ಬಿಜೆಪಿಯಲ್ಲಿ ಸಕ್ರಿಯಾನಾಗಿಲ್ಲ, ಅಕ್ರಮವಾಗಿದ್ದೇನೆ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಸಂದೇಶ್‌ ನಾಗರಾಜ್‌ ತಿಳಿಸಿದರು.

 ಮೈಸೂರು (ಡಿ.13): ಬಿಜೆಪಿಯಲ್ಲಿ ಸಕ್ರಿಯಾನಾಗಿಲ್ಲ, ಅಕ್ರಮವಾಗಿದ್ದೇನೆ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಸಂದೇಶ್‌ ನಾಗರಾಜ್‌ ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡು ಅನ್ಯಾಯ ಮಾಡಿದರು. ಅನ್ಯಾಯ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸಿಮರು. ಮೋಸ ಮಾಡುವುದರಲ್ಲಿ ಬಿಜೆಪಿಯವರು ನಂಬರ್‌ ಒನ್‌ ಎಂದು ಕಿಡಿಕಾರಿದರು.

ಬಿಜೆಪಿ ಸಹವಾಸ ನನಗೆ ಇನ್ನೂ ಸಾಕು. ಎಚ್‌. ವಿಶ್ವನಾಥ್‌ಗೆ ಅನ್ಯಾಯ ಮಾಡಿದರು. ನನಗೂ ಅನ್ಯಾಯ ಮಾಡಿದರು. ಬಿಜೆಪಿಯಿಂದ 10 ಹೆಚ್ಚು ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ. ಸಿದ್ದರಾಮಯ್ಯ ಅವರ ಜೊತೆ ಮಾತಾಡಿದ್ದಿನಿ. ಡಿ.ಕೆ. ಶಿವಕುಮಾರ್‌ ಅವರ ಜೊತೆಯೂ ಮಾತಾಡುತ್ತೇನೆ ಎನ್ನುವ ಮೂಲಕ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಲು ನಿರ್ಧರಿಸಿರುವುದಾಗಿ ಹೇಳಿದರು.

ವಿಜಯೇಂದ್ರ ಬಲಿ: ಬಿಜೆಪಿಯವರು ಯಡಿಯೂರಪ್ಪನನ್ನು ಒಳ್ಳೆತನದಲ್ಲಿ ಮುಗಿಸಿದರು. ಯಡಿಯೂರಪ್ಪನನ್ನು ಒಳ್ಳೆತನದಲ್ಲಿ ಮುಗಿಸಿದ ವೇಳೆಯೆ ಬಿಜೆಪಿಗೆ 40 ಸ್ಥಾನ ನಷ್ಟವಾಯ್ತು. ಈಗ ಬಿ.ವೈ. ವಿಜಯೇಂದ್ರನನ್ನು ವರುಣಕ್ಕೆ ತರುವ ಮೂಲಕ ಅವರನ್ನು ಮುಗಿಸಲು ಹೊರಟ್ಟಿದ್ದಾರೆ ಎಂದು ಅವರು ಆರೋಪಿಸಿದರು.

ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್‌ ಬಿಜೆಪಿಯದು. ವಿಜಯೇಂದ್ರನನ್ನು ಬಲಿ ಕೊಡಲು ವರುಣ ಕ್ಷೇತ್ರಕ್ಕೆ ಕರೆ ತರುತ್ತಿದ್ದಾರೆ. ವಿಜಯೇಂದ್ರಗೆ ರಾಜಕೀಯ ಭವಿಷ್ಯ ಚೆನ್ನಾಗಿ ಇರಬೇಕಾದರೆ ಶಿಕಾರಿಪುರದಲ್ಲೇ ಸ್ಪರ್ಧೆ ಮಾಡಲಿ ಎಂದು ಅವರು ಸಲಹೆ ನೀಡಿದರು.