Asianet Suvarna News Asianet Suvarna News

ದಲಿತ, ಮುಸ್ಲಿಂ ಲೇಖಕರ ಕಡೆಗಣನೆ, ಸಾಹಿತ್ಯ ಸಮ್ಮೇಳನ ಬಹಿಷ್ಕರಿಸುತ್ತೇನೆ: ಹೆಚ್. ವಿಶ್ವನಾಥ್

ಸಮ್ಮೇಳನಕ್ಕೆ ಹೇಗೆಲ್ಲಾ ಸಿದ್ದತೆ ಮಾಡಿಕೊಳ್ಳಬೇಕು ಎಂಬುದನ್ನು ಸಭೆಗಳನ್ನು ಮಾಡಿ ಚರ್ಚಿಸಿ ಉತ್ತಮ ನಿರ್ಧಾರಗಳನ್ನು ಮಾಡಬೇಕಾಗಿತ್ತು. ಆದರೆ ಸಭೆಗಳನ್ನೇ ಮಾಡದೆ ಏಕಪಕ್ಷೀಯಎನ್ನುವಂತೆ ಎಲ್ಲಾ ನಿರ್ಧಾರಗಳನ್ನು ಮಾಡುತ್ತಾ ಸಮ್ಮೇಳನಕ್ಕೆ ಮುಂದಾಗಿದ್ದಾರೆ. ಸರ್ಕಾರ ಇದಕ್ಕೆ ಸರಿಯಾಗಿ ಹುಚ್ಚು, ಹುಚ್ಚಾಗಿ ಕೆಲಸ ಮಾಡ್ತಿದೆ: ಹೆಚ್. ವಿಶ್ವನಾಥ್ 

I Will Boycott the Kannada Sahitya Sammelana Due to Neglect of Dalit Muslim Writers grg
Author
First Published Jan 4, 2023, 11:30 PM IST

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು 

ಕೊಡಗು(ಜ.04):  ಕನ್ನಡ ಜನತೆಯ ಭಾಷೆ, ಬದುಕಿನ ಸಮಸ್ಯೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಾ ಪಕ್ಷಗಳ ನಾಯಕರ ವೇದಿಕೆಯಾಗಿ ಬದಲಾಗಿದೆ. ಹೀಗಾಗಿ ಇದೊಂದು ಡೋಂಗಿ ಸಮ್ಮೇಳನವಾಗಿದ್ದು ನಾವು ಅದನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ಬಿಜೆಪಿ ಎಂಎಲ್ಸಿ ಹೆಚ್. ವಿಶ್ವನಾಥ್ ಹೇಳಿದ್ದಾರೆ.  ಇಂದು(ಬುಧವಾರ) ನಗರದದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಅಸ್ಮಿತೆ. ಅದು ಯಾವುದೇ ಜಾತಿ, ಧರ್ಮಗಳ ವೇದಿಕೆಯಲ್ಲ. ಆದರೆ ಇಂದು ಸಾಹಿತ್ಯ ಪರಿಷತ್ತು, ಸಮ್ಮೇಳನ ಜಾತಿ, ಧರ್ಮಗಳ ವೇದಿಕೆ ಎನ್ನುವಂತೆ ಬದಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಮುಸ್ಲಿಮರಿಗೆ ಶಾಮಿಯಾನ ಹಾಕುವುದರಲ್ಲಿ ಅವಕಾಶ

ಸಾಹಿತ್ಯ ಸಮ್ಮೇಳನದಲ್ಲಿ 81 ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ. ಇವರಲ್ಲಿ ಒಬ್ಬೇ ಒಬ್ಬರು ಮುಸ್ಲಿಂ ಸಾಧಕರನ್ನು ಆಯ್ಕೆ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಸ್ಲಿಂರಿಗೆ ಸಮ್ಮೇಳನದಲ್ಲಿ ಅವಕಾಶ ನೀಡಿದ್ದೇವೆ ಎಂದು ಹೇಳಲಾಗುತ್ತಿದೆ. ಆದರೆ ಎಲ್ಲಿ ಅವಕಾಶ ನೀಡಿದ್ದಾರೆ ಎಂದು ನೋಡಿದರೆ, ಶಾಮಿಯಾನ ಹಾಕುವುದರಲ್ಲಿ ಅವಕಾಶ ನೀಡಿದ್ದೀರಿ. ಡ್ರೈವರ್ ಆಗಿ ಕೆಲಸ ಮಾಡಲು ಅವಕಾಶ ನೀಡಿದ್ದೀರಿ. ಸಾಹಿತ್ಯ ಸಮ್ಮೇಳನದ ಯಾವ ಗೋಷ್ಠಿಯಲ್ಲಿ ಮುಸ್ಲಿಂ ಲೇಖಕರಿಗೆ ಅವಕಾಶ ನೀಡಿದ್ದೀರಿ ಎಂದು ವಿಶ್ವನಾಥ್ ಪ್ರಶ್ನಿಸಿದರು. 

ಕೊಡಗಿನ ಎಲ್ಲೆಡೆ ಅರಳಿ ಪ್ರವಾಸಿಗರ ಕಣ್ಮನ ಕೋರೈಸುತ್ತಿದೆ ಕಾಡು ಮಲ್ಲಿಗೆ!

ರಾಜ್ಯದಲ್ಲಿ ಕನ್ನಡ ಮಾತನಾಡುವ 70 ಲಕ್ಷ ಮುಸಲ್ಮಾನರಿದ್ದಾರೆ. ಅವರಿಗೆ ಸಾಮಾಜಿಕ ನ್ಯಾಯ ಒದಗಿಸಿರುವುದು ಇದೇನಾ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಂದು ರಾಜಕಾರಣ, ರಾಜಕೀಯ ಮತ್ತು ರಾಜಕಾರಣಿಗಳನ್ನು ಮೈಲಿಗೆ ಎನ್ನುವ ದೃಷ್ಟಿಕೋನದಲ್ಲಿ ನೋಡಲಾಗುತ್ತಿದೆ. ಇದು ಬದಲಾಗಬೇಕಾಗಿದೆ ಎಂದು ಎಂದು ಸಲಹೆ ನೀಡಿದರು.

ಸಮ್ಮೇಳನದಲ್ಲಿ ದಲಿತ ಸಾಹಿತ್ಯ ಗೋಷ್ಠಿಯನ್ನು ಬದಲಾಯಿಸಿ ಅದನ್ನು ದಮನಿತರ ಗೋಷ್ಠಿ ಎಂದು ಮಾಡಲಾಗುತ್ತಿದೆ. ಆದರೆ ದಲಿತ ಎಂಬುದಕ್ಕೂ, ದಮನಿತರು ಎನ್ನುವುದಕ್ಕೂ ಎಷ್ಟೊಂದು ವ್ಯತ್ಯಾಸ ಇದೆ ಎನ್ನುವುದನ್ನು ಸಾಹಿತ್ಯ ಪರಿಷತ್ತಿನ ಪ್ರಮುಖರು ಮೊದಲು ತಿಳಿದುಕೊಳ್ಳುವ ಕೆಲಸ ಆಗಲಿ ಎಂದು ಚುಚ್ಚಿದರು. ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯ ಗೋಷ್ಠಿಗಳು ಇರುತ್ತಿದ್ದವು. ರಾಜಕೀಯ ವಿಷಯದ ಗೋಷ್ಠಿಗಳು ಆರಂಭವಾಗಿದ್ದವು. ಆದರೆ ಇಂದು ಅದು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ವೇದಿಕೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದರು. 

Assembly election: ವಿಧಾನ ಸಭಾ ಚುನಾವಣೆ : ಸಾಮಾಜಿಕ ಜಾಲತಾಣಗಳಲ್ಲಿ ಜೋರು ಪ್ರಚಾರ

ಮುಸ್ಲಿಂ ಸಾಹಿತ್ಯದ ಧ್ವನಿ ಧಮನ 

ಬ್ಯಾರಿ, ಮುಸ್ಲಿಂ ಸಾಹಿತ್ಯ ಗೋಷ್ಠಿಗಳು ಇರುತ್ತಿದ್ದವು. ಆದರೆ ಈ ಸಮ್ಮೇಳನದಲ್ಲಿ ಅವೆಲ್ಲವನ್ನೂ ರದ್ದು ಮಾಡಿ ದಲಿತ, ಮುಸ್ಲಿಂ ಸಾಹಿತ್ಯದ ಧ್ವನಿಯನ್ನು ಧಮನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಿಎಂ ಅವರ ಜಿಲ್ಲೆಯಲ್ಲಿಯೇ ನಡೆಯುತ್ತಿರುವ ಸಮ್ಮೇಳನಕ್ಕೆ 20 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಆದರೆ ಒಬ್ಬೇ ಒಬ್ಬ ಸಚಿವ, ಅಥವಾ ಸಿಎಂ ಇದರ ಲೆಕ್ಕಪತ್ರದ ಬಗ್ಗೆ ಕೇಳಿದಂತೆ ಇಲ್ಲ. ಇವರು ಕೇವಲ ಏಲಕ್ಕಿ ಹಾರ ಹಾಕಿಸಿಕೊಂಡು ಬರುವುದಕ್ಕೆ ಸೀಮಿತವೇ ಎಂದು ಪ್ರಶ್ನೆ ಮಾಡಿದರು. ಕನ್ನಡ ಸಾಹಿತ್ಯ ಸಮ್ಮೇಳನದ ರೂಪುರೇಷೆ ಸರಿಯಾಗಿಲ್ಲ ಎಂದರು. 

ಸಮ್ಮೇಳನಕ್ಕೆ ಹೇಗೆಲ್ಲಾ ಸಿದ್ದತೆ ಮಾಡಿಕೊಳ್ಳಬೇಕು ಎಂಬುದನ್ನು ಸಭೆಗಳನ್ನು ಮಾಡಿ ಚರ್ಚಿಸಿ ಉತ್ತಮ ನಿರ್ಧಾರಗಳನ್ನು ಮಾಡಬೇಕಾಗಿತ್ತು. ಆದರೆ ಸಭೆಗಳನ್ನೇ ಮಾಡದೆ ಏಕಪಕ್ಷೀಯಎನ್ನುವಂತೆ ಎಲ್ಲಾ ನಿರ್ಧಾರಗಳನ್ನು ಮಾಡುತ್ತಾ ಸಮ್ಮೇಳನಕ್ಕೆ ಮುಂದಾಗಿದ್ದಾರೆ. ಸರ್ಕಾರ ಇದಕ್ಕೆ ಸರಿಯಾಗಿ ಹುಚ್ಚು, ಹುಚ್ಚಾಗಿ ಕೆಲಸ ಮಾಡ್ತಿದೆ. ಇದರಿಂದ ಸಾಕಷ್ಟು ಬೇಸರವಾಗಿದ್ದು, ಸಮ್ಮೇಳನವನ್ನು ಧಿಕ್ಕರಿಸಬೇಕು ಎಂದಿದ್ದಾರೆ. ಒಟ್ಟಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯದ ಭಾಷೆ, ಜನತೆಯ ಸಮಸ್ಯೆಯನ್ನು, ಕನ್ನಡದ ಶಾಲೆಗಳ ಅಭಿವೃದ್ಧಿಯ ವಿಷಯಗಳನ್ನು ಚರ್ಚಿಸಬೇಕಾದ ಈ ಸಂದರ್ಭದಲ್ಲಿ ಮಹಿಳಾ ಲೇಖಕಿಯರನ್ನು ಕಡೆಗಣಿಸಲಾಗಿದೆ. ಹೀಗಾಗಿ ಸಾಹಿತ್ಯ ಸಮ್ಮೇಳನವನ್ನು ತಿರಸ್ಕರಿಸಬೇಕಾಗಿದೆ ಎಂದು ಹೇಳಿದರು.

Follow Us:
Download App:
  • android
  • ios