ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಬಗ್ಗೆ ಒಳ್ಳೆ ಅಭಿಪ್ರಾಯವಿದೆ. ಅವರೆಂದಿಗೂ ನನ್ನ ಮಾತನ್ನು ಅಲ್ಲಗಳೆಯುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ. 

 ಹಾಸನ (ಫೆ.22):  ನಾನೊಬ್ಬ ರೈತನ ಮಗ. ನನಗೆ ರೈತನ ಸಂಕಷ್ಟಗೊತ್ತಿದೆ. ಈ ದೇಶದಲ್ಲಿ ರೈತರು ಬಹಳ ದೊಡ್ಡ ಹೋರಾಟ ಮಾಡುತ್ತಿದ್ದಾರೆ. ರೈತರು ತುಂಬಾ ಕಷ್ಟದಲ್ಲಿ ಹೋರಾಟ ಮಾಡುತ್ತಿದ್ದಾರೆ. ಹಾಗಾಗಿ ಅವರ ಜೊತೆ ಕುಳಿತು ಮಾತನಾಡಿ ಒಳ್ಳೆ ರೀತಿಯಲ್ಲಿ ಸಮಸ್ಯೆ ಬಗೆಹರಿಸಿ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ.

Add Asianetnews Kannada as a Preferred SourcegooglePreferred

ತಾಲೂಕಿನ ಉಪ್ಪಳ್ಳಿ ಗ್ರಾಮದಲ್ಲಿ ಭಾನುವಾರ ದೇವಾಲಯವೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ದಲ್ಲಾಳಿಗಳಿಂದ ತೊಂದರೆಗೆ ಒಳಗಾಗಬಾರದೆಂದು ಕಾನೂನು ತಂದಿರುವುದಾಗಿ ಪ್ರಧಾನಿ ಹೇಳುತ್ತಾರೆ. ಹಾಗೆಯೇ ನಾನು ದೇವೇಗೌಡರ ಮಾತನ್ನೂ ಅಲ್ಲಗಳೆಯುವುದಿಲ್ಲ ಎಂದು ಪ್ರಧಾನಿ ಹೇಳುತ್ತಾರೆ. ಅವರಿಗೆ ನನ್ನ ಬಗ್ಗೆ ಒಳ್ಳೆ ಭಾವನೆ ಇದೆ. ಸೋಲು, ಗೆಲುವು ಜೀವನದಲ್ಲಿ ಇದ್ದಿದ್ದೆ. ಎಲ್ಲ ದೈವಾನುಗ್ರಹ.. ಇದಕ್ಕೆಲ್ಲ ನಾನು ವ್ಯಥೆ ಪಡುವುದಿಲ್ಲಎಂದರು.

'16 ಸಾವಿರ ಸ್ಥಾನಗಳಲ್ಲಿ ಜೆಡಿಎಸ್‌ಗೆ ಗೆಲುವು' ...

ಟ್ರಾಕ್ಟರ್‌, ಪವರ್‌ ಟಿಲ್ಲರ್‌ ಸೇರಿದಂತೆ ಹಲವು ಯೋಜನೆಗಳಿಗೆ ಸಬ್ಸಿಡಿ ಕೊಟ್ಟಿದ್ದೇನೆ. ಆದರೆ ಅದನ್ನು ನಾನು ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ. ನಮ್ಮದೊಂದು ಪ್ರಾದೇಶಿಕ ಪಕ್ಷ. ತಮಿಳುನಾಡಿನವರು ಅವರ ಪಾಲಿನ ನೀರನ್ನ ಪಡೆಯಲು ಪ್ರಧಾನಿ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದೊಂದು ಗಂಭೀರವಾದ ವಿಷಯ. ನನ್ನ ಜೀವನವನ್ನೇ ಇದಕ್ಕಾಗಿ ಮುಡುಪಿಟ್ಟು ಹೋರಾಟ ಮಾಡಿದ್ದೇನೆ. ಒಂದು ಪ್ರಾದೇಶಿಕ ಪಕ್ಷ ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಹೋರಾಟ ಮಾಡುವುದು ಕಷ್ಟ,

ಅಣ್ಣಾಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಂಡು ಅನೇಕ ಯೋಜನೆ ಮಾಡುತ್ತಿದ್ದೀರಿ. ನಮಗೇನು ಮಾಡಿದ್ದೀರಿ ಎಂದು ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದರು.

ಯಾವ ಹೋರಾಟಕ್ಕೂ ನನ್ನ ವಿರೋಧವಿಲ್ಲ: ಮೀಸಲಾತಿ ಎಷ್ಟುಪರ್ಸೆಂಟ್‌ ಮೀರಬಾರದು ಎಂದು ಸುಪ್ರೀಂಕೋರ್ಟ್‌ ಕೂಡ ಹೇಳಿದೆ. ಈ ಸಮಸ್ಯೆಯನ್ನು ಯಡಿಯೂರಪ್ಪ ಹೇಗೆ ಬಗೆಹರಿಸುತ್ತಾರೆ ಗೊತ್ತಿಲ್ಲ.. ಇದೊಂದು ಜಟಿಲವಾದ ಸಮಸ್ಯೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ಒಂದು ವರದಿ ತಯಾರಿಸಿದ್ದಾರೆ. ಅದರಲ್ಲಿ ಏನಿದೆ ಎಂದು ನನಗೆ ಗೊತ್ತು. ಅದು ಮಂಡನೆ ಆದ ಮೇಲೆ ಮಾತನಾಡುತ್ತೇನೆ ಎಂದು ಮಾರ್ಮಿಕವಾಗಿ ಹೇಳಿದರು.