* ಹೋರಾಟದಲ್ಲಿಯೇ ರೈತ ಹೋರಾಟಗಾರ ನಿಧನ* ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ನಿಧನ* ಹೋರಾಟದ ಸಮಯದಲ್ಲಿಯೇ ಪ್ರಾಣಬಿಟ್ಟ ಕಲ್ಯಾಣರಾವ್ ಗುರಬಸಪ್ಪ

ಬೆಳಗಾವಿ, (ಅ.06): ರೈತ ಚಳವಳಿಗಳಿಗಳ ಮುಂಚೂಣಿ ನಾಯಕ, ಹಸಿರು ಕ್ರಾಂತಿ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಕಲ್ಯಾಣರಾವ್ ಗುರಬಸಪ್ಪ ಮುಚಳಂಬಿಯವರು ಇಂದು (ಅ.6) ನಿಧನರಾಗಿದ್ದಾರೆ. 

Add Asianetnews Kannada as a Preferred SourcegooglePreferred

ಬೆಳಗಾವಿ ಜಿಲ್ಲೆ ಗೋಕಾಕದಲ್ಲಿ ನಡೆಯುತ್ತಿದ್ದ ಹೋರಾಟದ ಸಮಯದಲ್ಲಿಯೇ ಕಲ್ಯಾಣರಾವ್ ಗುರಬಸಪ್ಪ ಅಸುನೀಗಿರುವುದು ಕೊನೆಯುಸಿರೆಳೆದಿದ್ದಾರೆ.

ಜನ್ಮತಃ ಹೋರಾಟದ ಮನೋಭಾವದ ಕಲ್ಯಾಣರಾವ್ ಮುಚಳಂಬಿಯವರು ಇಂದು (ಬುಧವಾರ) ಮುಂಜಾನೆ ಸಾವಳಗಿ ಬಳಿ ಹೋರಾಟದ ಅಂಗವಾಗಿ ಪಾದಯಾತ್ರೆಯೊಂದರಲ್ಲಿ‌ ಪಾಲ್ಗೊಂಡಿದ್ದರು. ಈ ವೇಳೆ ಅವರು ಸಾವನ್ನಪ್ಪಿದ್ದಾರೆ.

ರಾಜ್ಯದ ರೈತ ಹೋರಾಟದಲ್ಲೇ ತಮ್ಮ ಜೀವನದ ಬಹುತೇಕ ಸಮಯ ಕಳೆದ ಮುಚಳಂಬಿ ಅವರು, ಪ್ರೋ ನಂಜುಡಸ್ವಾಮಿ, ಬಾಬಾಗೌಡ ಪಾಟೀಲ್, ಪುಟ್ಟಣ್ಣಯ್ಯ ಸೇರಿದಂತೆ ರೈತ ಹೋರಾಟಗಾರರಿಗೆ ಸಾಥ್ ನೀಡಿದ್ದರು.

ರೈತರ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆರೋಗ್ಯ ಲೆಕ್ಕಿಸದೇ ಗಡಿ ಜಿಲ್ಲೆಗಳಲ್ಲಿ ರೈತ ಹೋರಾಟ ಸಂಘಟನೆ ಮಾಡಿದ ಕೀರ್ತಿ ಮುಚಳಂಬಿ ಅವರಿಗೆ ಸಲ್ಲುತ್ತದೆ.

ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಸೇರಿದಂತೆ ಹಲವು ನಾಯಕರಿಗೆ ಕೃಷಿ ಸಂಕಷ್ಟಗಳ ಬಗ್ಗೆ ಲೇಖನಗಳ ಮೂಲಕ ಗಮನಸೆಳೆದ ಹಿರಿಮೆ‌ ಮುಚಳಂಬಿ ಅವರದ್ದು.

ರೈತ ಹೋರಾಟಗಳ ಜೊತೆಗೆ ಮಠ ಮಾನ್ಯಗಳೊಂದಿಗೆ, ಮಠಾಧೀಶರೊಂದಿಗೆ, ಜನಪರ ಸಂಘಟನೆಗಳ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಕಲ್ಯಾಣರಾವ್ ಮುಚಳಂಬಿ ಅವರ ನಿಧನಕ್ಕೆ ರಾಜ್ಯದ ವಿವಿಧೆಡೆಯ ರೈತ, ಜನಪರ ಸಂಘಟನೆಗಳ ಪ್ರಮುಖರು, ಮಠಾಧೀಶರು , ರಾಜಕೀಯ ಧುರೀಣರು , ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.