Asianet Suvarna News Asianet Suvarna News

ಜಮಖಂಡಿ: ಚಿಕ್ಕಪಡಸಲಗಿ ಬ್ಯಾರೇಜ್‌ಗೆ 200 ಹೊಸ ಗೇಟ್‌ ಅಳವಡಿಕೆ

ನೂತನವಾಗಿ 200 ಗೇಟ್‌ಗಳನ್ನು ತಯಾರಿಸಲು ಮತ್ತು ವಿದ್ಯುತ್‌ ಬಿಲ್‌ ಪಾವತಿಸಲು ಅಂದಾಜು 1 ಕೋಟಿ ವೆಚ್ಚ ತಗುಲಲಿದೆ ಎಂದು ಕೃಷ್ಣಾ ತೀರ ರೈತರ ಸಂಘದ ಪ್ರಧಾನ ಕಾರ್ಯದರ್ಶಿ, ಶಾಸಕ ಆನಂದ ನ್ಯಾಮಗೌಡ ಹೇಳಿದರು.

Installation of 200 New Gates for Chikkapadasalagi Barrage in Jamakhandi grg
Author
First Published Jan 21, 2023, 8:00 PM IST

ಜಮಖಂಡಿ(ಜ.21):  ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಲ್ಬಣವಾಗದಂತೆ ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಗೇಟ್‌ ಅಳವಡಿಸುವ ಕಾರ್ಯ ಮಾಡಲಾಗುವುದು. ನೂತನವಾಗಿ 200 ಗೇಟ್‌ಗಳನ್ನು ತಯಾರಿಸಲು ಮತ್ತು ವಿದ್ಯುತ್‌ ಬಿಲ್‌ ಪಾವತಿಸಲು ಅಂದಾಜು 1 ಕೋಟಿ ವೆಚ್ಚ ತಗುಲಲಿದೆ ಎಂದು ಕೃಷ್ಣಾ ತೀರ ರೈತರ ಸಂಘದ ಪ್ರಧಾನ ಕಾರ್ಯದರ್ಶಿ, ಶಾಸಕ ಆನಂದ ನ್ಯಾಮಗೌಡ ಹೇಳಿದರು.

ತಾಲೂಕಿನ ಆಲಗೂರ ಗ್ರಾಮದ ಚಂದ್ರವ್ವತಾಯಿ ದೇವಸ್ಥಾನದಲ್ಲಿ ಕೃಷ್ಣಾ ತೀರದ ರೈತ ಸಂಘದ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಆಲಮಟ್ಟಿ ಜಲಾಶಯದಲ್ಲಿ 82 ಟಿಎಂಸಿ ನೀರು ಸಂಗ್ರಹವಿದೆ. ಹಿಪ್ಪರಗಿ ಬ್ಯಾರೇಜ್‌ನಲ್ಲಿ 6 ಟಿಎಂಸಿ ನೀರು ಸಂಗ್ರಹವಿದೆ. ಚಿಕ್ಕಪಡಸಲಗಿ ಬ್ಯಾರೇಜ್‌ನಲ್ಲಿ 4 ಟಿಎಂಸಿ ನೀರು ಸಂಗ್ರಹವಿದೆ. ಹಿಪ್ಪರಗಿ ಬ್ಯಾರೇಜ್‌ನಲ್ಲಿಯ 6 ಟಿಎಂಸಿ ಪೈಕಿ 4 ಟಿಎಂಸಿ ನೀರು ಮೂರು ತಿಂಗಳಿನಲ್ಲಿ ಬಳಕೆಯಾದರೆ 2 ಟಿಎಂಸಿ ನೀರು ಉಳಿಯುತ್ತದೆ. ಅದರಲ್ಲಿರುವ ಒಂದು ಟಿಎಂಸಿ ನೀರು ಮೇ ತಿಂಗಳ ಅಂತ್ಯದಲ್ಲಿ ಬಿಡುಗಡೆ ಮಾಡಿದರೆ ಯಾವುದೇ ನೀರಿನ ಸಮಸ್ಯೆ ಉಲ್ಬಣ ಆಗುವುದಿಲ್ಲ ಎಂದರು.

ನನಗೆ ಪಕ್ಷ ಎಲ್ಲ ಕೊಟ್ಟಿದೆ, ಅಸಮಾಧಾನ ಪ್ರಶ್ನೆಯೇ ಇಲ್ಲ:ಮಾಜಿ ಸಚಿವ ಎಸ್.ಆರ್. ಪಾಟೀಲ

2021ರವರೆಗೆ ರೈತರು .8.44 ಕೋಟಿ ಬಾಕಿ ನೀಡಬೇಕಿದ್ದು, ಸರ್ಕಾರ ಈಚೆಗೆ .2.7 ಕೊಟಿ ಅನುದಾನ ನೀಡಿದೆ. ಪ್ರತಿ ವರ್ಷ ನೀರು ಎತ್ತುವ ಕಾರ್ಯಕ್ಕೆ .2.63 ಕೋಟಿ ಖರ್ಚು ತಗಲುತ್ತದೆ ಎಂದು ವಿವರಿಸಿದರು. ನೂತನವಾಗಿ 200 ಗೇಟ್‌ಗಳನ್ನು ತಯಾರಿಸಲಿಕ್ಕೆ 55 ಲಕ್ಷ, ಒಂದು ವರ್ಷಕ್ಕೆ ಕನಿಷ್ಠ ವಿದ್ಯುತ್‌ ಬಿಲ್‌ 36 ಲಕ್ಷ ಸೇರಿ ಪ್ರಸಕ್ತ ವರ್ಷ .1 ಕೋಟಿಗಿಂತ ಅಧಿಕ ಹಣ ಬೇಕಾಗುತ್ತದೆ. ಕೃಷ್ಣಾ ತಟದಲ್ಲಿರುವ ರೈತರ ಒಂದು ಪಂಪ್‌ಸೆಟ್‌ಗೆ .3 ಸಾವಿರ ನಿಗದಿ ಮಾಡಲಾಗಿದ್ದು, ಜನವರಿ ಅಂತ್ಯದವರೆಗೆ ಭರಿಸಬೇಕು ಎಂದು ಮನವಿ ಮಾಡಿಕೊಂಡರು. ಸಿದ್ದು ನ್ಯಾಮಗೌಡ ಸೌಹಾರ್ದ ಬ್ಯಾಂಕ್‌ನಿಂದ .12 ಲಕ್ಷ ಸಂಘಕ್ಕೆ ದೇಣಿಗೆ ನೀಡುವುದಾಗಿ ತಿಳಿಸಿದರು.

ವಿಪ ಮಾಜಿ ಸದಸ್ಯ ಜಿ.ಎಸ್‌.ನ್ಯಾಮಗೌಡ ಮಾತನಾಡಿ, ಬ್ಯಾರೇಜ್‌ ನಿರ್ಮಾಣ ಹಂತದಲ್ಲಿ ಮತ್ತು ಅದರ ಅಭಿವೃದ್ಧಿಗಾಗಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಆಡಳಿತ ಸರ್ಕಾರಗಳು ಸಹಾಯಹಸ್ತ ನೀಡುತ್ತ ಬಂದಿವೆ. ರೈತರೂ ಪ್ರತಿ ಹಂತದಲ್ಲೂ ಕೈಜೋಡಿಸುತ್ತಾ ಬಂದಿದ್ದಾರೆ. ಪ್ರತಿ ವರ್ಷ ಅಂದಾಜು .36 ಲಕ್ಷ ಕನಿಷ್ಠ ವಿದ್ಯುತ್‌ ಬಿಲ್‌ ಪಾವತಿಸಲಾಗುತ್ತಿದೆ. ಅದನ್ನು 6 ತಿಂಗಳಿಗೆ ಸೀಮಿತಗೊಳಿಸಿ ಕಡಿಮೆ ಬಿಲ್‌ ಪಡೆಯುವಂತೆ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಸುರೇಶಗೌಡ ಪಾಟೀಲ, ಬಿ.ಕೆ.ಪಾಟೀಲ, ಮಲ್ಲಪ್ಪ ಪೂಜಾರಿ, ಮಾದೇವ ಗೋಡೆಕಟ್ಟು, ಮಲ್ಲಪ್ಪ ಸಿದ್ದಣ್ಣವರ, ಅಜಿತ ಸದಲಗಿ, ಕಾಶಪ್ಪ ಸನದಿ, ತಮ್ಮಣಿಪ್ಪ ಯಲೆಗೌಡ, ರೆಹಮಾನ್‌ ಜಮಖಂಡಿ, ಬಸವರಾಜ ಗಲಗಲಿ, ಚಿದಾನಂದ ಚೌರಿ, ಅಣ್ಣಾಸಾಹೇಬ ತೇಲಿ, ಸಂಘದ ಅಧ್ಯಕ್ಷ ರಾಜೇಂದ್ರಗೌಡ ಪಾಟೀಲ, ಪದ್ಮಣ್ಣ ಜಕನೂರ, ವರ್ಧಮಾನ ನ್ಯಾಮಗೌಡ, ಬಸವರಾಜ ನ್ಯಾಮಗೌಡ, ಮಹಾವೀರ ಪಾಟೀಲ, ಭರತೇಶ ಮೂಕನವರ, ಚಂದ್ರಶೇಖರ ಚಿಕ್ಕೂರಮಠ, ಇತರರು ಇದ್ದರು.

Follow Us:
Download App:
  • android
  • ios