ಬಿಜೆಪಿ ನಿಲುವಿಗೆ ಜೈಕಾರ ಹಾಕಿದ ಕುಮಾರಸ್ವಾಮಿ : ಜೆಡಿಎಸ್ ನಿಲುವು ಮೀರಿದ ಶಾಸಕ
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿ ನಿಲುವಿಗೆ ಜೈಕಾರ ಹಾಕಿದ್ದು ಆದರೆ ಪಕ್ಷದ ಶಾಸಕರೋರ್ವರು ಪಕ್ಷದ ನಿಲುವಿಗೆ ವಿರೊಧವಾಗಿ ನಡೆದುಕೊಂಡಿದ್ದಾರೆನ್ನಲಾಗಿದೆ
ಮಂಡ್ಯ (ಸೆ.28): ರಾಜ್ಯ ಸರ್ಕಾರ ಭೂಸುಧಾರಣೆ ಮತ್ತು ಎಪಿಎಂಸಿ ಕಾಯಿದೆಗಳಿಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಕರೆ ನೀಡಲಾಗಿರುವ ಕರ್ನಾಟಕ ಬಂದ್ಗೆ ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಕೆಲ ಸಂಘಟನೆಗಳ ತಟಸ್ಥ ಧೋರಣೆಯ ನಡುವೆಯೂ ಹಲವು ಸಂಘಟನೆಗಳು ಬಂದ್ ಯಶಸ್ವಿಗೊಳಿಸಲು ಮುಂದಾಗಿವೆ.
ಜೆಡಿಎಸ್ ಮುಖಂಡರು ದೂರ
ರೈತ ಪರ ಹೋರಾಟದ ಮೂಲಕವೇ ರಾಜಕೀಯ ಅಸ್ತಿತ್ವವನ್ನು ಕಂಡುಕೊಂಡಿರುವ ಜೆಡಿಎಸ್ ಸದನದ ಒಳಗೆ ಎಪಿಎಂಸಿ ಮತ್ತು ಭೂಸುಧಾರಣಾ ಕಾಯ್ದೆ ತಿದ್ದುಪಡಿಗಳನ್ನು ಸ್ವಾಗತಿಸಿದರೆ, ಹೊರಗೆ ವಿರೋಧಿಸುತ್ತಿರುವುದು ರಾಜಕೀಯ ಡ್ರಾಮಕ್ಕೆ ಸಾಕ್ಷಿಯಾಗಿದೆ.
ಸ್ಥಳೀಯ ಶಾಸಕರು ವಿವಿಧ ಕಾರ್ಯಕ್ರಮಗಳಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಅಧಿವೇಶನದಲ್ಲಿ ವಿರೋಧಿಸುವುದಾಗಿ ಹೇಳಿದ್ದರು. ಆದರೆ, ಜೆಡಿಎಸ್ನ ಪಕ್ಷದ ಶಾಸಕಾಂಗ ನಾಯಕ ಕುಮಾರಸ್ವಾಮಿಯವರೇ ಬಿಜೆಪಿಯ ನಿಲುವಿಗೆ ಜೈಕಾರ ಹಾಕಿರುವುದು ಪಕ್ಷದ ಶಾಸಕರಿಗೆ ಇರಿಸು ಮುರಿಸು ಉಂಟುಮಾಡಿದೆ.
ಬಿಜೆಪಿಯೊಂದಿಗೆ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ ಎಂದ ಜೆಡಿಎಸ್ ನಾಯಕ ...
ಸ್ಥಳೀಯವಾಗಿ ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ರೈತರ ಪರವಾಗಿ ನಡೆಸುತ್ತಿರುವ ಬಂದ್ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುವುದರ ಮೂಲಕ ಪಕ್ಷದ ನಿಲುವನ್ನು ಮೀರಿ ರೈತರ ಪರ ನಿಂತಿದ್ದಾರೆಂಬ ಅಭಿಪ್ರಾಯಗಳು ಕೇಳಿಬರುತ್ತಿದ್ದು, ಇತರೆ ಶಾಸಕರ ನಿಲುವುಗಳು ಇಂದಿಗೂ ಸ್ಪಷ್ಟವಾಗಿಲ್ಲ. ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಎರಡು ಮತ್ತು ಮೂರನೇ ಹಂತದ ಮುಖಂಡರು ಬಿಜೆಪಿ ಸರ್ಕಾರದ ಕಾಯ್ದೆ ತಿದ್ದುಪಡಿ ನಿಲುವನ್ನು ಖಂಡಿಸುವುದರ ಮೂಲಕ ಪಕ್ಷವನ್ನು ಮೀರಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ.