ನಾನು ಸಂಸದನಾದರೆ ಪ್ರತಿ ಮನೆಗೂ ಆಕಳು : ಜೆಡಿಎಸ್ ಮುಖಂಡ
ಈ ಸಲ ಜೆಡಿಎಸ್ ಟಿಕೆಟ್ ನನಗೆ ಸಿಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ನಾನು ಚುನಾವಣೆಯಲ್ಲಿ ಗೆದ್ದು ಬಂದರೆ ಕ್ಷೇತ್ರದ ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ಉಚಿತವಾಗಿ ಆಕಳನ್ನು ನೀಡುತ್ತೇನೆ.
ಹುಬ್ಬಳ್ಳಿ[ಸೆ.21]: ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಇಚ್ಛಿಸಿದ್ದೇನೆ. ಈ ಸಂಬಂಧ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಟಿಕೆಟ್ ಕೊಡುವ ಬಗ್ಗೆ ಸಕಾರಾತ್ಮಕವಾಗಿಯೂ ಸ್ಪಂದಿಸಿದ್ದಾರೆ. ಹೀಗಾಗಿ ಈಗಾಗಲೇ ಕಾರ್ಯವನ್ನು ಆರಂಭಿಸಿದ್ದೇನೆ ಎಂದು ಜೆಡಿಎಸ್ ಮುಖಂಡ ಗುರುಪಾದಗೌಡ ಪಾಟೀಲ ತಿಳಿಸಿದ್ದಾರೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಈ ಸಲ ಜೆಡಿಎಸ್ ಟಿಕೆಟ್ ನನಗೆ ಸಿಗುವ ಸಾಧ್ಯತೆ ಹೆಚ್ಚಿದೆ ಎಂದರು. ಒಂದು ವೇಳೆ ನಾನು ಚುನಾವಣೆಯಲ್ಲಿ ಗೆದ್ದು ಬಂದರೆ ಕ್ಷೇತ್ರದ ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ಉಚಿತವಾಗಿ ಆಕಳನ್ನು ನೀಡುತ್ತೇನೆ. ಅಲ್ಲದೇ. ಪ್ರತಿಯೊಂದು ಮನೆಗೂ ಮೂರು ಸಸಿಗಳನ್ನು ನೀಡುತ್ತೇನೆ ಅವುಗಳನ್ನು ಬೆಳೆಸಲು ಪ್ರತಿ ತಿಂಗಳು 300 ರೂ. ಪ್ರೋತ್ಸಾಹ ಧನವನ್ನು ನೀಡುತ್ತೇನೆ. ಸಾರ್ವಜನಿಕರ ಹಿತಾಸಕ್ತಿಗೆ ಶ್ರಮಿಸುತ್ತೇನೆ ಎಂದು ನುಡಿದರು.
ಧಾರವಾಡ ಜಿಲ್ಲೆಯನ್ನು ಕೈಗಾರಿಕಾ ವಲಯವನ್ನಾಗಿ ಮಾಡುವ ಮಹದಾಸೆ ನನ್ನದು. ಧಾರವಾಡ ಕ್ಷೇತ್ರದಲ್ಲಿ ಸಾವಿರ ಎಕರೆ ವಿಸ್ತೀರ್ಣದಲ್ಲಿ ಸ್ಟುಡಿಯೋ ನಿರ್ಮಾಣ ಮಾಡಿ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಚಿತ್ರೋದ್ಯಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ನುಡಿದ ಅವರು, ಈ ಹಿಂದಿನ ಲೋಕಸಭಾ ಸದಸ್ಯರು ಧಾರವಾಡ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಕ್ರಮಕೈಗೊಂಡಿಲ್ಲ. ಇದು ನನಗೆ ಪ್ಲಸ್ ಪಾಯಿಂಟ್ ಎಂದು ನುಡಿದರು.