ರಾಣಿಬೆನ್ನೂರು ತಾಲೂಕು ಆಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆದುಕೊಂಡಿದ್ದ ಮೃತ ವ್ಯಕ್ತಿ| ಮೃತ ವ್ಯಕ್ತಿಯ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ರವಾನೆ, ವರದಿ ಬರುವ ಮುನ್ನವೇ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಿದ್ದು ಏಕೆ ಎಂಬ ಸಾರ್ವಜನಿಕರ ಪ್ರಶ್ನೆ| ಕೆಲಕಾಲ ಆತಂಕ, ಸಾರ್ವಜನಿಕರಿಂದ ಆಕ್ರೋಶ|

ರಾಣಿಬೆನ್ನೂರು(ಜು. 06): ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ತಾಲೂಕಾಸ್ಪತ್ರೆಯ ಸಿಬ್ಬಂದಿ ಬಸ್‌ ತಂಗುದಾಣದಲ್ಲಿಯೇ ಬಿಟ್ಟು ಹೋದ ಬೇಜವಾಬ್ದಾರಿ ಘಟನೆ ನಗರದ ತಾಲೂಕಾಸ್ಪತ್ರೆಯ ಮುಂಭಾಗದಲ್ಲಿ ಶನಿವಾರ ಸಂಭವಿಸಿದ್ದು ಸಾರ್ವಜನಿಕರ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿಯ ಮಾರುತಿ ನಗರದ ನಿವಾಸಿ ಚಂದ್ರಶೇಖರ ಎಂ.(45) ಎಂಬವರು ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ತಾಲೂಕು ಆಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವ್ಯಕ್ತಿಯ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಚಂದ್ರಶೇಖರ್‌ ಮೃತಪಟ್ಟಿದ್ದು ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿದ್ದ ಅವರ ಶವ ಪಕ್ಕದಲ್ಲೇ ಇರುವ ಬಸ್‌ ತಂಗುದಾಣದಲ್ಲಿ ಕಂಡು ಬಂದಿದೆ.

ಕೊರೋನಾ ಬಂದ್ರೂ ಹೆಂಡ್ತಿ ಬಿಟ್ಟಿರದ ಪತಿರಾಯ: ನಿನ್ನ ಬಿಟ್ಟು ಇರಲಾರೆ ಎಂದು ಹಠ ಹಿಡಿದ ಗಂಡ..!

ಈ ಬಗ್ಗೆ ವೈದ್ಯರನ್ನು ಕೇಳಿದರೆ ಶವದ ಮರಣೋತ್ತರ ಪರೀಕ್ಷೆ ನಡೆಸಿ ಮೃತನ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ ಎನ್ನುತ್ತಾರೆ ವೈದ್ಯರು. ಆದರೆ, ವರದಿ ಬರುವ ಮುನ್ನವೇ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಿದ್ದು ಏಕೆ ಎಂಬ ಪ್ರಶ್ನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಉತ್ತರಿಸುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ನಿಯಮದ ಪ್ರಕಾರ ಶವವನ್ನು ಪಿಪಿಐ ಕಿಟ್‌ ಹಾಕಿ ಅಂತ್ಯಸಂಸ್ಕಾರ ನಡೆಸಬೇಕಿತ್ತು. ಆದರೆ ಬಸ್‌ ತಂಗುದಾಣದಲ್ಲಿ ಶವ ಇಟ್ಟಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ತಾಲೂಕು ವೈದ್ಯಾಧಿಕಾರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ ಎಂದು ಹಾವೇರಿ ಡಿಎಚ್‌ಒ ಡಾ.ರಾಜೇಂದ್ರ ದೊಡ್ಮನಿ ಅವರು ಹೇಳಿದ್ದಾರೆ.