ರಾಣಿಬೆನ್ನೂರು ತಾಲೂಕು ಆಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆದುಕೊಂಡಿದ್ದ ಮೃತ ವ್ಯಕ್ತಿ| ಮೃತ ವ್ಯಕ್ತಿಯ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ರವಾನೆ, ವರದಿ ಬರುವ ಮುನ್ನವೇ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಿದ್ದು ಏಕೆ ಎಂಬ ಸಾರ್ವಜನಿಕರ ಪ್ರಶ್ನೆ| ಕೆಲಕಾಲ ಆತಂಕ, ಸಾರ್ವಜನಿಕರಿಂದ ಆಕ್ರೋಶ|

ರಾಣಿಬೆನ್ನೂರು(ಜು. 06): ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ತಾಲೂಕಾಸ್ಪತ್ರೆಯ ಸಿಬ್ಬಂದಿ ಬಸ್‌ ತಂಗುದಾಣದಲ್ಲಿಯೇ ಬಿಟ್ಟು ಹೋದ ಬೇಜವಾಬ್ದಾರಿ ಘಟನೆ ನಗರದ ತಾಲೂಕಾಸ್ಪತ್ರೆಯ ಮುಂಭಾಗದಲ್ಲಿ ಶನಿವಾರ ಸಂಭವಿಸಿದ್ದು ಸಾರ್ವಜನಿಕರ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Add Asianetnews Kannada as a Preferred SourcegooglePreferred

ಇಲ್ಲಿಯ ಮಾರುತಿ ನಗರದ ನಿವಾಸಿ ಚಂದ್ರಶೇಖರ ಎಂ.(45) ಎಂಬವರು ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರಿಂದ ತಾಲೂಕು ಆಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆದುಕೊಂಡಿದ್ದರು. ಈ ವ್ಯಕ್ತಿಯ ಗಂಟಲು ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಚಂದ್ರಶೇಖರ್‌ ಮೃತಪಟ್ಟಿದ್ದು ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿದ್ದ ಅವರ ಶವ ಪಕ್ಕದಲ್ಲೇ ಇರುವ ಬಸ್‌ ತಂಗುದಾಣದಲ್ಲಿ ಕಂಡು ಬಂದಿದೆ.

ಕೊರೋನಾ ಬಂದ್ರೂ ಹೆಂಡ್ತಿ ಬಿಟ್ಟಿರದ ಪತಿರಾಯ: ನಿನ್ನ ಬಿಟ್ಟು ಇರಲಾರೆ ಎಂದು ಹಠ ಹಿಡಿದ ಗಂಡ..!

ಈ ಬಗ್ಗೆ ವೈದ್ಯರನ್ನು ಕೇಳಿದರೆ ಶವದ ಮರಣೋತ್ತರ ಪರೀಕ್ಷೆ ನಡೆಸಿ ಮೃತನ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ ಎನ್ನುತ್ತಾರೆ ವೈದ್ಯರು. ಆದರೆ, ವರದಿ ಬರುವ ಮುನ್ನವೇ ಕುಟುಂಬಕ್ಕೆ ಮೃತದೇಹ ಹಸ್ತಾಂತರಿಸಿದ್ದು ಏಕೆ ಎಂಬ ಪ್ರಶ್ನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಉತ್ತರಿಸುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ನಿಯಮದ ಪ್ರಕಾರ ಶವವನ್ನು ಪಿಪಿಐ ಕಿಟ್‌ ಹಾಕಿ ಅಂತ್ಯಸಂಸ್ಕಾರ ನಡೆಸಬೇಕಿತ್ತು. ಆದರೆ ಬಸ್‌ ತಂಗುದಾಣದಲ್ಲಿ ಶವ ಇಟ್ಟಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ತಾಲೂಕು ವೈದ್ಯಾಧಿಕಾರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ ಎಂದು ಹಾವೇರಿ ಡಿಎಚ್‌ಒ ಡಾ.ರಾಜೇಂದ್ರ ದೊಡ್ಮನಿ ಅವರು ಹೇಳಿದ್ದಾರೆ.