ಪುರಸಭೆ ಮುಖ್ಯಾಧಿಕಾರಿಗಳ ಆದೇಶದ ಮೇರೆಗೆ ರಾಕ್ಷಸರಂತೆ ಬೀದಿ ನಾಯಿಗಳನ್ನು ಎಳೆದೊಯ್ದು ಹಳಿಯಾಳದ ಕಾಡಿನಲ್ಲಿ ಬಿಟ್ಟ ಪುರಸಭೆಯ ಸಿಬ್ಬಂದಿ

ಉತ್ತರಕನ್ನಡ(ಸೆ.25): ಟಾಟಾ ಏಸ್ ಗಾಡಿಯಲ್ಲಿ ಸುಮಾರು 80-90 ಬೀದಿ ನಾಯಿಗಳನ್ನು ಕೊಂಡೊಯ್ದು ಕಾಡಿಗೆ ಬಿಡುವ ಮೂಲಕ ಉತ್ತರಕನ್ನಡ ಜಿಲ್ಲೆಯ ಹಳಿಯಾಳ ಪುರಸಭೆ ಅಮಾನವೀಯ ಕೃತ್ಯ ಎಸಗಿದ ಘಟನೆ ನಡೆದಿದೆ. ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿ ನೀರು, ಆಹಾರ ಹಾಗೂ ಆಶ್ರಯ ಒದಗಿಸಬೇಕಿತ್ತು. ಆದರೆ, ಪುರಸಭೆ ಮುಖ್ಯಾಧಿಕಾರಿಗಳ ಆದೇಶದ ಮೇರೆಗೆ ರಾಕ್ಷಸರಂತೆ ಬೀದಿ ನಾಯಿಗಳನ್ನು ಎಳೆದೊಯ್ದು ಹಳಿಯಾಳದ ಕಾಡಿನಲ್ಲಿ ಪುರಸಭೆಯ ಸಿಬ್ಬಂದಿ ಬಿಟ್ಟಿದ್ದಾರೆ. ಈ ಮೂಲಕ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳೇ Prevention of Cruelty To Animal Act-1960 ಕಾನೂನನ್ನು ಉಲ್ಲಂಘನೆ ಮಾಡಿದ್ದಾರೆ.‌ 

Add Asianetnews Kannada as a Preferred SourcegooglePreferred

ಕಾಡಿನಲ್ಲಿ ಬಿಟ್ಟಾಗಲೂ ಅಲ್ಲಿಯೂ ನೀರು, ಆಹಾರ ಒದಗಿಸದೇ ಕಾಡು ಪ್ರಾಣಿಗಳಿಗೆ ಆಹಾರವಾಗಲು ದಟ್ಟ ಕಾಡಿನಲ್ಲಿ ನಾಯಿಗಳನ್ನು ಬಿಟ್ಟಿದ್ದಾರೆ. ಕಾಡಿನಲ್ಲಿ ಬಿಟ್ಟ ನಾಯಿಗಳಿಗೆ ಯಾವುದೇ ಸೋಂಕುಗಳಿದ್ರೂ ಅದು ಕಾಡು ಪ್ರಾಣಿಗಳಿಗೆ ಹಬ್ಬುವ ಸಾಧ್ಯತೆಗಳಿರೋದ್ರಿಂದ ಕಾಡುಪ್ರಾಣಿಗಳ ಸಾವಿಗೂ ಪುರಸಭೆ ಅಧಿಕಾರಿಗಳು ಕಾರಣವಾಗಲಿದ್ದಾರೆ.

ರೈತರಿಂದ ಸಹಕಾರಿ ಕ್ಷೇತ್ರ ಸದೃಢ; ಸಚಿವ ಶಿವರಾಮ್ ಹೆಬ್ಬಾರ್

ಸಿಬ್ಬಂದಿಯ ಈ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಹಳಿಯಾಳದ ಸ್ಥಳೀಯರು ನೀಡಿದ ದೂರಿನ‌ ಹಿನ್ನೆಲೆ ಪಶು ವೈದ್ಯಕೀಯ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಹಳಿಯಾದ ಪುರಸಭೆ‌ಯ ಮುಖ್ಯಾಧಿಕಾರಿಗೆ ನೋಟೀಸ್ ನೀಡಿದ್ದಾರೆ. ಕಾನೂನು ಉಲ್ಲಂಘನೆ ನಡೆಸಿರುವ ಹಿನ್ನೆಲೆ ಸ್ಪಷ್ಟೀಕರಣ ಕೇಳಿ ನೋಟೀಸ್ ಜಾರಿ ಮಾಡಲಾಗಿದೆ. ಇನ್ನು ಎನಿಮಲ್ ಹೆಲ್ಪ್ ಲೈನ್‌ಗೂ ಸ್ಥಳೀಯರು ದೂರು ಸಲ್ಲಿಸಿದ್ದು, ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.