Bengaluru: ಸಮಾನ ವೇತನಕ್ಕಾಗಿ ವೈದ್ಯಕೀಯ ಸಿಬ್ಬಂದಿಯ ಹೋರಾಟ ವಾಪಸ್
ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರು ಗುರುವಾರ ಆರಂಭಿಸಿದ್ದ ಪ್ರತಿಭಟನೆಯನ್ನು ಸಚಿವ ಡಾ.ಸುಧಾಕರ್ ಅವರ ಭರವಸೆ ಮೇರೆಗೆ ಹಿಂಪಡೆದರು.
ಬೆಂಗಳೂರು (ಜು.08): ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರು ಗುರುವಾರ ಆರಂಭಿಸಿದ್ದ ಪ್ರತಿಭಟನೆಯನ್ನು ಸಚಿವ ಡಾ.ಸುಧಾಕರ್ ಅವರ ಭರವಸೆ ಮೇರೆಗೆ ಹಿಂಪಡೆದರು.
ಬುಧವಾರ ಬೆಳಿಗ್ಗೆಯಿಂದ ರಾಜ್ಯದ ನಾನಾ ಭಾಗಗಳಿಂದ ಎರಡೂ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ಶುಶ್ರೂಷಕರು ಸೇರಿ ಸಾವಿರಾರು ಮಂದಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು. ನೌಕರರ ಕಾರ್ಯವೈಖರಿ ಕುರಿತು ಇಲಾಖೆ ನಡೆಸುತ್ತಿರುವ ಮೌಲ್ಯಮಾಪನ ಆದೇಶ ಹಿಂಪಡೆಯಬೇಕು ಜತೆಗೆ ಗುತ್ತಿಗೆ ನೌಕರರ ವೇತನ ಹೆಚ್ಚಳ ಮತ್ತು ವಿವಿಧ ಸೌಲಭ್ಯ ನೀಡುವ ನಿಟ್ಟಿನಲ್ಲಿ ಶ್ರೀನಿವಾಸಾಚಾರಿ ವರದಿಯನ್ನು ಯಥಾವತ್ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದ ಕುಮ್ಮಕ್ಕಿನಿಂದಲೇ ಪಿಎಸ್ಐ ನೇಮಕಾತಿ ಹಗರಣ: ನ್ಯಾಯಾಂಗ ತನಿಖೆಗೆ ‘ಕೈ’ ಹೋರಾಟ
ಮಧ್ಯಾಹ್ನ ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಖುದ್ದು ಆಗಮಿಸಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರತಿಭಟನಾನಿರತ ನೌಕರರನ್ನು ಉದ್ದೇಶಿಸಿ ಮಾತನಾಡಿದರು. ‘ಗುತ್ತಿಗೆ-ಹೊರಗುತ್ತಿಗೆ ನೌಕರರ ವೇತನ ಹೆಚ್ಚಳಕ್ಕೆ ಪ್ರಯತ್ನಿಸುತ್ತಿದ್ದು, ಆರೋಗ್ಯ ವಿಮೆ ವಿಸ್ತರಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಸಾಧ್ಯವಿರುವ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲಿದೆ. ದೇಶದಲ್ಲೇ ಆರೋಗ್ಯ ಸೇವೆ ನೀಡುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಅದಕ್ಕೆ ಪೂರಕವಾಗಿ ಕೆಲಸ ನಡೆಯಬೇಕು. ನೌಕರರು ಮುಷ್ಕರ ಕೈ ಬಿಟ್ಟು ಶೀಘ್ರದಲ್ಲೇ ಸೇವೆಗೆ ಹಿಂದಿರುಗಬೇಕು’ ಎಂದು ಸಚಿವರು ಮನವಿ ಮಾಡಿದರು. ಬಳಿಕ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ಮುಖಂಡರು ಸಭೆ ನಡೆಸಿ ಸಂಜೆ ವೇಳೆಗೆ ಪ್ರತಿಭಟನೆ ಹಿಂಪಡೆದರು.
ಬಾಗಲಕೋಟೆಯಲ್ಲಿ ಯೆಲ್ಲೋ ಬೋರ್ಡ್ ವರ್ಸಸ್ ವೈಟ್ ಬೋರ್ಡ್ ಕಾರು ಚಾಲಕರ ಹೋರಾಟ
ಐದು ದಿನಗಳ ಗಡುವು: ಪ್ರತಿಭಟನೆ ಹಿಂಪಡೆಯುವ ಕುರಿತು ಪ್ರತಿಕ್ರಿಯೆ ನೀಡಿರುವ ಸಂಘದ ರಾಜ್ಯಾಧ್ಯಕ್ಷ ಎಚ್.ವೈ. ವಿಶ್ವರಾಧ್ಯ,‘ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಐದು ದಿನಗಳ ಗಡುವು ನೀಡಲಾಗಿದ್ದು, ಅಷ್ಟರಲ್ಲಿ ಬೇಡಿಕೆ ಈಡೇರಿಕೆ ಕುರಿತು ಆದೇಶ ಹೊರಡಿಸಬೇಕು. ಸರ್ಕಾರ ಮಾತು ತಪ್ಪಿದಲ್ಲಿ ಜುಲೈ 15ರಿಂದ ಸೇವೆ ಬಹಿಷ್ಕರಿಸಿ ಅನಿರ್ದಿಷ್ಟ ಕಾಲ ಪ್ರತಿಭಟನೆ ಮುಂದುವರೆಸುವುದು’ ಎಂದು ತಿಳಿಸಿದರು.