ಸಂಗೊಳ್ಳಿ ರಾಯಣ್ಣ , ರಾಣಿ ಚನ್ನಮ್ಮ, ಕನಕದಾಸರ ಭಾವಚಿತ್ರಗಳಿಗೆ ರಾಡಿ ಎರಚಿ ಅವಮಾನ ಮಾಡಲಾಗಿದ್ದು, ಈ ಸಂಬಂಧ ಸ್ಥಳದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು.

ಇಂಡಿ (ಸೆ.01): ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ ಮತ್ತು ಕನಕದಾಸರ ಭಾವಚಿತ್ರಗಳಿಗೆ ಕಿಡಿಗೇಡಿಗಳು ರಾಡಿ ಎರಚಿ ಅವಮಾನಿಸಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಂಜಗಿ ಗ್ರಾಮದಲ್ಲಿ ಮಂಗಳವಾರ ನಡೆದಿದ್ದು, ಗ್ರಾಮದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಯಿತು.

Add Asianetnews Kannada as a Preferred SourcegooglePreferred

ಹಂಜಗಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಳವಡಿಸಿರುವ ಭಾವಚಿತ್ರಗಳಿಗೆ ಕೆಸರು ಎರಚಿದ ವಿಷಯ ತಿಳಿದು ಗ್ರಾಮಸ್ಥರು ವೃತ್ತದಲ್ಲಿ ಜಮಾಯಿಸಿದರು. ನಂತರ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸ್ಥಳದಲ್ಲಿಯೇ ಧರಣಿ ಪ್ರಾರಂಭಿಸಿದರು. ಕಿಡಿಗೇಡಿಗಳು ಯಾರೇ ಆಗಲಿ ತಕ್ಕ ಶಿಕ್ಷೆ ನೀಡುವಂತೆ ಒತ್ತಾಯಿಸಿದರು. ಸುಮಾರು ಒಂದು ಗಂಟೆಕಾಲ ಜನರು ಪ್ರತಿಭಟಿಸಿ ತಮ್ಮ ಆಕ್ರೋಶ ಹೊರಹಾಕಿದರು.

ರಾಯಣ್ಣ ಪ್ರತಿಮೆ ವಿವಾದ ಇತ್ಯರ್ಥಗೊಳ್ಳುತ್ತಿದ್ದಂತೆಯೇ ಬೆಳಗಾವಿಗೆ ಮಂತ್ರಿಗಳ ದಂಡು

ಗ್ರಾಮಸ್ಥರೊಂದಿಗೆ ಧರಣಿಯಲ್ಲಿ ಪಾಲ್ಗೊಂಡ ಜೆಡಿಎಸ್‌ ಮುಖಂಡ ಬಿ.ಡಿ.ಪಾಟೀಲ್‌ ಮಾತನಾಡಿ, ಘಟನೆ ಹಿಂದೆ ಯಾರೇ ಇರಲಿ ಕೂಡಲೇ ಪೊಲೀಸ್‌ ಇಲಾಖೆ ತಪ್ಪಿಸ್ಥರನ್ನು ಪತ್ತೆ ಹಚ್ಚಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಆರೋಪಿಗಳನ್ನು ಬಂಧಿಸಲು ವಿಳಂಬ ಮಾಡಿದರೆ ರಾಜ್ಯಾವ್ಯಾಪಿ ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಭಾವಚಿತ್ರಗಳಿಗೆ ಹಾಲಿನ ಅಭಿಷೇಕ:

ಸುದ್ದಿ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಿಎಸೈ ಎಸ್‌.ಎಂ.ಸಿರಗುಪ್ಪಿ, ಗ್ರಾಮಸ್ಥರ ಸಭೆ ಕರದು ತಪ್ಪಿಸ್ಥರನ್ನು ಕೂಡಲೇ ಪತ್ತೆ ಹಚ್ಚುವ ಕೆಲಸ ನಡೆಯುತ್ತದೆ. ಧರಣಿಯಿಂದ ಹಿಂದೆ ಸರಿಯಬೇಕು. ಸಂಗೊಳ್ಳಿ ರಾಯಣ್ಣ, ಚನ್ನಮ್ಮ, ಕನಕದಾಸರ ಭಾವಚಿತ್ರಗಳನ್ನು ಸ್ವಚ್ಛಗೊಳಿಸಿ, ಪೂಜೆ ಮಾಡೋಣ ಎಂದು ಮನವೊಲಿಸಿದಾಗ ಗ್ರಾಮಸ್ಥರು ಒಪ್ಪಿಗೆ ಸೂಚಿಸಿ, ಧರಣಿ ಹಿಂದಕ್ಕೆ ಪಡೆದರು. ನಂತರ ಭಾವಚಿತ್ರಗಳನ್ನು ನೀರಿನಿಂದ ತೊಳೆದು ಹಾಲಿನಿಂದ ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.