾಯಾಳುಗಳನ್ನು ಸ್ವಂತ ತಮ್ಮ ಕಾರಿನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದಲ್ಲದೇ ಸ್ವತಃ ತಾವೇ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.ಯಾದಗಿರಿ ನಗರದ ಕೆಎಸ್ಆರ್‌ಟಿಸಿ ಕಾರ್ಯಾಗಾರ ಬಳಿ ಬೈಕ್ ಮತ್ತು ಟಾಟಾ ಏಸ್ ವಾಹನದ ನಡುವೆ ಅಪಘಾತ ನಡೆದೆ.

Video: ಕಾರು ನಿಲ್ಲಿಸಿ ಉಳುಮೆ ಮಾಡಿದ ಬಳ್ಳಾರಿ ಸಂಸದ ದೇವೇಂದ್ರಪ್ಪ

ಘಟನೆಯಲ್ಲಿ ಗುರಮಿಠಕಲ್ ತಾಲೂಕಿನ ಕೆ.ಅರಕೇರಿ ಗ್ರಾಮದ ರಾಠೋಡ ಹಾಗೂ ನರೇಶ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದರು. ಆದೇ ದಾರಿಯಲ್ಲಿ ರೈಲು ಕಾರ್ಯಾಗಾರ ವೀಕ್ಷಿಸಲು ತೆರಳುತಿದ್ದ ಉಮೇಶ್ ಜಾಧವ್ ಅವರು ವಾಪಸ್ ಬರುತ್ತಿರುವಾಗ ಘಟನೆ ತಿಳಿದು ತಕ್ಷಣ ಸಹಾಯಕ್ಕೆ ಬಂದಿದ್ದಾರೆ. 

ಅಂಬುಲೆನ್ಸ್ ಬರುವುದು ತಡವಾಗುತ್ತದೆ ಎಂದು ಬೈಕಿನಲ್ಲಿ ಅಪಘಾತಕ್ಕೀಡಾಗಿದ್ದ ಇಬ್ಬರು ಯುವಕರನ್ನು ತಮ್ಮ ಕಾರಿನಲ್ಲೇ ಹತ್ತಿರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಅಷ್ಟೇ ಅಲ್ಲದೇ ಜಾಧವ್ ಅವರು ಸ್ವತಃ ವೈದ್ಯರಾಗಿ ಚಿಕಿತ್ಸೆ ನೀಡಿರುವುದು ವಿಶೇಷ.