ಕೊರೋನಾ ಭೀತಿ: ಪೊಲೀಸರಿಗೂ ಮಾಸ್ಕ್, ಬಸವರಾಜ ಬೊಮ್ಮಾಯಿ
ಬೆಂಗಳೂರು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ವಿದೇಶಿ ಪ್ರಯಾಣಿಕರ ಸಂಪೂರ್ಣ ತಪಾಸಣೆ| ಹೊರಗಡೆಯಿಂದ ಬರುವವರ ಬಗ್ಗೆ ನಿಗಾ ವಹಿಸಿದ ಡಿಜಿಪಿ ಹಾಗೂ ಐಜಿಪಿ|
ಬೆಳಗಾವಿ(ಮಾ.16): ಕೊರೋನಾ ವೈರಸ್ ವಿಚಾರವಾಗಿ ಗೃಹ ಇಲಾಖೆಯು ಸಮಗ್ರ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದ್ದು ಸಾರ್ವಜನಿಕ ಪ್ರದೇಶಗಳಲ್ಲಿ ಹೆಚ್ಚು ಕೆಲಸ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಸಾರ್ವಜನಿಕರು ಕೊರೋನಾ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.
ಚಿಕ್ಕಮಗಳೂರಲ್ಲಿ ಇಬ್ಬರ ಪೈಕಿ ಒಬ್ಬರದು ನೆಗಟಿವ್: ಸಿ.ಟಿ.ರವಿ
ಆರೋಗ್ಯ ಹಾಗೂ ವೈದ್ಯಕೀಯ ಇಲಾಖೆ ಸೇರಿ ಎಲ್ಲ ಇಲಾಖೆಯವರು ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆಯವರು ಸಾರ್ವಜನಿಕ ಪ್ರದೇಶದಲ್ಲಿ ಹೆಚ್ಚು ಕೆಲಸ ಮಾಡುತ್ತಾರೆ. ಈಗಾಗಲೇ ಅವರಿಗೂ ಮಾಸ್ಕ್ಗಳನ್ನು ವಿತರಿಸಲಾಗಿದೆ. ಅಗತ್ಯ ಬಿದ್ದರೆ ಎಲ್ಲ ಪೊಲೀಸ್ ಸಿಬ್ಬಂದಿಗೂ ಗೃಹ ಇಲಾಖೆಯಿಂದ ಮಾಸ್ಕ್ ವಿತರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
'ಕೊವಿಡ್ 19ಗೆ ಯಾವುದೇ ಔಷಧಿ ಇಲ್ಲ, ಕೊರೋನಾ ಮಾತ್ರೆ ಎಂದು ಮಾರಿದರೆ ಕ್ರಮ'
ಬೆಂಗಳೂರು ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಬಂದಿರುವ ವಿದೇಶಿ ಪ್ರಯಾಣಿಕರ ಸಂಪೂರ್ಣ ತಪಾಸಣೆ ನಡೆಸಲಾಗುತ್ತಿದೆ. ಡಿಜಿಪಿ ಹಾಗೂ ಐಜಿಪಿಯವರು ಹೊರಗಡೆಯಿಂದ ಬರುವವರ ಬಗ್ಗೆ ನಿಗಾ ವಹಿಸಿದ್ದಾರೆ. ಬೆಂಗಳೂರಿನಿಂದ ಬರುವ ಐಟಿಯವರು ಬಸ್ ಮೂಲಕ ಉತ್ತರ ಕರ್ನಾಟಕಕ್ಕೆ ಬರುತ್ತಿದ್ದಾರೆ. ಅವರನ್ನು ತಪಾಸಣೆ ಮಾಡುವಂತೆ ವರದಿ ನೀಡಿದ್ದಾರೆ. ಅದನ್ನು ಆರೋಗ್ಯ ಇಲಾಖೆಯವರಿಗೆ ಸೂಚಿಸಲಾಗುವುದು ಎಂದರು.