'ತುಮಕೂರಲ್ಲಿ ಬಿಜೆಪಿ ಜೊತೆ ಕಾಂಗ್ರೆಸ್ ಹೊಂದಾಣಿಕೆ' : ಮುಖಂಡರಿಂದ ಸ್ಫೋಟಕ ಹೇಳಿಕೆ
ಬಿಜೆಪಿ ಜೊತೆ ಕಾಂಗ್ರೆಸ್ ಕೈ ಜೋಡಿಸಿದೆ ಎಂದು ಸ್ಫೋಟಕ ಹೇಳಿಕೆಯೊಂದನ್ನು ನೀಡಲಾಗಿದೆ.
ಹಾಸನ (ಅ.13): ರಾಜ್ಯದ ಬಿಜೆಪಿ ಸರ್ಕಾರ ತರಾತುರಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆ ನಡೆಸಲು ಮುಂದಾಗಿದ್ದು, ಬಿಜೆಪಿ ಮುಖಂಡರ ಅಧೀನದಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಕಾನೂನು ನಿಯಮವನ್ನೇ ಗಾಳಿಗೆ ತೂರಿ ಎಲ್ಲಾ ಕೆಲಸ ನಿರ್ವಹಿಸಲಾಗುತ್ತಿದೆ. ನಗರಸಭೆ ಅಧ್ಯಕ್ಷ ಸ್ಥಾನ ಮೀಸಲಾತಿಯನ್ನು ಕಾನೂನು ಬಾಹಿರವಾಗಿ ಮಾಡಲಾಗಿದೆ. ರಾಜ್ಯದ ಎಲ್ಲೆಡೆ ಬೆಳಿಗ್ಗೆಯಿಂದ ಸಂಜೆವರೆಗೆ ಮಾತ್ರ ಸರ್ಕಾರಿ ಕಚೇರಿ ತೆರೆದಿರುತ್ತದೆ. ಹಾಸನದ ಜಿಲ್ಲಾಧಿಕಾರಿ ಕಚೇರಿ ದಿನದ 24 ಗಂಟೆಯ ಮಾದರಿಯಲ್ಲಿ ತೆರೆದಿರುತ್ತದೆ. ಸರ್ಕಾರಿ ಅಧಿಕಾರಿಗಳು ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಯೋಗೇಶ್ ಗೌಡ ಹತ್ಯೆ, ಮಾಜಿ ಡಿಸಿಎಂಗೆ ಸಿಬಿಐ ತನಿಖೆ; ಮುಳುವಾಯ್ತು ಒಂದು ಹೇಳಿಕೆ! .
ಹಾಸನದ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಒಂದು ಪಕ್ಷದ ಏಜೆಂಟ್ರಂತೆ ಕೆಲಸ ಮಾಡುತ್ತಿದ್ದಾರೆ. ಹಾಸನ ಜಿಲ್ಲೆಯ ಅಧಿಕಾರಿಗಳು ಬಿಜೆಪಿ ಮುಖಂಡರ ಅಧೀನದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಈ ಬಗ್ಗೆ ಗಮನ ನೀಡಿ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಬೇಕು. ಅಡ್ವೋಕೇಟ್ ಜನರಲ್ ರವರು ಹಾಸನ ನಗರಸಭೆ ಸಾಮಾನ್ಯ ವರ್ಗಕ್ಕೆ ನಿಗದಿಯಾಗುತ್ತೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಆ ಅಡ್ವೋಕೋಟ್ ಜನರಲ್ ಕೊರೋನಾ ಬಂತು ಅಂತಾ ಮನೆಗೆ ಹೋದರು. ಆದರೆ ಈಗ ಹಾಸನ ಮತ್ತು ಅರಸೀಕೆರೆ ನಗರಸಭೆಗೆ ಎಸ್.ಟಿ ಮೀಸಲಾತಿ ನಿಗದಿ ಮಾಡಿರುವುದಾಗಿ ಹೇಳಿದರು. ಈ ಮೀಸಲಾತಿ ನಿಗದಿ ಮಾಡಿರುವುದು ಕಾನೂನು ಬಾಹಿರವಾಗಿದ್ದು, ನಾವು ಮೀಸಲಾತಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದರು.
ಇನ್ನು ಸುಮಾರು 150 ವರ್ಷ ಇತಿಹಾಸ ಹೊಂದಿರುವ ಪಕ್ಷ ಕಾಂಗ್ರೆಸ್. ಈ ಪಕ್ಷವು ಕೋಮುವಾದಿಗಳ ಜೊತೆ ಇದ್ದಾರೆ. ಮಂಡ್ಯ ಮತ್ತು ತುಮಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದಾಗಿ ಕಿಡಿಕಾರಿದರು.