ಬಿಜೆಪಿ ಮಂತ್ರಿಮಂಡಲ ಅಸಮತೋಲನದಿಂದ ಕೂಡಿದೆ : ಕುಮಾರಸ್ವಾಮಿ
- ಬಿಜೆಪಿ ಮಂತ್ರಿ ಮಂಡಲ ಅತ್ಯಂತ ಅಸಮತೋಲನದಿಂದ ಕೂಡಿದೆ
- ಕೇವಲ ಹದಿಮೂರು ಜಿಲ್ಲೆಗೆ ಮಾತ್ರ ಮಂತ್ರಿಗಿರಿ ನೀಡಿದ್ದಾರೆ
- ದಲಿತರಿಗೆ ಕೇವಲ 3 ಜನ ಹಿಂದುಳಿದ ವರ್ಗಕ್ಕೆ 5 ಮಂತ್ರಿ ಸ್ಥಾನ ನೀಡಲಾಗಿದೆ
ಹಾಸನ (ಆ.08): ಬಿಜೆಪಿ ಮಂತ್ರಿ ಮಂಡಲ ಅತ್ಯಂತ ಅಸಮತೋಲನದಿಂದ ಕೂಡಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನದಲ್ಲಿಂದು ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ .ಕೆ ಕುಮಾರಸ್ವಾಮಿ ಕೇವಲ ಹದಿಮೂರು ಜಿಲ್ಲೆಗೆ ಮಾತ್ರ ಮಂತ್ರಿಗಿರಿ ನೀಡಿದ್ದಾರೆ. ದಲಿತರಿಗೆ ಕೇವಲ 3 ಜನ ಹಿಂದುಳಿದ ವರ್ಗಕ್ಕೆ 5 ಮಂತ್ರಿ ಸ್ಥಾನ ನೀಡಲಾಗಿದೆ. ಬಿಜೆಪಿ ಸರ್ಕಾರ ದಲಿತ, ಮಹಿಳೆ ವಿರೋಧದ ಸರ್ಕಾರ ಎಂದು ಟೀಕೆ ಮಾಡಿದರು.
ಶಿರಾ ಚುನಾವಣೆ ವೇಳೆ ಗೊಲ್ಲ ಸಮುದಾಯಕ್ಕೆ ನಿಗಮ ಘೋಷಿಸಲಾಯಿತು. ಇದುವರೆಗೂ ಒಂದೇ ಒಂದು ರು. ಬಿಡುಗಡೆ ಆಗಿಲ್ಲ. ಕೇವಲ ಮತಕ್ಕಾಗಿ ಇಂತಹ ಘೋಷಣೆಗಳು ಮಾರಕವಾದುದು. ಸುಳ್ಳು ಹೇಳಿ ರಾಜಕೀಯ ಮಾಡಬಾರದು ಎಂದರು.
'ನಾನು ಜನತಾದಳದ ಸಿಎಂ ಅಲ್ಲ, ಅಪ್ಪಟ ಬಿಜೆಪಿ ಸಿಎಂ '
ಆಷಾಢ ದ ನಂತರ ಜೆಡಿಎಸ್ ಬಲವರ್ಧನೆಗೆ ಸಂಘಟನೆ ಮಾಡುತ್ತೇವೆ. ಹೆಚ್.ಡಿ ಕುಮಾರಸ್ವಾಮಿ ಜೊತೆ ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡಿ ಸಂಘಟಿಸುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.
ಕ್ಷೇತ್ರಗಳ ಅಭಿವೃದ್ಧಿ ಆಗಬೇಕಾದರೆ ಸರಿಯಾಗಿ ವಿಂಗಡಣೆ ಆಗಬೇಕು. ಭೌಗೋಳಿಕ ಸಮತೋಲನದ ಆಧಾರದ ಮೇಲೆ ವಿಸ್ತರಣೆ ಆಗಬೇಕು. ಆಗ ಮಾತ್ರ ಕ್ಷೇತ್ರದ ಅಭಿವೃದ್ಧಿ ಆಗಲು ಸಾಧ್ಯವಿದೆ. ಕೆಲ ರಾಜ್ಯಗಳಲ್ಲಿ ಕೇವಲ 30 ಸಾವಿರಕ್ಕೆ ಒಬ್ಬ ಶಾಸಕರಿದ್ದಾರೆ. ಮಲೆನಾಡು ಭಾಗದಲ್ಲಿ ಭೌಗೋಳಿಕವಾಗಿ ವಿಂಗಡಣೆ ಆಗಬೇಕು.
ಸಕಲೇಶಪುರ ಸೇರಿದಂತೆ ಎಲ್ಲಾ ಮಲೆನಾಡು ಭಾಗದ ಕ್ಷೇತ್ರ ಮರು ವಿಂಗಡಣೆಗೆ ಮಾಡುವುದಕ್ಕೆ ನನ್ನ ಸಹಮತವಿದೆ. ಯಡಿಯೂರಪ್ಪ ಆಡಳಿತಾವಧಿಯಲ್ಲಿ ತಾರತಮ್ಯ ಮಾಡಿದ್ದು ನಿಜ. ಈ ಅವಧಿಯಲ್ಲಿ ಆ ರೀತಿ ಆಗುವುದಿಲ್ಲ ಎಂದು ಭಾವಿಸಿದ್ದೇನೆ. ಮುಖ್ಯಮಂತ್ರಿ ಗಳು ಶಿಗ್ಗಾವಿ ಅಭಿವೃದ್ಧಿ ಮಾಡುತ್ತೇನೆ ಎಂಬುದನ್ನು ಗಮನಿಸಿದ್ದೇನೆ.
ಬೊಮ್ಮಾಯಿ ರಾಜ್ಯಕ್ಕೇ ಮುಖ್ಯಮಂತ್ರಿ ಕೇವಲ ಒಂದು ಕ್ಷೇತ್ರಕ್ಕಲ್ಲ. ಎಲ್ಲಾ ಕ್ಷೇತ್ರವನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು. ವೀರೇಂದ್ರ ಪಾಟೀಲ್, ಜೆ.ಹೆಚ್ ಪಟೇಲರಂತೆ ಕೆಲಸ ಮಾಡಬೇಕು ಎಂದು ಹೇಳಿದರು.
ಹಾಸನ ನೆರೆಗೆ ಸಿಲುಕುತ್ತಿದೆ : ಸತತ ನಾಲ್ಕು ವರ್ಷಗಳಿಂದ ಹಾಸನ ಜಿಲ್ಲೆಯಲ್ಲಿ ಭಾರೀ ಮಳೆ ಆಗುತ್ತಿದೆ. ಆಲೂರು ಸಕಲೇಶಪುರ ಭಾಗದಲ್ಲಂತೂ ಅತಿ ಹೆಚ್ಚು ಮಳೆ ಆಗುತ್ತಿದೆ
ಮಳೆ ಆದಾಗ ಸಚಿವರುಗಳು ಬಂದು ಸಮೀಕ್ಷೆ ಮಾಡುವುದು ಸಾಮಾನ್ಯ. ಸರ್ಕಾರದ ಅಧಿಕಾರಿಗಳೂ ಕೂಡ ಸಮೀಕ್ಷೆ ಮಾಡಿದ್ದಾರೆ. ಆದರೆ ಇಲ್ಲಿ ವರೆಗೂ ಯಾವುದೇ ಕ್ರಮಗಳು ಆಗಿಲ್ಲ. ಖುದ್ದು ಮುಖ್ಯಮಂತ್ರಿ ಗಳೇ ಬಂದು ಸಮೀಕ್ಷೆ ನಡೆಸಬೇಕು. ಅವರೇ ಬಂದು ಸಮೀಕ್ಷೆ ನಡೆಸಿದರೆ ಕ್ರಮ ಆಗುತ್ತದೆ ಎಂದರು.
ರಾಜ್ಯದ ಕೆಲ ಜಿಲ್ಲೆಗಳಿಗೆ ಮಾತ್ರ ಪರಿಹಾರ ಒದಗಿಸಲಾಗುತ್ತಿದೆ. ಹಾಸನ ಚಿಕ್ಕಮಗಳೂರು ಜಿಲ್ಲೆಗೆ ಸರಿಯಾಗಿ ಪರಿಹಾರ ನೀಡುತ್ತಿಲ್ಲ. ಪರಿಹಾರಕ್ಕೆ ನಿಗಧಿಯಾಗಿರುವ ಮಾನದಂಡಗಳು ಸಮರ್ಪಕವಾಗಿಲ್ಲ. ಈ ನಿಯಮಗಳನ್ನು ಕೂಡಲೇ ಸಡಿಲಗೊಳಿಸಬೇಕು. ಸಕಲೇಶಪುರ ಕ್ಷೇತ್ರಕ್ಕೆ ಕನಿಷ್ಟ ನೂರು ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ವ್ಯಾಕ್ಸಿನ್ ಕೊರತೆ : ಕರ್ನಾಟಕ ರಾಜ್ಯಕ್ಕೆ ಸರಿಯಾದ ವ್ಯಾಕ್ಸಿನ್ ಸರಬರಾಜಾಗುತ್ತಿಲ್ಲ. ವ್ಯಾಕ್ಸಿನ್ ಹಂಚಿಕೆಯಲ್ಲೂ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಕೂಡಲೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಬೇಕು. ಕೇಂದ್ರ ನಾಯಕರ ಸ್ವಂತ ರಾಜ್ಯಗಳಿಗೆ ಹೆಚ್ಚಿನ ವ್ಯಾಕ್ಸಿನ್ ನೀಡುತ್ತಿದ್ದಾರೆ. ಶೀಘ್ರವೇ ವ್ಯಾಕ್ಸಿನ್ ಸಮಸ್ಯೆ ಬಗೆಹರಿಸಬೇಕು ಎಂದು ಎಚ್ ಕುಮಾರಸ್ವಾಮಿ ಒತ್ತಾಯಿಸಿದರು.