Asianet Suvarna News Asianet Suvarna News

ಡಾ.ಜಿ.ಪರಮೇಶ್ವರ್‌ಗೆ ಹಾಡಿ ಹೊಗಳಿದ ಆರೋಗ್ಯ ಸಚಿವ ಸುಧಾಕರ್

 ಡಾ.ಜಿ.ಪರಮೇಶ್ವರ ಕರ್ನಾಟಕದ ಮುತ್ಸದ್ದಿ ನಾಯಕರ ರಾಜಕೀಯ ಜೀವನವೇ ನನ್ನ ಕೆಲಸಕ್ಕೆ ಪ್ರಮುಖ ಆದರ್ಶ. 2023ಕ್ಕೆ ಕೊರಟಗೆರೆ ಕ್ಷೇತ್ರದ ಆರೋಗ್ಯ ವಿಭಾಗಕ್ಕೆ ವಿಶೇಷ ಅನುದಾನ ನೀಡುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು.

Health Minister Sudhakar praises Dr  G  Parameshwar snr
Author
First Published Dec 25, 2022, 6:07 AM IST

 ಹೊಳವನಹಳ್ಳಿ (ಡಿ.25): ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ 1993ರಲ್ಲಿ ನನಗೇ ವೈದ್ಯಕೀಯ ಸೀಟ್‌ ನೀಡಿ ಶಿಕ್ಷಣಕ್ಕೆ ಸಹಾಯಹಸ್ತ ನೀಡಿದ್ರು. 2013ರಲ್ಲಿ ನಾನು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕನಾಗಲು ಪ್ರಮುಖ ಕಾರಣವೇ ಡಾ.ಜಿ.ಪರಮೇಶ್ವರ. ಕರ್ನಾಟಕದ ಮುತ್ಸದ್ದಿ ನಾಯಕರ ರಾಜಕೀಯ ಜೀವನವೇ ನನ್ನ ಕೆಲಸಕ್ಕೆ ಪ್ರಮುಖ ಆದರ್ಶ. 2023ಕ್ಕೆ ಕೊರಟಗೆರೆ ಕ್ಷೇತ್ರದ ಆರೋಗ್ಯ ವಿಭಾಗಕ್ಕೆ ವಿಶೇಷ ಅನುದಾನ ನೀಡುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು.

ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆ, ಬುಕ್ಕಾಪಟ್ಟಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶನಿವಾರ ಏರ್ಪಡಿಸಲಾಗಿದ್ದ 5 ಕೋಟಿ ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ನೂತನ ಕಟ್ಟಡದ ಉದ್ಘಾಟನೆ ಹಾಗೂ 12.50 ಕೋಟಿ ವೆಚ್ಚದ ತೋವಿನಕೆರೆ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದ ಶಂಕುಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ ಋುಣ ತಿರಿಸುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಎಲ್ಲರನ್ನ ಪ್ರೀತಿಸುವ ಜನನಾಯಕ ಅಂದ್ರೇ ಪರಮೇಶ್ವರ್‌ ಸಾಹೇಬ್ರು. 2013ರ ಡಾ.ಜಿ.ಪರಮೇಶ್ವರ ಸೋಲು ದುರಾದುಷ್ಟಕರ. ಅದಕ್ಕಾಗಿ ಅವರಿಗೆ ಉನ್ನತ ಹುದ್ದೆಯು ಕೈತಪ್ಪಿತು. ನಾನು ಇವರ ಪರವಾಗಿ ಪ್ರಚಾರ ಮಾಡಿದ್ದೇನೆ. ಆ ವಿಚಾರಕ್ಕೆ ನನಗೂ ತುಂಬಾ ನೋವಿದೆ. ನನ್ನ ಬದುಕಿನಲ್ಲಿ ವಿಶೇಷ ಪಾತ್ರ ವಹಿಸಿದ ನಾಯಕ ಡಾ.ಜಿ.ಪರಮೇಶ್ವರಿಗೆ ಮುಂದಿನ ದಿನಗಳಲ್ಲಿ ಶುಭವಾಗಲಿ ಎಂದು ತಿಳಿಸಿದರು.

ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ್‌ ಮಾತನಾಡಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮತ್ತು ನನ್ನ ನಡುವೆ ತಂದೆ-ಮಗನ ಸಂಬಂಧವಿದೆ. ಅವರ ಅಭಿಮಾನಕ್ಕೆ ನಾನು ಅಭಾರಿ ಆಗಿದ್ದೇನೆ. ಆರೋಗ್ಯ ಸೇವೆಯಲ್ಲಿ ಸುಧಾಕರ್‌ ಜನರು ಮೆಚ್ಚುವಂತ ಕೆಲಸ ಮಾಡಿದ್ದಾರೆ. ಕೊರೊನಾ ನಿರ್ವಹಣೆಯ ಜವಾಬ್ದಾರಿಯಲ್ಲಿ ಯಶಸ್ಸು ಕಂಡಿದ್ದಾರೆ. ಕೊರಟಗೆರೆಗೆ ಸಾರ್ವಜನಿಕ ಆಸ್ಪತ್ರೆ, ವೈದ್ಯಕೀಯ ತಂಡ ಮತ್ತು ಸಿಬ್ಬಂದಿಗಳ ಕೊಟ್ರೇ ನೀವೇ ನನ್ನ ಕ್ಷೇತ್ರದ ನಿಜವಾದ ದೇವ್ರು ಎಂದು ತಿಳಿಸಿದರು.

ಮಾಜಿ ಸಚಿವ ಸಿ.ವೀರಣ್ಣ ಮಾತನಾಡಿ, ಬುಕ್ಕಾಪಟ್ಟಣ ಬಡಜನರ ಬಹುದಿನದ ಆಸ್ಪತ್ರೆಯ ಬೇಡಿಕೆಯು ಈಗ ನನಸಾಗಿದೆ. ವೈದ್ಯಕೀಯ ಸೇವೆಗೆ ಮತ್ತೊಂದು ಹೆಸರೇ ಡಾ.ಜಿ.ಪರಮೇಶ್ವರ್‌. ಬಿಜೆಪಿ ಪಕ್ಷದ ಆರೋಗ್ಯ ಸಚಿವರೇ ಪರಮೇಶ್ವರ್‌ರನ್ನ ಮೆಚ್ಚಿ ಹಾಡಿ ಹೋಗಳಿರುವುದೇ ಪ್ರಮುಖ ಸಾಕ್ಷಿ ಅಲ್ಲವೇ. 2023ಕ್ಕೆ ಮತ್ತೇ ಕೊರಟಗೆರೆ ಕ್ಷೇತ್ರದಿಂದ ಪರಮೇಶ್ವರ್‌ಗೆ ಪೂರ್ಣ ಬೆಂಬಲ ಇರಲಿ ಎಂದು ಹಾರೈಸುವೆ ಎಂದರು.

ಸಮಾರಂಭದಲ್ಲಿ ಮಾಜಿ ಸಚಿವ ಸಿ.ವೀರಣ್ಣ, ಡಿಹೆಚ್‌ಓ ಡಾ.ಮಂಜುನಾಥ, ಟಿಹೆಚ್‌ಓ ವಿಜಯಕುಮಾರ್‌, ತಹಶೀಲ್ದಾರ್‌ ನಾಹೀದಾ, ಸ್ವಾತಂತ್ರ ಹೋರಾಟಗಾರ ಕೆ.ಸಿ.ನಾರಾಯಣಪ್ಪ, ಗ್ರಾಪಂ ಅಧ್ಯಕ್ಷ ಶಿವರಾಮು, ರಾಮಯ್ಯ, ಮುಖಂಡರಾದ ಅರಕೆರೆಶಂಕರ್‌, ಅನಿಲ್‌ಕುಮಾರ್‌, ಸುಜಯ್‌.ಪಿ.ಮಂಜುನಾಥ, ವಿನಯ್‌ಕುಮಾರ್‌ ಸೇರಿದಂತೆ ಇತರರು ಇದ್ದರು.

ಪರಮೇಶ್ವರ್‌ ಕಾಲಿಗೆ ನಮಿಸಿದ ಆರೋಗ್ಯ ಸಚಿವ

ಸಮಾರಂಭದ ಉದ್ಘಾಟನೆಗೆ ಆಗಮಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಕಾಲಿಗೆ ನಮಸ್ಕರಿಸಿ ಆರ್ಶಿವಾದ ಪಡೆದರು. ದೊಡ್ಡಸಾಗ್ಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಉದ್ಘಾಟನೆಯ ವೇಳೆ ಕಾಂಗ್ರೆಸ್‌ ಕಾರ್ಯಕರ್ತರು ಡಾ.ಜಿ.ಪರಮೇಶ್ವರ್‌ ಮತ್ತು ಜೈ ಹನುಮಾನ್‌ ಪರವಾಗಿ ಜೈಕಾರ ಕೊಗಿದರೇ ಬಿಜೆಪಿ ಕಾರ್ಯಕರ್ತರು ನರೇಂದ್ರಮೋದಿ ಮತ್ತು ಜೈಶ್ರೀರಾಮ್‌ ಪರವಾಗಿ ಘೋಷಣೆ ಕೊಗಿದರು.

100ಬೆಡ್‌ಗಳ ಸರಕಾರಿ ಆಸ್ಪತ್ರೆಯ ಆಶ್ವಾಸನೆ

ಕೊರಟಗೆರೆ ಪಟ್ಟಣದಲ್ಲಿ 100ಬೆಡ್‌ಗಳ ಸರಕಾರಿ ಆಸ್ಪತ್ರೆ, ಕೋಳಾಲ ಆಸ್ಪತ್ರೆಯು ಮೇಲ್ದರ್ಜೆಗೆ ಏರಿಕೆ, ವೈದ್ಯಕೀಯ ತಂಡ ಮತ್ತು ಸಿಬ್ಬಂದಿಗಳ ನೇಮಕ ಸೇರಿದಂತೆ ಕೊರಟಗೆರೆ ಕ್ಷೇತ್ರಕ್ಕೆ ಅವಶ್ಯಕತೆ ಇರುವಂತಹ ಆರೋಗ್ಯ ಸೇವೆಯನ್ನು ತ್ವರಿತವಾಗಿ ನೀಡುತ್ತೇನೆ. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಕೇಳಿದ ಎಲ್ಲಾ ಬೇಡಿಕೆಯನ್ನು ತ್ವರಿತವಾಗಿ ಪೂರೈಸುತ್ತೇನೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು.

ಭಾರತ ದೇಶದಲ್ಲಿ 700ಜನರಿಗೆ ಒಬ್ಬ ವೈದ್ಯರು ಇದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟುವಿಶೇಷ ಬದಲಾವಣೆ ಅಗತ್ಯ. ಆರೋಗ್ಯ ಕ್ಷೇತ್ರದ ಬಗ್ಗೆ ಡಾ.ಕೆ.ಸುಧಾಕರ್‌ಗೆ ವಿಶೇಷ ಕಾಳಜಿ ಇದೆ. ಕೊರಟಗೆರೆ ಕ್ಷೇತ್ರದ ಆರೋಗ್ಯ ಕ್ಷೇತ್ರಕ್ಕೆ ಆರೋಗ್ಯ ಸಚಿವರು ವಿಶೇಷ ಅನುದಾನ ನೀಡಬೇಕಿದೆ. ವೈದ್ಯಕೀಯ ತಂಡ ಮತ್ತು ಸಿಬ್ಬಂದಿಗಳ ಕೊರತೆ ಪೂರೈಸಿದರೇ ಕೊರಟಗೆರೆ ಕ್ಷೇತ್ರದ ಜನತೆ ನಿಮ್ಮನ್ನು ದೇವರಂತೆ ಪೂಜಿಸ್ತಾರೆ.

- ಡಾ.ಜಿ.ಪರಮೇಶ್ವರ್‌, ಮಾಜಿ ಡಿಸಿಎಂ. ಕೊರಟಗೆರೆ

Follow Us:
Download App:
  • android
  • ios