ಜೆಡಿಎಸ್ನವರಿಂದ ಬ್ಲಾಕ್ಮೇಲ್ : ಹಾಸನ ಜಿ.ಪಂ.ಅಧ್ಯಕ್ಷೆ
ಹಾಸನ ಪಂಚಾಯತ್ ಅಧ್ಯಕ್ಷೆ ಜೆಡಿಎಸ್ ಮುಖಂಡರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬ್ಲಾಕ್ ಮೇಲ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಹಾಸನ (ಸೆ.06): ವಿಶೇಷ ಸಭೆಗೂ ಮತ್ತು ಸಾಮಾನ್ಯ ಸಭೆಗೂ ಯಾವ ವ್ಯತ್ಯಾಸವಿರುವುದಿಲ್ಲ. ಆದರೆ, ಜೆಡಿಎಸ್ ಸದಸ್ಯರು ಸಭೆಗಳಿಗೆ ಗೈರಾಗುವ ಮೂಲಕ ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜು ಆರೋಪಿಸಿದರು.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶನಿವಾರ ನಡೆಯಬೇಕಾದ ವಿಶೇಷ ಸಭೆ ಕೋರಂ ಕೊರತೆಯಿಂದ ಸಭೆ ಮುಂದೂಡಲಾಗಿದೆ. ಜಿ.ಪಂನ ಜೆಡಿಎಸ್ ಸದಸ್ಯರಾದ 22 ಜನರು ಕೂಡ ಸಹಿ ಮಾಡಿ ಸಭೆ ಕರೆಯುವಂತೆ ಮನವಿ ಕೊಟ್ಟಿದ್ದರು. ಆದರೆ, ಅವರೇ ಸಭೆಗೆ ಹಾಜರಾಗಿಲ್ಲ. ಸಾಮಾನ್ಯ ಸಭೆ ಕರೆಯುವಂತೆ ಮತ್ತೊಂದು ಲೆಟರ್ ನೀಡಿದ್ದಾರೆ. ಸಾಮಾನ್ಯ ಸಭೆಗೂ ಮತ್ತು ವಿಶೇಷ ಸಭೆಗೂ ಯಾವ ವ್ಯತ್ಯಾಸವಿರುವುದಿಲ್ಲ. ಇದೊಂದು ಬ್ಲ್ಯಾಕ್ಮೇಲ್ ತಂತ್ರವಾಗಿದೆ ಎಂದರು.
ಕರ್ನಾಟಕದ ರಾಜಕಾರಣ ಬಿಸಿ ಏರಲು ಕಾರಣವಾದ ಸುದ್ದಿ ದೆಹಲಿಯಿಂದ ಬಂತು!
ಅಧ್ಯಕ್ಷರ ವಿವೇಚನಾ ನಿಧಿಗೆ 1 ಕೋಟಿ ರು. ಹಣ ಬಂದಿರುವುದು ನಿಜ. ಅದನ್ನು ಹಂಚಿಕೆ ಮಾಡುವುದು ನಮ್ಮ ಜವಾಬ್ದಾರಿ. ಅರಕಲಗೂಡಿಗೆ 12 ಲಕ್ಷ ರು. ಅರಸೀಕೆರೆಗೆ 38 ಲಕ್ಷ ರು., ಆಲೂರು 4 ಲಕ್ಷ, ಚನ್ನರಾಯಪಟ್ಟಣ 22, ಬೇಲೂರು 5 ಲಕ್ಷ ರೂ, ಸಕಲೇಶಪುರ 3 ಲಕ್ಷ ರೂ, ಹಾಸನ 12 ಲಕ್ಷ ರೂ, ಹೊಳೆನರಸೀಪುರ 4 ಲಕ್ಷ ರೂ. ಹಂಚಿಕೆ ಮಾಡಲಾಗಿದೆ. ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಕ್ಕೂ ಜೆಡಿಎಸ್ ಇರುವ ಜಿ.ಪಂ ಸದಸ್ಯರ ಭಾಗಕ್ಕೂ ಅನುದಾನ ಕೊಡಲಾಗಿದ್ದರೂ ಸುಮ್ಮನೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಹೀಗಾದರೆ ಹೇಗೆ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದರು.