ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಆದರೆ ಯತ್ನಾಳ ಹೀಗೆಲ್ಲ ಮಾತನಾಡಬಾರದಿತ್ತು. ಆದರೂ ಅವರ ಮೇಲೆ ನಮಗೆ ಗೌರವವಿದೆ ಎಂದು ಮಾಜಿ ಸಚಿವ ಹಾಲಿ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ದಾವಣಗೆರೆ(ಜೂ.06): ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಸಿಲ್ಲ, ನಡೆಸುವುದೂ ಇಲ್ಲ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ. ಸಚಿವ ಸ್ಥಾನಕ್ಕೆ ಈಗ ನಾವು ಬೇಡಿಕೆ ಇಟ್ಟರೆ ರೇಣುಕಾಚಾರ್ಯ ಸಚಿವ ಸ್ಥಾನಕ್ಕೆ ಲಾಬಿ ಮಾಡುತ್ತಿದ್ದಾರೆಂಬ ತಪ್ಪು ಸಂದೇಶ ರವಾನೆಯಾಗುತ್ತದೆ. ಸೂಕ್ತ ಸಂದರ್ಭದಲ್ಲಿ ನಮ್ಮ ಬೇಡಿಕೆಯನ್ನಿಡುತ್ತೇವೆ ಎಂದು ಹೇಳಿದರು.

Add Asianetnews Kannada as a Preferred SourcegooglePreferred

ನಗರದಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೈರತಿ ಬಸವರಾಜು ಉಸ್ತುವಾರಿ ಸಚಿವರಾಗಬೇಕೆಂದು ನಾವೇನೂ ಉಸ್ತುವಾರಿ ಪಡೆದವರಲ್ಲ. ಸಿಎಂ ಯಡಿಯೂರಪ್ಪ ಭೈರತಿಯವರಿಗೆ ಉಸ್ತುವಾರಿ ನೀಡಿದ್ದಾರೆ. ಭೈರತಿ ಸಹ ಉಸ್ತುವಾರಿ ಸಚಿವರಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು. 

ಬಿಜೆಪಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಮತವಾಗಲೀ, ಭಿನ್ನಾಭಿಪ್ರಾಯವಾಗಲೀ ಇಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಭ್ರಮನಿರಸನರಾಗಿ ಮಾತನಾಡುತ್ತಿದ್ದಾರಷ್ಟೇ. ಇದೇ ಸಿದ್ದರಾಮಯ್ಯ ಹಿಂದೆ ತುಘಲಕ್‌ ದರ್ಬಾರ್‌ ನಡೆಸಿದ್ದಾರೆ ಎಂದು ಟೀಕಿಸಿದರು.

ನಿಜಗುಣಪ್ರಭು ಸ್ವಾಮೀಜಿಗೆ ಕೊಲೆ ಬೆದರಿಕೆ: ಶ್ರೀಗಳಿಗೆ ಗನ್‌ಮ್ಯಾನ್‌ ಭದ್ರತೆ

ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಪುತ್ರನೇ ಸರ್ಕಾರಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದನ್ನು ಜನತೆ ಮರೆತಿಲ್ಲ. ಈಗ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದಲ್ಲಿ ಬಿ.ವೈ.ವಿಜಯೇಂದ್ರ ಯಾವುದೇ ರೀತಿಯಲ್ಲೂ ಹಸ್ತಕ್ಷೇಪ ಮಾಡುತ್ತಿಲ್ಲ. ಪಕ್ಷ ಸಂಘಟನೆಯತ್ತ ವಿಜಯೇಂದ್ರ ಗಮನ ಹರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇನ್ನೂ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ರನ್ನು ಬಿಜೆಪಿಗೆ ವಾಪಾಸ್ಸು ಕರೆ ತಂದಿದ್ದೇ ಮುಖ್ಯಮಂತ್ರಿ ಯಡಿಯೂರಪ್ಪ. ವಾಸ್ತವ ಹೀಗಿದ್ದರೂ ಯತ್ನಾಳ್‌ ಹೀಗೆಲ್ಲಾ ಮಾತನಾಡಬಾರದಿತ್ತು. ಯತ್ನಾಳ್‌ ಬಗ್ಗೆ ನಮಗೆ ಗೌರವವಿದೆ ಎಂದು ಹೇಳಿದರು.