ಉಗ್ರಾತಂಕ: ಈಗ ಸಮುದ್ರದಲ್ಲೂ ರೆಡ್ ಅಲರ್ಟ್
ದೇಶದಲ್ಲಿ ಉಗ್ರರು ನುಸುಳಿರುವ ಮಾಹಿತಿ ಹಿನ್ನೆಲೆ ಕರಾವಳಿ ಕಡಲಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ವಿದೇಶಿ ಅಥವಾ ಸಂಶಯಾಸ್ಪದ ಬೋಟ್ ಸಂಚರಿಸುತ್ತಿದ್ದರೆ ತಿಳಿಸುವಂತೆ ಮೀನುಗಾರರಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ನವಮಂಗಳೂರು ಬಂದರು, ಎಂಆರ್ಪಿಎಲ್, ಆಸ್ಪತ್ರೆ, ಹೊಟೇಲ್ಗಳಲ್ಲಿ ಪೊಲೀಸರು, ಶ್ವಾನದಳ, ಬಾಂಬ್ ಪತ್ತೆದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಮಂಗಳೂರು(ಆ.18): ಮಹಾನಗರಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಭಯೋತ್ಪಾದನಾ ದಾಳಿಗೆ ಹೊಂಚು ಹಾಕಲಾಗುತ್ತಿದೆ ಎಂಬ ಗುಪ್ತಚರ ವರದಿ ಆಧರಿಸಿ ಮಂಗಳೂರು ನಗರದಾದ್ಯಂತ ಪೊಲೀಸರ ಕಟ್ಟೆಚ್ಚರ ಶನಿವಾರವೂ ಮುಂದುವರಿದಿದೆ.
ಇದೇ ವೇಳೆ ಸಮುದ್ರದಲ್ಲೂ ರೆಡ್ ಅಲರ್ಟ್ ಘೋಷಿಸಲಾಗಿದ್ದು, ವಿದೇಶಿ ಅಥವಾ ಸಂಶಯಾಸ್ಪದ ಬೋಟ್ ಸಂಚರಿಸುತ್ತಿದ್ದರೆ ತಿಳಿಸುವಂತೆ ಮೀನುಗಾರರಿಗೆ ಇಲಾಖೆ ಸೂಚನೆ ನೀಡಿದೆ.
ನವಮಂಗಳೂರು ಬಂದರು, ಎಂಆರ್ಪಿಎಲ್, ಎನ್ಐಟಿಕೆ, ಕೆಐಒಸಿಎಲ್, ನಗರ ವಾಣಿಜ್ಯ ಸಮುಚ್ಛಯ, ಆಸ್ಪತ್ರೆ, ಹೊಟೇಲ್ಗಳಲ್ಲಿ ಪೊಲೀಸರು, ಶ್ವಾನದಳ, ಬಾಂಬ್ ಪತ್ತೆದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆಯಕಟ್ಟಿನ ಪ್ರದೇಶಗಳಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. ರಸ್ತೆಗಳಲ್ಲಿ ಸಂಚರಿಸುವ ವಾಹನಗಳ ಮೇಲೂ ತೀವ್ರ ನಿಗಾ ಇರಿಸಲಾಗಿದೆ.
ಉಗ್ರರ ಹಾವಳಿ, ಇಡೀ ಕರ್ನಾಟಕಕ್ಕೆ ಮುನ್ನೆಚ್ಚರಿಕೆ: ಜೋಪಾನ
ಕೇಂದ್ರ ಗುಪ್ತಚರ ವರದಿ ಆಧರಿಸಿ ಎಲ್ಲ ಪೊಲೀಸ್ ಕಮಿಷನರೇಟ್ಗಳ ಆಯುಕ್ತರಿಗೆ ಮತ್ತು ಪ್ರಮುಖ ಜಿಲ್ಲೆಗಳ ಎಸ್ಪಿಗಳಿಗೆ ತುರ್ತು ಸಂದೇಶ ನೀಡಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು, ಕಟ್ಟೆಚ್ಚರ ವಹಿಸುವಂತೆ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಕಟ್ಟೆಚ್ಚರ, ಬಿಗು ಭದ್ರತೆ ಕೈಗೊಳ್ಳಲಾಗಿದೆ.