ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರಿಂದ ಹಲವು  ಪ್ರದೇಶಗಳಲ್ಲಿ ವಾಹನ ಸವಾರರು ಪರದಾಡಿದ್ದಾರೆ. 

ಬೆಂಗಳೂರು [ಸೆ.17]: ಬಿಸಿಲು ಹಾಗೂ ಮೋಡ ಕವಿದ ವಾತಾವರಣವಿದ್ದ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಹಲವೆಡೆ ಭರ್ಜರಿ ಮಳೆಯಾಯಿತು. ಇದರಿಂದ ರಸ್ತೆಗಳಲ್ಲಿ ಮಾರ್ಗ ಮಧ್ಯೆ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡಿದರು.

Add Asianetnews Kannada as a Preferred SourcegooglePreferred

ಬೆಳಗ್ಗೆಯಿಂದ ಕೆಲವು ಕಾಲ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಇತ್ತು. ಸಂಜೆ ವೇಳೆ ತುಂತುರು ಮಳೆ ಆರಂಭವಾಗಿ ರಾತ್ರಿ ಎಂಟರ ಸುಮಾರಿಗೆ ಮಳೆ ಜೋರಾಯಿತು. ಇದರಿಂದ ಉದ್ಯೋಗ ಮುಗಿಸಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಮಳೆಗೆ ಸಿಲುಕಿ ಪರದಾಡಿದರು. ರಸ್ತೆಗಳ ಬದಿಯಲ್ಲಿ ವಾಹನ ನಿಲುಗಡೆ ಮಾಡಿ ಮರ, ಬಸ್‌ ನಿಲ್ದಾಣ, ಕಟ್ಟಡಗಳು, ಅಂಗಡಿ-ಮುಂಗಟ್ಟುಗಳ ಆಶ್ರಯ ಪಡೆದರು. ಮೆಜೆಸ್ಟಿಕ್‌ ಬಸ್‌ ಸುತ್ತಮುತ್ತಲ ಪ್ರದೇಶಗಳ ರಸ್ತೆಗಳಲ್ಲಿ ಕೆಲವು ಕಾಲ ವಾಹನ ಸಂಚಾರ ದಟ್ಟಣೆ ಉಂಟಾಯಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗಾಳಿಯ ಜೊತೆಗೆ ಮಳೆಯಾದ ಪರಿಣಾಮ ನಗರದ ಕೆಲ ರಸ್ತೆಗಳ ಬದಿಯ ಮರದ ಒಣಗಿದ ಸಣ್ಣ ಕೊಂಬೆಗಳು ಮುರಿದು ಬಿದ್ದಿವು. ಓಕಳಿಪುರಂ, ಶಿವಾನಂದ ವೃತ್ತ ಮೊದಲಾದ ತಗ್ಗು ಪ್ರದೇಶಗಳಲ್ಲಿ ಚರಂಡಿಗಳು ಮಳೆ ನೀರು ತುಂಬಿ ಹರಿದವು. ಹೆಗ್ಗನಹಳ್ಳಿ, ಕಾಟನ್‌ಪೇಟೆ, ವಿಶ್ವೇಶ್ವರಂ, ಕೆ.ಜಿ.ಹಳ್ಳಿ, ಪೀಣ್ಯ ಕೈಗಾರಿಕಾ ಪ್ರದೇಶ, ಕೊನೇನ ಅಗ್ರಹಾರ, ಕೆಂಗೇರಿ, ರಾಜಾಜಿನಗರ, ಮಲ್ಲೇಶ್ವರ ಮೊದಲಾದ ಪ್ರದೇಶಗಳಲ್ಲಿ ಮಳೆ ತುಸು ಜೋರಾಗಿತ್ತು. ಕಬ್ಬನ್‌ ಪಾರ್ಕ್, ವಿಧಾನಸೌಧ, ಕೆ.ಜಿ.ರಸ್ತೆ, ವಿಠಲ್‌ ಮಲ್ಯ ರಸ್ತೆ, ರಿಚಮಂಡ್‌ ವೃತ್ತ, ರಾಜಭವನ, ಚಾಲುಕ್ಯ ವೃತ್ತ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಯಿತು. ಉಳಿದಂತೆ ತುಂತುರು ಮಳೆಯಾಯಿತು.