ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಡಿ, 69 ಸಾವಿರಕ್ಕೂ ಹೆಚ್ಚು ಮೃತ ಫಲಾನುಭವಿಗಳ ಖಾತೆಗೆ ಸುಮಾರು ₹79.75 ಕೋಟಿ ಹಣ ಜಮೆಯಾಗಿದೆ. ಅಧಿಕಾರಿಗಳ ಎಡವಟ್ಟು ಮತ್ತು ತಾಂತ್ರಿಕ ದೋಷಗಳಿಂದಾದ ಈ ದುರ್ಬಳಕೆಯನ್ನು ಸರಿಪಡಿಸಲು ಮುಂದಾಗಿರುವ ಸರ್ಕಾರ, ಅಕ್ರಮವಾಗಿ ಪಡೆದ ಹಣ ವಾಪಸ್ ಪಡೆಯುವುದಾಗಿ ತಿಳಿಸಿದೆ.

ಕನಕಪುರ: ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆಯಲ್ಲಿ ಸುಮಾರು 69 ಸಾವಿರಕ್ಕೂ ಹೆಚ್ಚು ಮೃತ ವ್ಯಕ್ತಿಗಳ ಖಾತೆಗೆ ಅಂದಾಜು ₹79.75 ಕೋಟಿ ಹಣ ಜಮೆಯಾಗಿದ್ದು, ಅಕ್ರಮವಾಗಿ ಹಣ ಪಡೆದಿರುವವರಿಂದ ಹಣ ವಾಪಸ್ ಪಡೆಯುವುದಾಗಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ರಾಜು ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಅಂಬೇಡ್ಕರ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಶಿಶು ಕಲ್ಯಾಣ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಎಡವಟ್ಟು, ತಾಂತ್ರಿಕ ಸಮಸ್ಯೆಗಳು ಮತ್ತು ಅನರ್ಹರಿಂದ ಅಕ್ರಮ ನೋಂದಣಿ, ಯೋಜನೆ ದುರ್ಬಳಕೆಗೆ ಕಾರಣಗಳಾಗಿದ್ದು, ಇವುಗಳನ್ನು ಸರಿಪಡಿಸಲು ಸರ್ಕಾರ ಮುಂದಾಗಿದೆ. ಫಲಾನುಭವಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಹಕರಿಸುವಂತೆ ಮನವಿ ಮಾಡಿದರು.

ಗೃಹಲಕ್ಷ್ಮೀ ಯೋಜನೆ ದುರ್ಬಳಕೆ:

ಮರಣ ಹೊಂದಿದ 1.44 ಲಕ್ಷ ಫಲಾನುಭವಿಗಳ ಪೈಕಿ 68,776 ಮಂದಿ ಖಾತೆಗೆ ಹಣ ಜಮೆಯಾಗಿದೆ. ಇದನ್ನು ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದ್ದು ಈ ನಿಟ್ಟಿನಲ್ಲಿ ಗ್ರಾಮೀಣ ಜನತೆ ಯೋಜನೆ ಫಲಾನುಭವಿಗಳ ಮರಣದ ಬಗ್ಗೆ ಮಾಹಿತಿ ನೀಡುವ ಮೂಲಕ ಯೋಜನೆ ದುರ್ಬಳಕೆಗೆ ಕಡಿವಾಣ ಹಾಕಲು ಸಹಕರಿಸಬೇಕು ಹಾಗೂ ಸ್ಥಳೀಯವಾಗಿ ಅಂಗನವಾಡಿ ಕಾರ್ಯಕರ್ತೆಯರು ಈ ಬಗ್ಗೆ ಸೂಕ್ತ ಮಾಹಿತಿ ಪಡೆದು ಇಲಾಖೆಗೆ ಮಾಹಿತಿ ನೀಡುವ ಮೂಲಕ ಅಕ್ರಮ ಹಣ ಸೊರುವಿಕೆಯನ್ನು ತಡೆಗಟ್ಟಲು ಸಹಕರಿಸುವಂತೆ ಮನವಿ ಮಾಡಿದರು.

ಕೇಂದ್ರ ಸರ್ಕಾರದ ಮಾರ್ಗ ಸೂಚಿಯಂತೆ ಆದಾಯ ತೆರಿಗೆ ಪಾವತಿಸುವವರು ಮತ್ತು ಜಿಎಸ್‌ಟಿ ರಿಟರ್ನ್ಸ್ ಹಾಗೂ ಕಾರು, ಮತ್ತು ಹತ್ತು ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರ ಬಿಪಿಎಲ್ ಪಡಿತರ ಚೀಟಿಯನ್ನು ರದ್ದು ಪಡಿಸಿ ಅರ್ಹರಿಗೆ ಯೋಜನೆಯ ಲಾಭ ದೊರೆಯುವಂತೆ ಮಾಡುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಅನರ್ಹರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಅರ್ಹ ಫಲಾನುಭವಿಗಳಿಗೆ ಯೋಜನೆ ಲಾಭ ದೊರೆಯಲು ಕೆಲ ತಾಂತ್ರಿಕ ದೋಷಗಳು ಆಧಾರ್-ಬ್ಯಾಂಕ್ ಲಿಂಕ್ ಆಗದಿರುವುದು, ರೇಷನ್ ಕಾರ್ಡ್ ತಪ್ಪುಗಳು ಮತ್ತು ಇ-ಕೆವೈಸಿ (e KYC) ಕೊರತೆ ಕೆಲ ತಿಂಗಳುಗಳಿಂದ ಹಣ ಜಮೆಯಾಗದೆ ಫಲಾನುಭವಿಗಳಿಗೆ ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ದುರ್ಬಳಕೆ ತಡೆಯಲು ಸರ್ಕಾರ ಸಹಾಯವಾಣಿ ಸಂಖ್ಯೆ ''''181'''' ಅನ್ನು ಪರಿಚಯಿಸಿದೆ ಮತ್ತು ಜೀವನ ಪ್ರಮಾಣಪತ್ರದ ಜೊತೆಗೆ ಬೆರಳಚ್ಚನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದ್ದು ಅಲ್ಲಿಯವರೆಗೂ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಫಲಾನುಭವಿಗಳ ಮರಣದ ಬಗ್ಗೆ ಸ್ಪಷ್ಟ ಮಾಹಿತಿ ಕಲೆ ಹಾಕುವಂತೆ ಸೂಚಿಸಿದರು.

ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಕೆ.ಎನ್ ದಿಲೀಪ್ ಮಾತನಾಡಿ, ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಗೃಹಲಕ್ಷ್ಮಿ ಯೋಜನೆ ದುರ್ಬಳಸುತ್ತಿರುವುದು ಬೇಸರದ ಸಂಗತಿ. ತಾಲೂಕಿನಲ್ಲಿ ಸುಮಾರು 317ಕ್ಕೂ ಹೆಚ್ಚು ಅನರ್ಹರು ಫಲಾನುಭವಿಗಳ ಹೆಸರಿನಲ್ಲಿ ಯೋಜನೆ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ರಾಜ್ಯಾದ್ಯಂತ ಸುಮಾರು 79 ಕೋಟಿಯಷ್ಟು ಹಣ ದುರ್ಬಳಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ಅಕ್ರಮ ಹಣ ವಾಪಸ್ ಪಡೆಯಲಿದೆ ಎಂದು ಹೇಳಿದರು.

ಸಭೆಯಲ್ಲಿ ಗ್ಯಾರಂಟಿ ಯೋಜನೆ ಜಿಲ್ಲಾ ಉಪಾಧ್ಯಕ್ಷ ಮಾದೇಶ್, ತಾಲೂಕು ಸದಸ್ಯ ಮಹದೇವ್, ಹಾರೋಹಳ್ಳಿ ತಾಲೂಕು ಅಧ್ಯಕ್ಷ ಶಿವಮಾದಯ್ಯ, ಕನಕಪುರ ತಾಪಂ ಇಒ ಅವಿನಾಶ್, ಹಾರೋಹಳ್ಳಿ ತಾಪಂ ಇಒ ಅಪೂರ್ವ, ತಾಲೂಕು ಸಿಡಿಪಿಒ

ನಾರಾಯಣ್, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.