Asianet Suvarna News Asianet Suvarna News

ಧ್ವಜ ಅವರೋಹಣ ಬಳಿಕ ಏನು ಮಾಡಬೇಕು, ಜಮಖಂಡಿ ನಗರಸಭೆ ವಿಡಿಯೋ ಸಂದೇಶ ವೈರಲ್

ಸ್ವಾತಂತ್ರ್ಯೋತ್ಸವ ಮುಗಿಯುತ್ತಿದ್ದಂತೆ ಪ್ರತಿಯೊಬ್ಬರು ತಾವು ಬಳಕೆ ಮಾಡುವ ರಾಷ್ಟ್ರಧ್ವಜವನ್ನು ಎಲ್ಲೆಂದರಲ್ಲಿ ಹಾಕದೇ ಅದನ್ನು ಗೌರವಯುತವಾಗಿ ನೋಡಿಕೊಂಡು ಕಾಪಾಡಿಕೊಂಡು ಇರಿಸಬೇಕೆನ್ನುವ ಹಿನ್ನೆಲೆಯಲ್ಲಿ ಜಮಖಂಡಿ ನಗರಸಭೆ ಮಹತ್ವದ ವಿಡಿಯೋ ಸಂದೇಶ ಸಾರಿದೆ.

how can preserve national flag Jamkhandi Municipal Council video message viral gow
Author
Bengaluru, First Published Aug 15, 2022, 9:11 PM IST

ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್ 

ಬಾಗಲಕೋಟೆ (ಆ.15): ದೇಶದಾದ್ಯಂತ 75 ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ದಿನಾಚರಣೆ ಮುಗಿದ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರಸಭೆ ರಾಷ್ಟ್ರಧ್ವಜ ಸಂರಕ್ಷಣೆ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಮುಂದಾಗಿದೆ. ದೇಶಾದ್ಯಂತ ಇಂದು ಅತ್ಯಂತ ಸಡಗರ, ಸಂಭ್ರಮದಿಂದ 75 ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಈ ಮಧ್ಯೆ ಇಡೀ ದೇಶವ್ಯಾಪಿ ನಿರಂತರ ಮೂರು ದಿನಗಳ ಕಾಲ ಮನೆ ಮನೆಯಲ್ಲೂ ತಿರಂಗಾ ಧ್ವಜ ಅಭಿಯಾನಕ್ಕೆ ಕರೆ ನೀಡಲಾಗಿತ್ತು. ಹೀಗಾಗಿ ಪ್ರತಿಯೊಬ್ಬರು ಮನೆಮನೆಗಳ ಮೇಲ್ಭಾಗದಲ್ಲಿ ಹರ್ ಘರ್ ತಿರಂಗಾ ಅಭಿಯಾನದಡಿ ರಾಷ್ಟ್ರಧ್ವಜವನ್ನ ಹಾರಿಸಿ ಗೌರವ ಸಮರ್ಪಣೆಯನ್ನ ಸಲ್ಲಿಸಿದರು.  ಈ ಮಧ್ಯೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರ ಸಭೆಯು ಸಹಿತ 14 ಸಾವಿರಕ್ಕೂ ಅಧಿಕ ಧ್ವಜಗಳನ್ನು ತಯಾರಿಸಿ ಅವುಗಳನ್ನು ನಗರದ ಮನೆ ಮನೆಗಳಲ್ಲಿ, ಮಾರ್ಕೆಟ್ ಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ನೀಡುವುದರ ಮೂಲಕ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಮತ್ತಷ್ಟು ಮೆರಗು ನೀಡಿ, ಸಂಭ್ರಮದಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ದಿನಾಚರಣೆಯನ್ನು ಸಾರ್ಥಕಗೊಳಿಸಿತು. ಇನ್ನು ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಬೆನ್ನಲ್ಲೆ ಸ್ವಚ್ಚತಾ ಅಭಿಯಾನಕ್ಕೆ ಕರೆ ನೀಡಲು ಮುಂದಾಯಿತು.

ತಿರಂಗ ಜಾಗೃತಿ ವಿಡಿಯೋ ವೈರಲ್:  ಜಮಖಂಡಿ ನಗರದಾದ್ಯಂತ ಮನೆ ಮನೆಗಳಿಗೆ ರಾಷ್ಟ್ರಧ್ವಜ ನೀಡಿ ಸಂಭ್ರಮಾಚರಣೆ ಮಾಡುವುದು ಒಂದು ಭಾಗವಾದರೆ, ಸ್ವಾತಂತ್ರ್ಯೋತ್ಸವ ಮುಗಿಯುತ್ತಿದ್ದಂತೆ ಪ್ರತಿಯೊಬ್ಬರು ತಾವು ಬಳಕೆ ಮಾಡುವ ರಾಷ್ಟ್ರಧ್ವಜವನ್ನು ಎಲ್ಲೆಂದರಲ್ಲಿ ಹಾಕದೇ ಅದನ್ನು ಗೌರವಯುತವಾಗಿ ನೋಡಿಕೊಂಡು ಕಾಪಾಡಿಕೊಂಡು ಇರಿಸಬೇಕೆನ್ನುವ ಹಿನ್ನೆಲೆಯಲ್ಲಿ ಜಮಖಂಡಿ ನಗರಸಭೆ ಎರಡು ದಿನ ಮೊದಲೇ ವಿಡಿಯೋವೊಂದನ್ನು ರೂಪಿಸಿ, ಅದರಲ್ಲಿ ಜಮಖಂಡಿ ನಗರಸಭೆ ಪೌರ ಕಾರ್ಮಿಕರು, ಅಧಿಕಾರಿಗಳು, ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಹಾಗೂ ಯೂಟೂಬ್ ಸ್ಟಾರ್ ಗಳೊಂದಿಗೆ ಸೇರಿ ಜನರಲ್ಲಿ ಮನವಿ ಮಾಡಿ, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು. 

ಈ ಮೂಲಕ ಸಾರ್ವಜನಿಕರಲ್ಲಿ ರಾಷ್ಟ್ರಧ್ವಜ ಗೌರವ ಮತ್ತು ಸ್ವಚ್ಚತಾ ಅಭಿಯಾನಕ್ಕೆ ಮನವಿ ಮಾಡಿದ್ದು, ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಮೆಚ್ಚುಗೆಗೆ ಕಾರಣವಾಯಿತು. ಈ ವಿಡಿಯೋದಲ್ಲಿ ಜಮಖಂಡಿ ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ, ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ಯೂಟೂಬ್ ಸ್ಟಾರ್ ಲಿಂಗರಾಜ್ ಮನವಿ ಮಾಡಿದ್ದರು.

ಗೌರವ  ಮತ್ತು ಸ್ವಚ್ಚತಾ ಅಭಿಯಾನಕ್ಕಾಗಿ ಕೈಮುಗಿದು ಮನವಿ ಮಾಡಿದ ನಗರಸಭೆ ಪೌರ ಕಾರ್ಮಿಕರು:
ಇನ್ನು ಜಮಖಂಡಿ ನಗರದಲ್ಲಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಬೇಕೆನ್ನುವ ಹಿನ್ನೆಲೆಯಲ್ಲಿ ರೂಪಿಸಿರೋ ವಿಡಿಯೋದಲ್ಲಿ ಜಮಖಂಡಿ ನಗರಸಭೆ ಪೌರ ಕಾರ್ಮಿಕರು ಜನತೆಯಲ್ಲಿ ಕೈಮುಗಿದು ಮನವಿಯೊಂದನ್ನು ಮಾಡಿದ್ದು, ಅದರಲ್ಲಿ ಪೌರ ಕಾರ್ಮಿಕರು,  ವರ್ಷದ 365 ದಿನವೂ ನಾವು ನಿಮ್ಮ ಓಣಿ ಮತ್ತು ನಗರವನ್ನ ಸ್ವಚ್ಚಗೊಳಿಸಿ ಕೆಲಸ ಮಾಡುತ್ತೇವೆ ಆದರೆ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ನಿಮಿತ್ಯ ಹಮ್ಮಿಕೊಂಡ ಅಭಿಯಾನದಲ್ಲಿ ಪ್ರತಿಯೊಬ್ಬರು ಮನೆ, ಅಂಗಡಿ, ಸಂಘ ಸಂಸ್ಥೆಗಳಲ್ಲಿ ಧ್ವಜ ಹಾರಿಸಿ ದೇಶಾಭಿಮಾನ ಮೆರೆದಿದ್ದೀರಿ, ಆದರೆ ನಂತರದಲ್ಲಿ ಭಾವುಟಗಳನ್ನು ಎಲ್ಲೆಂದರಲ್ಲಿ ಎಸೆದು ಸ್ವಚ್ಚತಾ ಕೆಲಸಕ್ಕೆ ಹಚ್ಚದೇ, ಎಲ್ಲರೂ ಬಾವುಟಗಳನ್ನು ಗೌರವದಿಂದ ಕಾಪಾಡಿ ಎಂದು ಕೈಮುಗಿದು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೂಲಕ ಜ‌ನರಲ್ಲಿ ಜಾಗೃತಿ ಮೂಡಿಸಲು ಸಹಾಯಕವಾಯಿತು.

ದಾವಣಗೆರೆಯ ಬಾಪೂಜಿ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಗೈದ ಉಸ್ತುವಾರಿ ಸಚಿವ ಬೈರತಿ

ಸ್ವಾತಂತ್ರ್ಯೋತ್ಸವ ಮುಗಿದ ಬೆನ್ನಲ್ಲೆ ಧ್ವಜಗಳನ್ನು ಗೌರವದಿಂದ ಕಾಪಾಡುವಂತೆ  ಮನವಿ:
ಇನ್ನು ಜಮಖಂಡಿ ನಗರಸಭೆಯು ನಗರದ ಮನೆ ಮನೆಗಳಿಗೆ ಧ್ವಜಗಳನ್ನ ಹಂಚುವ ಕೆಲಸವನ್ನು ಅತ್ಯಂತ ಸಮರ್ಪಕವಾಗಿ ಮಾಡಿದ್ದು,  ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ದಿನಾಚರಣೆಯ ಬಳಿಕ ಜನರೆಲ್ಲ ತಮಗೆ ನೀಡಿದ ಧ್ವಜಗಳನ್ನು ಗೌರವದಿಂದ ಕಾಪಾಡಿಕೊಳ್ಳುವಂತೆ ಜಮಖಂಡಿ ನಗರಸಭೆಯ ಪೌರಾಯುಕ್ತೆ ಲಕ್ಷ್ಮಿ ಅಷ್ಟಗಿ ಮನವಿ ಮಾಡಿದ್ದು, ಇನ್ನು ರಾಷ್ಟ್ರವೇ  ಹೆಮ್ಮೆ ಪಡುವಂತಹ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅತ್ಯಂತ ಅದ್ದೂರಿಯಾಗಿ ಮಾಡಲು ಇಡೀ ಜಮಖಂಡಿ ನಗರಸಭೆಯ ವ್ಯಾಪ್ತಿಯ ಜನರು ಹೆಮ್ಮೆಯಿಂದ ಕೈಜೋಡಿಸಿ ಮನೆಮನೆಗಳಲ್ಲೂ ತಿರಂಗಾ ಧ್ವಜವನ್ನು ಹಾರಿಸಿ ಅಭಿಮಾನವನ್ನು ಮೆರೆದಿದ್ದು ,ಇದರ ಜೊತೆಜೊತೆಗೆ ಸ್ವಾತಂತ್ರ್ಯೋತ್ಸವದ ನಂತರದಲ್ಲೂ ಸಹ ಸಾರ್ವಜನಿಕರು ಧ್ವಜಗಳನ್ನು ಅತ್ಯಂತ ಗೌರವಿತವಾಗಿ ಕಾಪಾಡಿಕೊಂಡು ಇರಿಸಬೇಕೆಂದು ಜಮಖಂಡಿ ನಗರಸಭೆ ಪೌರಾಯುಕ್ತೆ ಲಕ್ಷ್ಮಿ ಅಷ್ಟಗಿ ಮನವಿ ಮಾಡಿದ್ದ ವಿಡಿಯೋ ಎಫೆಕ್ಟ್ ಆಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಯಿತು.

ಸಚಿವರ ಅನುಪಸ್ಥಿಯತಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ

ಒಟ್ಟಿನಲ್ಲಿ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನದಡಿ ಮನೆ ಮನೆಗಳಲ್ಲಿ ತಿರಂಗಾ ಧ್ವಜ ಹಾರಿಸಲು ಅನೇಕ ವಿಧಧ ಅಭಿಯಾನ ಹಮ್ಮಿಕೊಂಡಿದ್ದರೆ ಇತ್ತ ಜಮಖಂಡಿ ನಗರಸಭೆ ಮಾತ್ರ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಬಳಿಕವೂ ರಾಷ್ಟ್ರಧ್ವಜ ಗೌರವ ಮತ್ತು ಸ್ವಚ್ಚತಾ ಅಭಿಯಾನಕ್ಕೆ ಮುಂದಾಗಿದ್ದು ನಿಜಕ್ಕೂ ಅಭಿನಂದನೀಯ ಸಂಗತಿ.

Follow Us:
Download App:
  • android
  • ios